ಬೆಂಗಳೂರು,ಆ,12: ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ ಎರಡು ಕಾರುಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿದೆ.
ತಡರಾತ್ರಿ 1.25 ರ ವೇಳೆಗೆ ಈ ಘಟನೆ ಜರುಗಿದ್ದು, ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಬೆಂಕಿಗಾಹುತಿ ಆಗಿವೆ. ಸಿಸಿಟಿವಿಯಲ್ಲಿ ಈ ದೃಶ್ಯ ದಾಖಲಾಗಿದ್ದು, ನಾಲ್ಕು ಜನ ವ್ಯಕ್ತಿಗಳು ಪೆಟ್ರೋಲ್ ಕ್ಯಾನ್ಗಳನ್ನ ತಂದು ಬೆಂಕಿ ಹಚ್ಚಿರುವುದು ಕಂಡು ಬಂದಿದೆ. ಮನೆಯ ಅಂಗಳದೊಳಗೆ ಈ ಕಾರುಗಳನ್ನ ನಿಲ್ಲಿಸಲಾಗಿತ್ತು.
ಘಟನಾ ಸ್ಥಳಕ್ಕೆ ಗೃಹಸಚಿವ ಅರಗ ಜ್ಞಾನೇಂದ್ರ ಬೇಟಿ ನೀಡಿದ್ದು ಘಟನೆಗೆ ಕಾರಣರಾದವರನ್ನು ಆದಷ್ಟು ಬೇಗ ಬಂಧಿಸಲಾಗುತ್ತದೆ,ತನಿಖೆಗೆ ಮೂರು ತಂಡಗಳು ರಚಿಸಲಾಗಿದ್ದು ಕೆಲವು ಕುರುಹುಗಳು ಸಿಕ್ಕಿವೇ ಹಾಗಾಗಿ ಶೀಘ್ರ ಆರೋಪಗಳನ್ನು ಬಂಧಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಸದ್ಯ ಸಿಸಿಟಿವಿ ದೃಶ್ಯಗಳನ್ನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಳ ಚಲನವಲನಗಳ ಮೂಲಕ ಅವರನ್ನ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಹಳೇ ದ್ವೇಷದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಶಂಕೆ.
ಇದೇ ವೇಳೆ, ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಮಾಧ್ಯಮಗಳಿಗೆ ವಿವರ ನೀಡಿದ ಅವರು, “1:23ಕ್ಕೆ ಇಬ್ಬರು ಎಂಟ್ರಿ ಆಗ್ತಾರೆ. ಆ ಕಡೆ ಈ ಕಡೆ ನೋಡಿ ಎರಡು ಗಾಡಿಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚುತ್ತಾರೆ. 1:30ಕ್ಕೆ ನಮಗೆ ಘಟನೆ ಬಗ್ಗೆ ಗೊತ್ತಾಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಶಬ್ದ ಬಂದು ನಮಗೆ ಎಚ್ಚರವಾಯಿತು. ಗೇಟ್ ಬಳಿ ಇದ್ದ ಪೊಲೀಸರು ಹಾಗೂ ನಮ್ಮ ವಾಚ್ಮ್ಯಾನ್ ಓಡಿ ಬಂದರು. ಅರ್ಧಗಂಟೆ ಕಾಲ ಬೆಂಕಿಯನ್ನ ಆರಿಸುವ ಕೆಲಸ ನಡೆಯಿತು” ಎಂದು ಹೇಳಿದ್ದಾರೆ.
ಸಿಸಿಟಿವಿಯಲ್ಲಿ ಈ ಪುಂಡರ ಮುಖ ಸರಿಯಾಗಿ ಗೊತ್ತಾಗಿಲ್ಲ. ಆದರೆ, ಬೇರೆ ಕಡೆಗಳಲ್ಲಿರುವ ಸಿಸಿಟಿವಿಗಳಿಂದ ಇವರ ಚಲನವಲನಗಳನ್ನ ಪರಿಶೀಲಿಸುವ ಕೆಲಸವನ್ನ ಪೊಲೀಸರು ಮಾಡುತ್ತಿದ್ದಾರೆ. ಸತೀಶ್ ರೆಡ್ಡಿ ನಿವಾಸದ ಹಿಂಬದಿ ಗೇಟ್ ಮೂಲಕ ದುಷ್ಕರ್ಮಿಗಳು ಪ್ರವೇಶ ಮಾಡಿದ್ಧಾರೆ. ಅಲ್ಲಿದ್ದ ಸಿಸಿಟಿವಿಯನ್ನ ಮರೆ ಮಾಚಿದ್ದಾರೆ. ಹೀಗಾಗಿ ಅವರ ಮುಖಚಹರೆ ಸರಿಯಾಗಿ ದಾಖಲಾಗಿಲ್ಲ. ನಿವಾಸದ ಮುಂಭಾಗದ ಗೇಟ್ ಬಳಿ ಪೊಲೀಸರು ಮತ್ತು ವಾಚ್ಮ್ಯಾನ್ ಇದ್ದರು. ಇವರು ಹಿಂಬದಿ ಗೇಟ್ನಿಂದ ಬಂದು ಕಾರಿಗೆ ಬೆಂಕಿ ಹಚ್ಚಿ ಹಿಂಬದಿ ಗೇಟ್ ಮೂಲಕವೇ ಪರಾರಿಯಾಗಿದ್ಧಾರೆ. ಇವರು ಬೆಂಕಿ ಹಚ್ಚುವಾಗ ಯಾರಿಗೂ ಗೊತ್ತಾಗದೇ ಹೋದದ್ದು ಆಶ್ಚರ್ಯ.