ಇಬ್ರಾಹಿಂ ಆದಿಲ್ಶಹನ ಪಟ್ಟದ ಮದದಾನೆ, ನೆಚ್ಚಿನ ಬಂಟ ಮಲಿಕ್ ಮುರಾದ ಖಾನ್
ಕರ್ನಾಟಕದ ಚರಿತ್ರೆಯಲ್ಲಿ ವಿಜಯಪುರದ ಆದಿಲ್ಶಾಹಿಗಳ ಪಾತ್ರ ಗಮನಾರ್ಹ. ಈ ಮನೆತನವು ಎರಡು ಶತಮಾನ(೧೬-೧೭)ಗಳ ಕಾಲ ತನ್ನ ಆಳ್ವಿಕೆಯನ್ನು ಸಮರ್ಥವಾಗಿ ನಡೆಸಿದೆ. ಈ ಮನೆತನದ ಅರಸರಲ್ಲಿ ೨ನೆಯ ಇಬ್ರಾಹಿಂ ಆದಿಲ್ಶಹನ(೧೫೮೦-೧೬೨೭) ಕಾಲ ವರ್ಣರಂಜಿತವಾದದ್ದು. ತನ್ನ ೪೭ ವರ್ಷಗಳ ಸುದೀರ್ಘ ಆಳ್ವಿಕೆಯಲ್ಲಿ ಸಾಮ್ರಾಜ್ಯವನ್ನು ವ್ಯವಸ್ಥಿತವಾಗಿ ಸುಭದ್ರಗೊಳಿಸಿದ್ದನು. ಆಡಳಿತವಲ್ಲದೆ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕವಾಗಿ ವಿಭಿನ್ನ ದೃಷ್ಟಿಕೋನವುಳ್ಳ ವ್ಯಕ್ತಿತ್ವ ಅವನದಾಗಿತ್ತು. ಇವನ ಅವಧಿಯಲ್ಲಿ ರಾಯಚೂರು ಮತ್ತು ಮುದಗಲ್ಲು ಕೋಟೆಯ ಆಡಳಿತದ ಅಭಿವೃದ್ಧಿಗೆ ವಿಶೇಷ ಆದ್ಯತೆಯನ್ನು ನೀಡಿದ್ದನು. ಅದರಲ್ಲೂ ಮುದಗಲ್ಲಿನ ಮಟ್ಟಿಗೆ ಹೇಳುವುದಾದರೆ ಪ್ರತ್ಯೇಕ ಅಧಿಕಾರಿ ನೇಮಿಸಿ, ಅವನಿಗೆ ವಿಶೇಷ ಅಧಿಕಾರ ನೀಡಿದ್ದನು. ಅವನೆಂದರೆ ಮುರಾದಖಾನ್. ಈ ವಿಶೇಷಾಧಿಕಾರಿಯ ಸಾಧನೆಗಳ ಬಗ್ಗೆ ಅಷ್ಟಾಗಿ ಅಧ್ಯಯನಗಳು ನಡೆದಿಲ್ಲವೆನ್ನಬಹುದು. ಇವನನ್ನು ಮಲಿಕ್ ಮುರಾದಖಾನ್ ಎಂದೂ ಕರೆಯಲಾಗಿದೆ. ಮಲಿಕ್ ಎಂಬುದು ಉನ್ನತ ಅಧಿಕಾರದ ಸಂಕೇತವೂ ಹೌದು. ಮುದಗಲ್ಲಿನ ಕೋಟೆಯನ್ನು ಗಮನಿಸಿದರೆ ಅತಿ ಹೆಚ್ಚು ಶಾಸನಗಳನ್ನು ಹಾಕಿಸಿ, ತನ್ನ ಹೆಸರನ್ನು ದಾಖಲಿಸಿಕೊಂಡ ಮಹಾಶೂರ ಮುರಾದಖಾನನೇ ಆಗಿದ್ದಾನೆ. ನಲವತ್ತಕ್ಕೂ ಹೆಚ್ಚು ಶಾಸನಗಳು ಇವನನ್ನು ಮತ್ತು ಇವನು ಹೊಂದಿದ್ದ ಬಿರುದುಗಳನ್ನು ಉಲ್ಲೇಖಿಸುತ್ತವೆ.
