ಬೆಂಗಳೂರು,ಮೇ,೨೯: ಕೊರೊನಾ ಸೋಂಕಿತರ ಸಂಖ್ಯೆಯ ಮೇಲೆ ಆಧರಿಸಿ ಮುಂದಿನ ವಾರ ಲಾಕ್ಡೌನ್ ವಿಸ್ತರಣೆ ಮಾಡಬೇಕೆ ಬೇಡವೇ ಎನ್ನುವ ಕುರಿತು ಜೂನ್ ೫ ರಂದು ನಿರ್ಧಾರ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ
ಜಿಲ್ಲೆಗಳನ ಸ್ಥಿತಿಗತಿ ಕುರಿತು ಮತ್ತು ಮುಂದೆ ತಗೆದುಕೊಳ್ಳಬೇಕಾದ ಸಿದ್ದತೆಗಳ ಕುರಿತು ವಿಡಿಯೋಕಾನ್ಫರೆನ್ಸ್ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಜೂನ್ ೭ರ ವರೆಗೆ ಎಂದಿನಂತೆ ಲಾಕ್ಡೌನ್ ಇರುತ್ತದೆ. ಜೂನ್ ೭ರ ನಂತರ ಲಾಕ್ಡೌನ್ ಪ್ರಶ್ನೆ ಉದ್ಭವಿಸಲ್ಲ ಎಂದೆನಿಸುತ್ತದೆ. ಆದರೆ ರಾಜ್ಯದ ಸ್ಥಿತಿಗತಿ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ರಾಜ್ಯದ ಜನರು ಸಹಕಾರ ನೀಡಬೇಕು. ಜೂನ್ ೭ರ ವರೆಗೆ ರಾಜ್ಯದಲ್ಲಿ ಬಿಗಿ ಕ್ರಮ ಮುಂದುವರಿಯುತ್ತದೆ. ಕೊರೊನಾ ನಿಯಂತ್ರಣ ನೋಡಿಕೊಂಡು ಲಾಕ್ಡೌನ್ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಹೇಳಿದರು.
ಇದೇ ವೇಳೆ ಪಿಎಂ ಕೇರ್ಸ್ ವೆಂಟಿಲೇಟರ್ನಲ್ಲಿ ಕೆಲವೊಂದು ಸಮಸ್ಯೆಯಿದೆ. ಸಮಸ್ಯೆ ಸರಿಪಡಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಸಮಸ್ಯೆ ಸರಿಪಡಿಸಲಾಗುತ್ತದೆ ಎಂದು ಹೇಳಿದರು. ಅಂತೆಯೇ ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಲಸಿಕೆ ಪೂರೈಕೆ ಬಗ್ಗೆ ಮಾತಾಡಿದ್ದು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಲಸಿಕೆ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಕಾಳಸಂತೆಯಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಮಾರಾಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಲ್ಲೊಂದು ಇಲ್ಲೊಂದು ಮಾರಾಟ ಪ್ರಕರಣ ಕಂಡುಬರುತ್ತಿದೆ. ಕಾಳಸಂತೆಯಲ್ಲಿ ಔಷಧ ಮಾರುವವರ ವಿರುದ್ಧ ಕ್ರಮ ನಿಶ್ಚಿತ ಎಂದು ಹೇಳಿದರು.
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚು ಕೋವಿಡ್ ಪರೀಕ್ಷೆಗೆ ಸೂಚನೆ
೨ನೇ ಅಲೆಯಲ್ಲಿ ನಿರೀಕ್ಷೆಗೂ ಮೀರಿ ಕೊವಿಡ್ ಪ್ರಕರಣ ಹೆಚ್ಚಳವಾಗಿದೆ. ಈಗ ಕೊರೊನಾ ಕೇಸ್ ಕಡಿಮೆಯಾಗಿರುವುದು ನೆಮ್ಮದಿ ವಿಚಾರ. ಕೊರೊನಾ ಕಡಿಮೆಯಾಯಿತು ಎಂದು ಸುಮ್ಮನಿರುವಂತಿಲ್ಲ. ಹಳ್ಳಿಗಳಲ್ಲಿ ಹೆಚ್ಚು ಕೊವಿಡ್ ಟೆಸ್ಟ್ ಮಾಡಬೇಕು. ಕೆಲವೊಂದು ಹಳ್ಳಿಗಳಲ್ಲಿ ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ. ಅಂತಹ ಹಳ್ಳಿಗಳಿಗೆ ಕೊರೊನಾ ಹರಡದಂತೆ ನಿಗಾವಹಿಸಬೇಕು ಎಂದು ಜಿಲ್ಲಾಡಳಿತಗಳ ಜೊತೆ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಸೂಚನೆ ನೀಡಿದರು.