-ಸನತ್ ಕುಮಾರ ಬೆಳಗಲಿ
ಮತಾಂತರ ನಿಷೇಧ ಎಂಬ ವಿಭಜನಕಾರಿ ರಾಜಕೀಯ
ಕೇಂದ್ರದಲ್ಲಿ ಕಳೆದ ಏಳು ವರ್ಷಗಳಿಂದ ಅಧಿಕಾರದಲ್ಲಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ತನ್ನ ವೈಫಲ್ಯ ಮುಚ್ಚಿ ಕೊಳ್ಳಲು ಭಾರತೀಯರನ್ನು ಕೋಮು ಆಧಾರದಲ್ಲಿ ವಿಭಜಿಸುವದು ಅನಿವಾರ್ಯವಾಗಿದೆ.೨೦೨೩ ರ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬರಲು ಅದು ಮಸಲತ್ತು ನಡೆಸಿದೆ.
ಕರ್ನಾಟಕದಲ್ಲಿ ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಗೂ ತನ್ನ ಹಗರಣಗಳನ್ನು ಮುಚ್ಚಿ ಕೊಳ್ಳಲು ಜನರನ್ನು ಜಾತಿ ,ಮತದ ಹೆಸರಿನಲ್ಲಿ ವಿಭಜಿಸಬೇಕಾಗಿದೆ.ಅದಕ್ಕಾಗಿ ಮತಾಂತರ ನಿಷೇಧ ಮಸೂದೆಯನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ತರಲು ಹೊರಟಿದೆ.
ಈ ಸಲದ ವಿಧಾನ ಮಂಡಲ ಕಲಾಪದಲ್ಲಿ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳಬೇಕಾದ ಹಲವಾರು ಜ್ವಲಂತ ಪ್ರಶ್ನೆಗಳಿವೆ.ರಾಜ್ಯದಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಈ ಬಾರಿ ಅತಿವ್ರಷ್ಟಿಯಿಂದಾಗಿ ರೈತರ ಬೆಳೆಗಳು ಕೈಗೆ ಬರಲಿಲ್ಲ. ಮುಂಗಾರಿನ ಬೆಳೆ ನಷ್ಟ ಪರಿಹಾರವೂ ರೈತರ ಕೈ ಸೇರಿಲ್ಲ.ಕೋವಿಡ್ ಪರಿಣಾಮವಾಗಿ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚಿ ನಿರುದ್ಯೋಗ ವ್ಯಾಪಕ ಸ್ವರೂಪ ಪಡೆದಿದೆ.ಉತ್ತರ ಕರ್ನಾಟಕ ಭಾಗದ ಇನ್ನು ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರ ಉತ್ತರ ನೀಡಬೇಕಾಗಿದೆ.ಆದರೆ ಈ ಸರ್ಕಾರಕ್ಕೆ ಇದೆಲ್ಲದರಕಿಂತ ಮತಾಂತರ ಸಮಸ್ಯೆ ಮುಖ್ಯವಾಗಿದೆ.
ಸರ್ಕಾರ ದಿಢೀರನೇ ಮತಾಂತರ ಮಸೂದೆ ಮಂಡಿಸಲು ಅದರದೇ ಆದ ಕಾರಣವಿದೆ.ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇಕಡಾ ೪೦ ರಷ್ಟು ಲಂಚ ,ಪ್ರಭಾವಿ ರಾಜಕಾರಣಿಗಳ ಮಕ್ಕಳು ಮತ್ತು ಹಿರಿಯ ಅಧಿಕಾರಿಗಳು ಭಾಗಿಯಾಗಿರುವರೆನ್ನಲಾದ ಬಿಟ್ ಕಾಯಿನ್ ಹಗರಣಗಳನ್ನು ಪ್ರಸ್ತಾಪಿಸಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಸಜ್ಜಾಗಿರುವ ಪ್ರತಿಪಕ್ಷ ಗಳ ದಾಳಿಯ ಭಯದಿಂದ ದಿಗಿಲಗೊಂಡ ಸರಕಾರ ಮತಾಂತರ ಮಸೂದೆ ಮಂಡಿಸಿ ಚರ್ಚೆಯ ದಿಕ್ಕನ್ನೇ ಬದಲಿಸಲು ಮಸಲತ್ತು ನಡೆಸಿದಂತೆ ಕಾಣುತ್ತದೆ.
ರಾಜ್ಯ ಸರ್ಕಾರ ಇಷ್ಟು ತರಾತುರಿಯಿಂದ ಯಾಕೆ ಮತಾಂತರ ನಿಷೇಧ ಕಾನೂನನ್ನು ಮಾಡಲು ಹೊರಟಿದೆ ಅರ್ಥವಾಗುತ್ತಿಲ್ಲ. ಇಂಥ ಮಸೂದೆ ಮಂಡಿಸುವ ಮುನ್ನ ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಲ್ಲಿ ಈ ವರಗೆ ಎಷ್ಟು ಜನ ಮತಾಂತರ ಆಗಿದ್ದಾರೆ? ಯಾವಾಗ ಆಗಿದ್ದಾರೆ.ಕ್ರೈಸ್ತರು ಹಾಗೂ ಮುಸಲ್ಮಾನರ ಸಂಖ್ಯೆ ನೀವು ಅಧಿಕಾರಕ್ಕೆ ಬರುವ ಮುನ್ನ ಎಷ್ಟಿತ್ತು? ಈಗ ಎಷ್ಟು ಹೆಚ್ಚಾಗಿದೆ! ಈ ವಿವರಗಳನ್ನು ಮುಖ್ಯ ಮಂತ್ರಿಗಳು ಸದನದ ಮುಂದೆ ಲಿಖಿತವಾಗಿ ಮಾಡಿಸಬೇಕು..ಈ ವಿವರಗಳನ್ನು ನೀಡದೇ ಒಂದು ಶಾಸನವನ್ನು ಅಂತೆ ಕಂತೆಗಳ ತರಲು ಮಾಡಲು ಆಗುವದಿಲ್ಲ.ಅಷ್ಟೇ ಅಲ್ಲದೇ ಸರಕಾರ ತರಲಿರುವ ಕಾನೂನು ಸಂವಿಧಾನದಾತ್ಮಕವೇ ಎಂಬುದನ್ನು ನಿಮ್ಮ ಕಾನೂನು ಪರಿಣಿತರನ್ನು ವಿಚಾರಿಸುವದು ಸೂಕ್ತ.ಪ್ರತಿಪಕ್ಷ ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಇಂಥ ಕಸರತ್ತು ನಡೆಸುವದರಲ್ಲಿ ಅರ್ಥವಿಲ್ಲ.
ಸರಕಾರದ ವಿವಿಧ ಇಲಾಖೆಗಳು ಮತ್ತು ಸಂಸ್ಥೆಗಳು ಕೈಗೊಳ್ಳುವ ಕಾಮಗಾರಿಗಳ ಗುತ್ತಿಗೆಗೆ ನಡೆಯುವ ಟೆಂಡರ್ ಸಮಯದಲ್ಲಿ ಮತ್ತು ಬಿಲ್ ಪಾವತಿ ವೇಳೆಯಲ್ಲಿ ನಡೆಯುವ ಭ್ರಷ್ಟಾಚಾರದ ಬಗ್ಗೆ ಗುತ್ತಿಗೆದಾರರ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಹಗುರಾಗಿ ಪರಿಗಣಿಸುವಂತಿಲ್ಲ.ರಾಜ್ಯದಲ್ಲಿ ಕಾಮಗಾರಿಗಳಿಗಾಗಿ ಸರ್ಕಾರದಿಂದ ಬಿಡುಗಡೆ ಯಾಗುವ ಹಣದಲ್ಲಿ ಶೇಕಡಾ ೪೦ ರಷ್ಟು ಲಂಚದ ರೂಪದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಕಿಸೆಯನ್ನು ಸೇರುತ್ತಿದೆ ಎಂದು ಗುತ್ತಿಗೆದಾರರು ಮಾಡಿದ ಆರೋಪಕ್ಕೆ ಉತ್ತರ ನೀಡದೇ ಸರ್ಕಾರ ಪಲಾಯನ ಮಾರ್ಗವನ್ನು ಅನುಸರಿಸಬಾರದು.