ವಿಶೇಷವೆಂದರೆ ಅವನ ಎಲ್ಲ ಶಾಸನ ಮತ್ತು ಬಿರುದುಗಳೂ ಕನ್ನಡದಲ್ಲೇ ಇರುವುದು. ಕರ್ನಾಟಕದ ಇತಿಹಾಸವನ್ನು ಅವಲೋಕಿಸಿದರೆ ಅಪರೂಪವೆನ್ನುವಂತೆ ಮುಸ್ಲಿಂ ಅರಸ-ಮಾಂಡಲಿಕರು ಕನ್ನಡದಲ್ಲಿ ಬಿರುದುಗಳನ್ನು ಹಾಕಿಸಿರುವುದು ಅಪರೂಪವೇ, ಅದೂ ಇಬ್ರಾಹಿಂ ಆದಿಲ್ಶಹ ಮತ್ತು ಅವನ ನೆಚ್ಚಿನ ಬಂಟ ಮುರಾದಖಾನನೇ ಆಗಿದ್ದಾನೆ. ಅದರಲ್ಲೂ ಕರ್ನಾಟಕದಲ್ಲೇ ಅತಿಹೆಚ್ಚು ಬಿರುದುಗಳನ್ನು ದಾಖಲಿಸಿದ ಮುಸ್ಲಿಂ ಆಡಳಿತಗಾರ ಮಲಿಕ್ ಮಜುರಾದಖಾನನೇ ಆಗಿದ್ದಾನೆ.
ಮುದಗಲ್ಲು ಕೋಟೆಯು ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನಲ್ಲಿರುವ ಕರ್ನಾಟಕದ ಅತ್ಯಂತ ಪ್ರಸಿದ್ಧ ಕೋಟೆಗಳಲ್ಲೊಂದು. ಇದು ಮಧ್ಯಯುಗೀನ ಕರ್ನಾಟಕದ ವಿಶಿಷ್ಟ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿ ಇಂದಿಗೂ ಜೀವಂತವಾಗಿದೆ. ಅದರಲ್ಲೂ ವಿಜಯನಗರ, ಬಹಮನಿ ಮತ್ತು ಆದಿಲ್ಶಾಹಿಗಳ ಆಳ್ವಿಕೆಯಲ್ಲಿ ಈ ಕೋಟೆಯು ರಾಜಕೀಯ ಚಟುವಟಿಕೆಗಳ ಗಮನಾರ್ಹ ತಾಣವೇ ಆಗಿತ್ತು. ಇದೇ ಬಗೆಯ ಇನ್ನೊಂದು ತಾಣವೆಂದರೆ ಅದು ರಾಯಚೂರು ಕೋಟೆಯಾಗಿದೆ. ಇವೆರಡೂ ಕೋಟೆಗಳು ಭೌಗೋಳಿಕವಾಗಿ ನೆಲೆಗೊಂಡಿರುವುದು ತುಂಗಭದ್ರಾ ಮತ್ತು ಕೃಷ್ಣಾ ನದಿಗಳ ಮಧ್ಯದ ಭೂಭಾಗದಲ್ಲಿ. ಇದು ದೋಅಬ್ ಪ್ರದೇಶವೆಂದೇ ಪ್ರಸಿದ್ಧಿ. ಈ ಪ್ರದೇಶವು ಅತ್ಯಂತ ಫಲವತ್ತಾದ ಹಾಗೂ ಸಮೃದ್ಧ ಫಸಲನ್ನು ಬೆಳೆಯುವ ಸಂಪದ್ಭರಿತ ನಾಡಾಗಿತ್ತು.
