ಬೆಂಗಳೂರು,ಆ,೧೦: ಸುಳ್ಳು ದಾವೆಗಳ ವಾಪಸು ವಿಚಾರದಲ್ಲಿ ನ್ಯಾಯಾಲಯಗಳ ನಿರ್ದೇಶನಗಳಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು .
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರ ವಿರುದ್ದದ ಹಳೆಯ ಸುಳ್ಳು ಕೇಸುಗಳನ್ನು ಹಿಂಪಡೆಯಲು ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೋರಿದ್ದಾರೆ. ಬಿ.ಎಸ್. ಯಡಿಯೂರಪ್ಪ ಆಡಳಿತಾವಧಿಯಲ್ಲಿ ತಾವು ಗೃಹ ಸಚಿವರಾಗಿದ್ದ ಅವಧಿಯಲ್ಲಿ ರೈತರು, ಕನ್ನಡಪರ ಸಂಘಟನೆಗಳ ವಿರುದ್ಧದ ಪ್ರಕರಣಗಳನ್ನು ಕೈಬಿಡಲಾಗಿತ್ತು ಎಂದರು.
ಹಿಂಸೆಗೆ ಹಿಂಸೆಯೇ ಮದ್ದಲ್ಲವೆಂದು ಖಂಡಿತವಾಗಿ ನಾನೂ ಒಪ್ಪುತ್ತೇನೆ. ಆದರೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ನೋವು ಹಂಚಿಕೊಂಡಿದ್ದಾರೆಯೇ ಹೊರತು ಪ್ರಚೋದನಾಕಾರಿ ಹೇಳಿಕೆ ನೀಡಿಲ್ಲ. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದುಪರ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಹಾಗೂ ದೌರ್ಬಲ್ಯಗಳನ್ನು ಪ್ರಸ್ತಾಪಿಸಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದು ಬೊಮ್ಮಾಯಿ ಸಮರ್ಥಿಸಿಕೊಂಡರು
ನೂತನ ಸರ್ಕಾರದ ಧ್ಯೇಯ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಸಭೆ ಕರೆಯಲಾಗಿತ್ತು. ಪೊಲೀಸರು ಇನ್ನಷ್ಡು ಜನಪರ ಹಾಗೂ ದಕ್ಷವಾಗಿ ಕೆಲಸ ಮಾಡಬೇಕು. ಸುಭಿಕ್ಷ ರಾಜ್ಯಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಪೂರ್ಣ ಬಿಗಿಯಾಗಿರುವುದು ಮುಖ್ಯವಾಗಿದ್ದು, ಅದಕ್ಕೆ ಆದ್ಯತೆ ನೀಡಲಾಗುವುದು. ದಕ್ಷ, ಅನುಭವಿ ಮತ್ತು ಪ್ರಾಮಾಣಿಕ ಸಚಿವ ಆರಗ ಜ್ಞಾನೇಂದ್ರ ಅವರು ಇಲಾಖೆಗೆ ಇನ್ನಷ್ಡು ಚೈತನ್ಯ ತುಂಬುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಿದರು.
ಸುಳ್ಳು ಕೇಸ್ ವಾಪಾಸ್ ವಿಚಾರ ; ನ್ಯಾಯಲಯಗಳ ನಿರ್ದೇಶನದಂತೆ ಕ್ರಮ-ಸಿಎಂ
Share