ಭ್ರಷ್ಟಾಚಾರದ ಬಗ್ಗೆ ಪ್ರಧಾನಿಗೆ ಮಾತ್ರವಲ್ಲ ರಾಜ್ಯಪಾಲರು,ಮುಖ್ಯಮಂತ್ರಿ ಗಳಿಗೂ ಗುತ್ತಿಗೆದಾರರ ಸಂಘ ಪತ್ರ ಬರೆದಿದೆ.ರಾಜ್ಯದ ಕೆಲವು ಮಂತ್ರಿಗಳು ಲಂಚದ ಹಣ ತಲುಪಿದ ಬಳಿಕವೆ ಟೆಂಡರ್ ಗೆ ಅನುಮತಿ ನೀಡುತ್ತಾರೆ ಎಂಬ ಗುತ್ತಿಗೆದಾರರ ಆರೋಪವನ್ನು ತಳ್ಳಿ ಹಾಕುವಂತಿಲ್ಲ.ಯಾವುದೇ ಕಾಮಗಾರಿ ಅನುಷ್ಠಾನ ಸಂದರ್ಭದಲ್ಲಿ ನೇರ ಜವಾಬ್ದಾರಿ ಹೊಂದಿರುವ ಕಿರಿಯ ಇಂಜನಿಯರಗಳಿಂದ ಹಿಡಿದು ಆಯಾ ಇಲಾಖೆಯ ಹೊಣೆ ಹೊತ್ತಿರುವ ಮಂತ್ರಿಗಳ ವರೆಗೆ ಎಲ್ಲರೂ ಲಂಚಕ್ಕಾಗಿ ಕಿರಿ ಕಿರಿ ಮಾಡುತ್ತಾರೆವ ಎಂಬ ಆರೋಪದ ಬಗ್ಗೆ ಸರಕಾರ ಈ ವರೆಗೆ ಸ್ಪಷ್ಟವಾದ ಉತ್ತರ ನೀಡಿಲ್ಲ. ಸರಕಾರಿ ಕಾಮಗಾರಿಗಳಲ್ಲಿ ಈ ಪರಿ ಲಂಚದ ಹಾವಳಿ ಇದ್ದರೆ ಗುಣಮಟ್ಟದ ಕಾಮಗಾರಿ ಸಾಧ್ಯವಾಗುವುದಿಲ್ಲ. ಸರ್ಕಾರಿ ಕಾಮಗಾರಿಗಳ ಲ್ಲಿ ಲಂಚದ ಆರೋಪ ಹೊಸದಲ್ಲ.ಆದರೆ ಈಗ ಗುತ್ತಿಗೆದಾರರ ಸಂಘ ಮಾಡಿರುವ ಆರೋಪ ಅತ್ಯಂತ ಗಂಭೀರವಾಗಿರುವದರಿಂದ ಸದನದಲ್ಲಿ ಸರಕಾರ ಈ ಕುರಿತು ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೆ ಸಾರ್ವಜನಿಕರಲ್ಲಿ ಮೂಡಿರುವ ಸಂದೇಹ ನಿವಾರಣೆಯಾಗುವದಿಲ್ಲ.
ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದ ಅವಧಿ ಹತ್ತು ದಿನ.ಹತ್ತು ದಿನಗಳ ಈ ಅಧಿವೇಶನ ದ ಕಲಾಪ ವಾಗ್ವಾದ,ಕಲಹ,ಸಭಾತ್ಯಾಗದಲ್ಲಿ ವ್ಯರ್ಥವಾಗಬಾರದು.ರಾಜಕೀಯ ಕಾರಣಗಳಿಗಾಗಿ ಮಂಡಿಸಬೇಕೆಂದಿರುವ ಮತಾಂತರ ನಿಷೇಧ ಮಸೂದೆಯನ್ನು ಸರಕಾರ ಕೈ ಬಿಡಬೇಕು. ” ಈ ಮಸೂದೆಯಿಂದ ಕ್ರೈಸ್ತರು ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.ಆದರೆ ಅತ್ಯಂತ ಅಲ್ಪಸಂಖ್ಯಾತ ರಾದ ಕ್ರೈಸ್ತರ ಮೇಲೆ ಕೋಮುವಾದಿ ಸಂಘಟನೆಗಳ ಪುಂಡರು ಅಲ್ಲಲ್ಲಿ ಮತಾಂತರದ ನೆಪ ಮುಂದೆ ಮಾಡಿ ದಾಳಿ ನಡೆಸಿದ್ದಾರೆ.ಬೆಳಗಾವಿಯಲ್ಲಿ ಕ್ರೈಸ್ತ ಧರ್ಮ ಗುರುವೊಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಕೆಲವು ಕಡೆ ಚರ್ಚ್ ಗಳಲ್ಲಿ ಪ್ರಾರ್ಥನೆಗೆ ಅಡ್ಡಿಯುಂಟು ಮಾಡುವ ಘಟನೆಗಳೂ ನಡೆದಿದೆ.