ಈ ದೋಅಬ್ ಪ್ರದೇಶದ ಹಿಡಿತಕ್ಕಾಗಿ ವಿಜಯನಗರ ಮತ್ತು ಬಹಮನಿಯವರಿಗೆ, ನಂತರ ವಿಜಯನಗರ ಮತ್ತು ಆದಿಲ್ಶಾಹಿಗಳಿಗೆ ನಿರಂತರ ಯುದ್ಧಗಳು ನಡೆದಿವೆ. ದಾಖಲೆಗಳ ಪ್ರಕಾರ ಸುಮಾರು ಇಪ್ಪತ್ತಕ್ಕೂ ಹೆಚ್ಚು ಯುದ್ಧಗಳು ಈ ಪ್ರದೇಶಕ್ಕಾಗಿಯೇ ನಡೆದಿವೆ ಎಂದರೆ ಈ ಭೂಭಾಗದ ಮಹತ್ವ ಎಷ್ಟೆಂಬುದರ ಅರಿವಾಗುತ್ತದೆ. ಮುದಗಲ್ಲು ಮತ್ತು ರಾಯಚೂರುಗಳೇ ದೋಅಬ್ ಪ್ರದೇಶದ ಬಹುಮುಖ್ಯ ಕೇಂದ್ರಗಳು. ಇವು ಎಷ್ಟರಮಟ್ಟಿಗೆ ಪ್ರಾಮುಖ್ಯತೆ ಹೊಂದಿದ್ದವೆಂದರೆ, ಈ ಕೋಟೆಗಳು ಯಾರ ಹಿಡಿತಕ್ಕೆ ಒಳಪಡುತ್ತಿದ್ದವೋ ಇಡೀ ದೋಅಬ್ ಪ್ರದೇಶ ಅವರದೇ ಆಗಿರುತ್ತಿತ್ತು. ಒಂದನೇ ದೇವರಾಯ ಈ ಕೋಟೆಗಾಗಿ ನಡೆಸಿದ ಯುದ್ಧದಲ್ಲಿ ಸೋತು ಓಡಿಹೋದದ್ದನ್ನು ಪ್ರವಾಸಿ ವರದಿಗಳು ದಾಖಲಿಸಿವೆ. ಕೃಷ್ಣದೇವರಾಯ ಮತ್ತು ರಾಮರಾಯರವರೆಗೂ ವಿಜಯನಗರಕ್ಕೆ ವಶದಲ್ಲಿದ್ದ ಮುದಗಲ್ಲಿನ ಕೋಟೆಯಲ್ಲಿ ಹಾಕಿಸಿದ ಶಾಸನಗಳು ಕೋಟೆಯ ಚಟುವಟಿಕೆಯನ್ನು ದಾಖಲಿಸಿವೆ. ೧೫೬೫ರ ಯುದ್ಧದಲ್ಲಿ ವಿಜಯನಗರ ಸೋತ ನಂತರ ಮುದಗಲ್ಲು ಕೋಟೆ ಆದಿಲ್ಶಾಹಿಗಳ ಕೈಸೇರಿತು. ಈ ಕೋಟೆಯ ನಿರ್ಮಾಣದಲ್ಲಿ ಮೂರು ರಾಜ್ಯಗಳ ಅರಸರ ಕೊಡುಗೆಯಿದೆ. ಮುಂದೆ ೨ನೇ ಇಬ್ರಾಹಿಂ ಆದಿಲ್ಶಹನ ಕಾಲದಲ್ಲಿ ಈ ಕೋಟೆಗೆ ವಿಶೇಷ ಕಳೆ ಬಂದಿತು. ಈಗಿರುವ ಕೋಟೆಯ ಹೊರಗೋಡೆಯು ಅವನ ಕಾಲದ ಕೊಡುಗೆಯಾಗಿದೆ. ಅದರಲ್ಲೂ ಈ ಕೋಟೆಯ ನಿರ್ಮಾಣದಲ್ಲಿ ೨ನೇ ಇಬ್ರಾಹಿಂ ಆದಿಲ್ಶಹನ ಭುಜಪ್ರತಾಪ, ಭಂಟನಾದ ಮಲಿಕ್ ಮುರಾದಖಾನನ ಕೊಡುಗೆ ಅತ್ಯಂತ ಪ್ರಮುಖವಾಗಿದೆ. ಈ ಕೋಟೆಯ ಗೋಡೆ, ಅನೇಕ ಬುರುಜು, ಬತೇರಿ, ಅಗಸಿ, ನಿಟು, ದಿಡ್ಡಿಗಳನ್ನು ಅವನು ನಿರ್ಮಿಸಿದನೆನ್ನುವುದಕ್ಕೆ ಅವುಗಳ ಮೇಲೆ ಹಾಕಿಸಿದ ಶಾಸನಗಳೇ ಸಾಕ್ಷಿ. ಅವೆಲ್ಲವುಗಳ ಮೇಲೆಯೂ ತನ್ನ ಹೆಸರಲ್ಲದೆ, ತಾನು ಹೊಂದಿದ್ದ ಬಿರುದು ನಮೂದಿಸುವುದನ್ನು ತಪ್ಪಿಸಲಿಲ್ಲ. ಮುರಾದಖಾನನ ಬಿರುದುಗಳೋ ರೋಮಾಂಚನಗೊಳಿಸಿ ಮೈಪುಳಕಗೊಳಿಸುವಂತಹವು. ಅವುಗಳಲ್ಲಿ ಒಂದೂ ಶಾಹಿ ಸುಲ್ತಾನರ ಪರ್ಶಿಯ, ಉರ್ದು ಭಾಷೆಯವಲ್ಲ, ಅವೆಲ್ಲವೂ ಅಚ್ಚ ಕನ್ನಡದವು. ಈಗಾಗಲೇ ಕನ್ನಡ ನಾಡಿನಲ್ಲಿ ಆಳಿಹೋದ ಅರಸ, ಮಾಂಡಲಿಕರು ಧರಿಸಿದ ಶೌರ್ಯ, ಪರಾಕ್ರಮದ ಬಿರುದುಗಳನ್ನೇ ನೆನಪಿಸುತ್ತವೆ. ಈ ಬಿರುದುಗಳನ್ನು ಗಮನಿಸಿದರೆ ಅವನ ಅಧಿಕಾರ, ಶಕ್ತಿ, ಸಾಮರ್ಥ್ಯ, ಶೌರ್ಯಗಳು ವ್ಯಕ್ತವಾಗುತ್ತವೆ.
ಅವನ ಬಿರುದುಗಳೆಂದರೆ ಅರಿಗಳ ವಿಭಾಡ, ಅರಿಗಳ ಹೃದಯಶೂಲ, ಅರಿರಾಯ ಮಾನಮರ್ದನ, ಆಡಿತಪ್ಪುವವರ ಮಿಂಡ, ಏಕಾಂಗಿವೀರ, ಗಡಿನಾಡ ಕೆಂಪುಹೆಬ್ಬುಲಿ, ಚಹಡವಕೇಳುವ ದೊರೆಗಳ/ವಜೀರರ ಗಂಡ, ಚಾವಡಿಕೊಂಡರ ಗಂಡ, ಪರದಳ ಕಾಲಭೈರವ, ಪರಬಲ ಭಯಂಕರ, ಬತ್ತೀಸಾಯುಧ ಶೂರ, ಇಬ್ರಾಹಿಮ ಯೆದಿಲಶಾಹನ ಭುಜಪ್ರತಾಪ, ಇಬ್ರಾಹಿಂ ಯೆದಿಲಶಹನ ಪಟ್ಟದ ಮದದಾನೆ, ಯೆದಿಲಶಹನ ನೆಚ್ಚಿನ ಬಂಟ, ರಣಜಯಧೀರ, ರಣರಂಗಧೀರ, ಸಾಹಸಧೀರ, ಸಾಹಸಭೀಮ, ಸ್ವಾಮಿದ್ರೋಹರ ಗಂಡ, ಹಂಡರಸರ ಗಂಡ, ಹಲಾಲಖೋರ-ಹೀಗೆ ವಿಶಿಷ್ಟ ಬಗೆಯ ಬಿರುದುಗಳನ್ನು ಮಲಿಕ್ ಮುರಾದ್ಖಾನ್ ಹೊಂದಿದ್ದನು. ಇವುಗಳನ್ನು ತಾನು ಕಟ್ಟಿಸಿದ ಪ್ರತಿಯೊಂದು ನಿರ್ಮಿತಿಗಳಲ್ಲಿ ತನ್ನ ಹೆಸರಿನೊಂದಿಗೆ ಅಚ್ಚೊತ್ತಿರುವುದು ವಿಶೇಷ. ಇಂತಹ ಅಪ್ರತಿಮ ಸಾಹಸಿಯ ಇತಿಹಾಸವು ಸರಿಯಾಗಿ ದಾಖಲಾಗದಿರುವುದು ವಿಷಾದನೀಯ. ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಅಗತ್ಯವಿದೆ. ಬಿರುದಾವಳಿಗಳಲ್ಲದೆ ಅಂದಿನ ಬಿಜಾಪುರ ನಗರದಲ್ಲಿ ಒಂದು ಬೀದಿಗೆ ಇವನ ಹೆಸರನ್ನು ಇಡಲಾಗಿತ್ತು. ಅದನ್ನು ಮುರಾದಖಾನ್ ಬಜಾರ್ ಕರೆಯಲಾಗುತ್ತಿತ್ತು. ಅದು ಇಂದಿಗೂ ಜನಮಾನಸದಲ್ಲಿರುವುದು ಗಮನಾರ್ಹ. ಇದರಿಂದ ಮರಾದಖಾನನು ಎಷ್ಟೊಂದು ಪ್ರಭಾವಿಯಾಗಿದ್ದ ಎಂಬುದು ಅರ್ಥವಾಗುತ್ತದೆ. ಮಾತ್ರವಲ್ಲ, ಇವನು ಇಬ್ರಾಹಿಂ ಆದಿಲ್ಶಹನ ಪರಮಾಪ್ತ ಎಂಬುದಕ್ಕೆ ಅವನು ಹೊಂದಿದ್ದ ಬಿರುದುಗಳಾದ ‘ಇಬ್ರಾಹಿಂ ಆದಿಲ್ಶಹನ ಪಟ್ಟದ ಮದದಾನೆ’, ‘ಇಬ್ರಾಹಿಂ ಆದಿಲ್ಶಹನ ಭುಜಪ್ರತಾಪ’ ‘ಇಬ್ರಾಹಿಂ ಆದಿಲ್ಶಹನ ಭಂಟ’ ಎಂಬುದರಿಂದ ತಿಳಿಯುವುದು. ಅಲ್ಲದೆ ಶಸ್ತ್ರ ವಿದ್ಯೆಯಲ್ಲಿ ಅವನು ಪರಿಣತಿ ಹೊಂದಿ ಪರಾಕ್ರಮಿಯಾಗಿದ್ದುದು ಬತ್ತೀಸಾಯುಧ ಶೂರ, ಅರಿಗಳ ವಿಭಾಡ, ಹೃದಯ ಶೂಲ, ಮಾನಮರ್ಧನ, ಏಕಾಂಗಿವೀರ ಬಿರುದುಗಳಿಂದ ಸ್ಪಷ್ಟವಾಗುತ್ತದೆ.