ಸಂಘಪರಿವಾರದ ದೃಷ್ಟಿ ಯಿಂದ ಮತಾಂತರ ಎಂಬುದು ಅಸಹನೀಯ ವಾಗಿರಬಹುದು.ಆದರೆ ಸಂವಿಧಾನದ ಪ್ರಕಾರ ಅದು ಅಪರಾಧವಲ್ಲ.ಭಾರತದ ನಾಗರಿಕ ತನಗೆ ಇಷ್ಟ ಬಂದ ಧರ್ಮವನ್ನು ಸೇರುವ ಅವಕಾಶ ಕಾನೂನಿನಲ್ಲಿದೆ.ಬಡತನವನ್ನು ಬಳಸಿಕೊಂಡು ಆಮಿಷವೊಡ್ಡಿ ಮತಾಂತರ ಮಾಡಲಾಗುತ್ತಿದೆ ಎಂಬ ಕೋಮುವಾದಿ ಸಂಘಟನೆಗಳ ಆರೋಪದಲ್ಲಿ ಹುರುಳಿಲ್ಲ.ಸಾಕ್ಷ್ಯಾಧಾರವಿಲ್ಲದೇ ಯಾರದೋ ಆರೋಪದ ಮೇಲೆ ಸರ್ಕಾರ ಸಂವಿಧಾನದ ಆಶಯಗಳಿಗೆ ವ್ಯತಿರಿಕ್ತವಾದ ಕಾನೂನು ತರುವ ವ್ಯರ್ಥ ಕಸರತ್ತು ಮಾಡಬಾರದು.ಇದರಿಂದ ಬಿಜೆಪಿ ಗೆ ತಾತ್ಕಾಲಿಕವಾಗಿ ರಾಜಕೀಯ ಲಾಭ ಸಿಗಬಹುದು .ಆದರೆ ಭಾರತದ ಏಕತೆ ಮತ್ತು ಸಮಗ್ರತೆ ದೃಷ್ಟಿಯಿಂದ ಇದು ಸರಿಯಲ್ಲ. ಸರ್ಕಾರ ಸದನದಲ್ಲಿ ಪ್ರತಿಪಕ್ಷ ಗಳ ವಾಗ್ದಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಮಾಜಿಕ ಶಾಂತಿಯನ್ನು ಕದಡುವ ಶಕ್ತಿಗಳಿಗೆ ಪೂರಕವಾಗುವಂತೆ ನಡೆದುಕೊಳ್ಳುವದು ಸರಿಯಲ್ಲ. ಈಗಲೂ ಕಾಲ ಮಿಂಚಿಲ್ಲ .ಸರಕಾರ ಮಂಡಿಸಬೇಕೆಂದಿರುವ ಮತಾಂತರ ನಿಷೇಧ ಮಸೂದೆಯನ್ನು ವಾಪಸ್ಸು ಪಡೆಯಬೇಕು. ಬೆಳಗಾವಿಯ ವಿಧಾನ ಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿಶೇಷವಾಗಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ರೂಪಿಸಲು ಮುಂದಾಗಲಿ.ಇನ್ನು ಮುಖ್ಯವಾದ ಅಂಶವೆಂದರೆ ಬೆಳಗಾವಿ ಯ ಸುವರ್ಣ ವಿಧಾನ ಸೌಧದಲ್ಲಿ ವರ್ಷಕ್ಕೊಮ್ಮೆ ವಿಧಾನ ಮಂಡಲದ ಉಭಯ ಸದನಗಳ ಕಲಾಪ ನಡೆಸುವುದನ್ನು ಬಿಟ್ಟರೆ ಬೇರೆ ಯಾವುದಕ್ಕೂ ಇದನ್ನು ಸದುಪಯೋಗ ಮಾಡಿಕೊಳ್ಳದೇ ಹಾಳು ಗೆಡವಲಾಗಿದೆ.ಕಾರಣ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಬೆಂಗಳೂರಿನಲ್ಲಿ ಇರುವ ಏಳು ಇಲಾಖೆಗಳ ಕಚೇರಿಗಳನ್ನು ಬೆಳಗಾವಿಯ ಸುವರ್ಣ ವಿಧಾನ ಸೌಧಕ್ಕೆ ಸ್ಥಳಾಂತರ ಮಾಡಲು ಹೊರಡಿಸಿದ ಆದೇಶವನ್ನು ಈ ಸಲವಾದರೂ ಜಾರಿಗೊಳಿಸಬೇಕಾಗಿದೆ.ಬಸವರಾಜ ಬೊಮ್ಮಾಯಿಯವರು ತಮಗೆ ದೊರೆತ ಅನಿರೀಕ್ಷಿತ ಅವಕಾಶ ಮತ್ತು ಅಧಿಕಾರವನ್ನು ಜನೊಪಯೋಗಿ ಕಾರ್ಯಗಳಿಗಾಗಿ ಬಳಸಿಕೊಂಡು ಒಳ್ಳೆಯ ಹೆಸರು ಮಾಡಲಿ.