ಅಲ್ಲದೆ ತನ್ನನ್ನು ಗಡಿನಾಡ ಕೆಂಪು ಹೆಬ್ಬುಲಿ ಎಂದೂ ಕರೆದುಕೊಂಡಿದ್ದಾನೆ. ರಾಜ್ಯದ ಗಡಿಯಾದ ಮುದಗಲ್ಲನ್ನು ನೋಡಿಕೊಳ್ಳುತ್ತಿದ್ದು, ದೈಹಿಕವಾಗಿ ಮುರಾದಖಾನ್ ಕೆಂಪಗಿದ್ದನು. ಹಾಗೆಯೇ ರಣರಂಗಧೀರ, ರಣಜಯಧೀರ, ಸಾಹಸಧೀರಗಳು ಅವನ ಶೌರ್ಯ, ಪರಾಕ್ರಮಗಳನ್ನು ಸಾರುತ್ತವೆ. ಅಂದಿನ ರಾಜಕೀಯ ವಿದ್ಯಮಾನಗಳಲ್ಲಿ ಸ್ವಾಮಿದ್ರೋಹ ಎಸಗುವ ಮತ್ತು ಚಾಡಿಹೇಳುವ ಹಾಗೂ ಕೇಳುವವರಿಗೆ ಗಂಡನೆಂದೂ, ತನ್ನ ಸ್ವಾಮಿನಿಷ್ಟೆಯಿಂದ ಹಲಾಲಕೋರನೆಂದೂ ಕರೆದುಕೊಂಡಿದ್ದಾನೆ. ಮುರಾದಖಾನನು ಕಟ್ಟಿಸಿದ್ದ ಬಾವಿಯೊಂದನ್ನು ಇಂದಿಗೂ ಹಲಾಲಕೋರ ಬಾವಿಯೆಂದೇ ಇಂದಿಗೂ ಕರೆಯುತ್ತಿರುವುದು ಗಮನಾರ್ಹ. ಶತ್ರು ಸೈನ್ಯಕ್ಕೆ ಭಯಂಕರನಾದ ಕಾಲಭೈರವ, ಸಾಹಸಭೀಮನಾಗಿದ್ದನೆಂದು ಹೇಳುತ್ತವೆ. ಇಲ್ಲಿನ ಬಿರುದುಗಳನ್ನು ನೋಡಿದರೆ ಭೀಮ, ಭೈರವನ ಉಲ್ಲೇಖಗಳು ಅಚ್ಚರಿ ತರುತ್ತವೆ. ಜೊತೆಗೆ ಅಂದಿನ ಆಶಯವೇನೆಂಬುದನ್ನು ತಿಳಿಸುತ್ತವೆ. ಈ ಎಲ್ಲ ಕನ್ನಡದ ಬಿರುದುಗಳನ್ನು ಕನ್ನಡ ಲಿಪಿಯಲ್ಲಿ ಕೊರೆಸಿರುವುದು ವಿಶೇಷ. ಅಂದರೆ ಇದರಿಂದ ಶಾಸನ ಮತ್ತು ಬಿರುದುಗಳನ್ನು ದಾಖಲಿಸುವಲ್ಲಿ ಅವನೊಂದಿಗೆ ಇದ್ದ ಕನ್ನಡಬಲ್ಲ ಅಧಿಕಾರಿ, ಕುಶಲಕರ್ಮಿಗಳ ಪಾತ್ರವೇನೂ ಕಡಿಮೆಯಲ್ಲವೆಂಬುದನ್ನು ಗಮನಿಸಬೇಕು.
ಮುದಗಲ್ಲು ಕೋಟೆಯಲ್ಲಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾಗಿದ್ದ ಬುರುಜು ಬತೇರಿ, ಅಗಸೆಗಳ ಉಲ್ಲೇಖಗಳೂ ಇವೆ. ಅವುಗಳಲ್ಲಿ ಉದಯಗಿರಿ ಬಸವರಾಜ ಕಟ್ಟಿಸಿದ ಕೊತ್ತಳ, ಸಾಳುವ ತಿಮ್ಮಯ್ಯನ ಕೊತ್ತಳ, ವೆಂಗಳಪ್ಪನಾಯಕರ ಕದ ಮತ್ತು ಮೊಗಸಾಲೆ(೧೫೬೦), ಷೇಖ್ಪರೀದ್ನಾಯಕನ ತುಪಾಕಿ, ಬಸವನ ನಿಟು, ಬಸವನ ದಿಡ್ಡಿ, ಬಸವನ ಕೊತ್ತಳ ವಿನಾಯಕನ ನಿಟು, ವಿನಾಯಕನ ದಿಡ್ಡಿಗಳ ಉಲ್ಲೇಖಗಳು ಶಾಸನಗಳಲ್ಲಿವೆ. ಇವೆಲ್ಲವೂ ಮುದಗಲ್ಲು ಕೋಟೆಯ ನಿರ್ಮಾಣದ ಚರಿತ್ರೆಯನ್ನು ಸ್ತತಃ ಅರುಹುತ್ತವೆ.