ಮತಾಂತರ ನಿಷೇಧದ ಕೋಮುವಾದಿ ಕಾರ್ಯಸೂಚಿಯ ವಿವಾದಾಸ್ಪದ ಮಸೂದೆಗಳು ಮುಖ್ಯ ಮಂತ್ರಿ ಗಳಿಗೆ ಒಳ್ಳೆಯ ಹೆಸರನ್ನು ತರುವದಿಲ್ಲ.ಅಧಿಕಾರ ಬರುತ್ತದೆ, ಹೋಗುತ್ತದೆ.ಆದರೆ ಜನರ ನೆನಪಿನಲ್ಲಿ ಉಳಿಯುವಂಥ ಕೆಲಸ ಮಾಡುವದು ಒಬ್ಬ ಯಶಸ್ವಿ ರಾಜಕಾರಣಿಯ ಕರ್ತವ್ಯ ವಾಗಿದೆ ಎಂಬುದನ್ನು ಬೊಮ್ಮಾಯಿಯವರು ಮರೆಯಬಾರದು.ಇನ್ನು ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರಲ್ಲ.ಬಿಜೆಪಿ ಸರ್ಕಾರದ ಮುಖ್ಯ ಮಂತ್ರಿಯಾಗಿರುವದರಿಂದ ಸಂಘಪರಿವಾರದ ಕಾರ್ಯಸೂಚಿ ಯಂತೆ ಅವರು ಕಾರ್ಯ ನಿರ್ವಹಿಸಬೇಕಾಗುತ್ತದೆ.ಆದರೆ ಇದರಿಂದ ಬೊಮ್ಮಾಯಿಯವರ ರಾಜಕೀಯ ಪುರೋಗಮನಕ್ಕೆ ಧಕ್ಕೆಯಾಗಬಹುದೆಂದು ಮಾತ್ರ ಹೇಳಬಹುದಾಗಿದೆ.ಒಟ್ಟಾರೆ ಸದನದ ಕಲಾಪ ಕಲಹದ ಕಣವಾಗದೇ ಅರ್ಥಪೂರ್ಣ ಚರ್ಚೆಗೆ ಮೀಸಲಾಗಿರಲಿ.
ಶತಮಾನಗಳಿಂದ ಈ ನೆಲದಲ್ಲಿ ಹಿಂದುಗಳು,ಮುಸಲ್ಮಾನರು,ಕ್ರೈಸ್ತರು ಅಣ್ಣ ತಮ್ಮಂದಿರಂತೆ ಬದುಕುತ್ತಾ ಬಂದಿದ್ದಾರೆ.ಮತಾಂತರ ದ ಹೆಸರಿನಲ್ಲಿ ಕ್ರೈಸ್ತರನ್ನು ಗುರಿಯಾಗಿಸಿ ಅಪಪ್ರಚಾರ ನಡೆದಿದೆ.ಆದರೆ ಕರಾವಳಿ ಕರ್ನಾಟಕ ಸೇರಿದಂತೆ ಬಹುತೇಕ ಕಡೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರೈಸ್ತರ ಕೊಡುಗೆ ಅಪಾರವಾಗಿದೆ.ಸಂಘ ಪರಿವಾರದ ಅನೇಕ ನಾಯಕರ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಾದ ಬಿಷಪ್ ಕಾಟನ್,ಸೆಂಟ್ ಮೇರಿ,ಬಾಸೆಲ್ ಮಿಶನ್,ಸೆಂಟ್ ಅಂಡ್ರ್ಯೂಸ್ ಮುಂತಾದ ಶಾಲೆಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಸ್ಥಾನ ಮಾನವನ್ನು ಹೊಂದಿದ್ದಾರೆ.ಕ್ರೈಸ್ತರ ಶಾಲೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಮತಾಂತರಕ್ಕೆ ಒತ್ತಾಯಿಸಿದ ಒಂದೇ ಒಂದು ಪ್ರಕರಣವೂ ಇಲ್ಲ.ಕ್ರೈಸ್ತರು ನಡೆಸುವ ಅನೇಕ ಆಸ್ಪತ್ರೆಗಳು ಕರ್ನಾಟಕದಲ್ಲಿ ಇವೆ.ಅಲ್ಲಿ ಎಲ್ಲ ಜಾತಿ ಮತಗಳ ಜನರು ಯಾವುದೇ ತಾರತಮ್ಯವಿಲ್ಲದೇ ಚಿಕಿತ್ಸೆಯನ್ನು ಪಡೆಯುತ್ತಾರೆ.ಹೀಗೆ ಚಿಕಿತ್ಸೆ ಪಡೆದವರನ್ನು ಮತಾಂತರ ಮಾಡಿದ ಒಂದೇ ಇಂದು ಉದಾಹರಣೆಯನ್ನು ಕೋಮುವಾದಿಗಳು ನೀಡುವರೇ?
ಕರ್ನಾಟಕದ ಸೌಹಾರ್ದ ಪರಂಪರೆಗೆ ಹನ್ನೆರಡನೆಏ ಶತಮಾನದ ವಚನ ಚಳವಳಿಯ ಕೊಡುಗೆ ದೊಡ್ಡದು .ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಸವಾಲಾಗಿ ನಿಂತ ಬಸವಣ್ಣ ” ಇವ ನಮ್ಮವ ” ಇವ ನಮ್ಮವ” ಎಂದರು.ಇಂಥ ನೆಲದಲ್ಲಿ ಪ್ರತಿನಿತ್ಯವೂ ದ್ವೇಷದ ದಳ್ಳುರಿ ಎಬ್ಬಿಸುವ ಹುನ್ನಾರ ನಡೆದಿರುವದು ಆತಂಕದ ಸಂಗತಿಯಾಗಿದೆ.
ಇಂಥ ಸೌಹಾರ್ದದ ತಾಣದಲ್ಲಿ ಬಿಜೆಪಿ ಮತಾಂತರ ನಿಷೇಧ ಮತ್ತು ಲವ್ ಜಿಹಾದ ತಡೆ ಕಾನೂನು ಗಳನ್ನು ತಂದು ತನ್ನ ಆಡಳಿತ ವೈಫಲ್ಯಗಳನ್ನು ಮುಚ್ಚಿ ಕೊಳ್ಳಲು ಕುತಂತ್ರ ನಡೆಸಿದೆ.ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು
ಬಿಜೆಪಿ ಸರಕಾರ ಮತಾಂತರ ಮಸೂದೆ ತರುವ ಮುನ್ನವೇ ರಾಜ್ಯದ ಕೆಲವೆಡೆ ಅಲ್ಪ ಸಂಖ್ಯಾತ ಕ್ರೈಸ್ತ ಬಾಂಧವರು ಕೋಮುವಾದಿ ಪುಂಡರು ಹಲ್ಲೆ ನಡೆಸುತ್ತಿದ್ದಾರೆ.ಬೆಳಗಾವಿ, ಕೋಲಾರ,ಬೇಲೂರು ಮುಂತಾದ ಕಡೆ ಇಂಥ ದಾಳಿ ಗಳು ನಡೆದು ಪ್ರಾರ್ಥನೆಗೆ ತಡೆಯೊಡ್ಡಲಾಗಿದೆ.ಇನ್ನು ಮತಾಂತರ ನಿಷೇಧ ಕಾಯ್ದೆ ಬಂದರೆ ಪರಿಸ್ಥಿತಿ ಇನ್ನೂ ಹದಗೆಡಲಿದೆ.ಸ್ವಯಮೆಚ್ಚೆಯ ಮತಾಂತರದ ಬಗ್ಗೆ ಸಂವಿಧಾನವೂ ಅವಕಾಶ ನೀಡಿದೆ.ಕಾರಣ ಸಂವಿಧಾನದ ಆಶಯಗಳಿಗೆ ವಿರುದ್ಧ ವಾದ ಮಸೂದೆ ತರುವುದರಲ್ಲಿ ಅರ್ಥವಿಲ್ಲ.