ಒಟ್ಟಿನಲ್ಲಿ ಮುದಗಲ್ಲು ಕೋಟೆ, ಅಲ್ಲಿನ ಶಾಸನ ಮತ್ತಿತರ ಸಂಗತಿಗಳನ್ನು ನೋಡಿದರೆ ಮುರಾದಖಾನನೇ ಹೆಚ್ಚು ಹೆಚ್ಚು ದಾಖಲಾಗಿದ್ದಾನೆ. ಇದರಿಂದ ೨ನೇ ಇಬ್ರಾಹಿಂ ಆದಿಲ್ಶಹನ ಆಡಳಿತದಲ್ಲಿ ಮುರಾದಖಾನನ ಪಾತ್ರ ಬಹಳ ಮುಖ್ಯವಾಗಿದ್ದುದು ಸ್ಪಷ್ಟವಾಗುತ್ತದೆ. ಅಲ್ಲದೆ ಇವನನ್ನು ಮಲಿಕ್ ಮುರಾದಖಾನ್ ಎಂದೇ ಕರೆದಿರುವುದರಿಂದ ಪ್ರಧಾನ ಅಧಿಕಾರಿಯಾಗಿದ್ದನೆಂಬುದಂತೂ ಸ್ಪಷ್ಟ.
ಅಲ್ಲದೆ ಮುರಾದಖಾನ್ ತಾನು ಇಬ್ರಾಹಿಂ ಯೆದಿಲಶಾಹನ ಭುಜಪ್ರತಾಪ, ಇಬ್ರಾಹಿಂ ಯೆದಿಲಶಹನ ಪಟ್ಟದ ಮದದಾನೆ, ಯೆದಿಲಶಹನ ನೆಚ್ಚಿನ ಬಂಟ, ಯೆದಿಲಶಹನ ಹಲಾಲಕೋರ ಎಂದೂ ಹೇಳಿಕೊಂಡಿದ್ದಾನೆ. ಇದರಿಂದ ಇಬ್ರಾಹಿಂ ಆದಿಲ್ಶಹನೊಂದಿಗೆ ಮುರಾದಖಾನನಿಗೆ ಇದ್ದ ಆಪ್ತತೆ, ನಿಷ್ಟೆ, ಶಕ್ತಿ ಸಾಮರ್ಥ್ಯ ಎಷ್ಟೆಂಬುದು ದೃಢವಾಗುತ್ತದೆ. ಅಲ್ಲದೆ ಇಷ್ಟೆಲ್ಲಾ ಬಿರುದು ಮತ್ತು ಮುದಗಲ್ಲಿನ ಕೋಟೆ ನಿರ್ಮಾಣ ಮತ್ತು ಶಾಸನಗಳನ್ನು ಅಧಿಕಾರದಿಂದ ಹಾಕಿಸಿಕೊಳ್ಳುವ ಮಟ್ಟಿಗೆ ಬೆಳೆದ ಮುರಾದಖಾನನ ಪರಿಯನ್ನು ನೋಡಿದರೆ ಅವನಿಗೆ ಸುಲ್ತಾನನು ನೀಡಿದ್ದ ಅಧಿಕಾರದ ವ್ಯಾಪ್ತಿ ಎಷ್ಟಿತ್ತೆಂಬುದನ್ನು ಗಮನಿಸಬೇಕು.