ಬೆಳಗಾವಿ,ಡಿ,೧೩: ಅಗಲಿದ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದೇವೆ. ಪ್ರಶಸ್ತಿ ಪ್ರದಾನ ಮಾಡುವ ಕಾರ್ಯಕ್ರಮದ ದಿನಾಂಕ ಶೀಘ್ರ ಪ್ರಕಟ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದರು.
ಸಂತಾಪ ಸೂಚಕದ ನಿರ್ಣಯದ ಮೇಲೆ ಮಾತನಾಡಿದ ಸಿಎಂ, ಅದೇ ರೀತಿ ಶೀಘ್ರದಲ್ಲೇ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ. ವಿಪಕ್ಷದ ನಾಯಕರು ಸಹ ಪದ್ಮಶ್ರೀ ಪ್ರಶಸ್ತಿಗೆ ಶಿಫಾರಸು ಮಾಡುವಂತೆ ಪತ್ರ ಬರೆದಿದ್ದರು ಎಂದು ಹೇಳಿದರು. ಪ್ರತಿಭೆ ಮತ್ತು ಸಾಧಕರು ಅಲ್ಪಾಯುಷಿಗಳು ಎಂಬುದು ಸಾಬೀತಾಗುತ್ತಿದೆ. ನಟ ಪುನೀತ್ ರಾಜಕುಮಾರ್ ವಿಚಾರದಲ್ಲೂ ಹಾಗೆ ಆಯ್ತು ಅನ್ನಿಸುತ್ತದೆ. ಇದೊಂದು ದೊಡ್ಡ ಅಘಾತ. ಯಾರೂ ಹೀಗೆ ಸಾವನ್ನ ನಿರೀಕ್ಷೆ ಮಾಡಿರಲಿಲ್ಲ ಎಂದರು.
ನಾವು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಪುನೀತ್ ಅವರ ನಿಧನ ಘೋಷಿಸಿದ್ದರು. ಅವರ ಸಾವನ್ನು ನಂಬಲು ಸಾಧ್ಯವಾಗಲಿಲ್ಲ. ಕುಟುಂಬದ ಸಹಕಾರದಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಅಂತಿಮ ಸಂಸ್ಕಾರ ಮಾಡಲಾಯಿತು. ಅದಕ್ಕೆ ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಎಲ್ಲರ ಸಹಕಾರ ಮುಖ್ಯವಾಗಿತ್ತು. ಅವರ ನಿಧನದ ಬಳಿಕ ಹರಿದುಬಂದ ಜನ ಸಾಗರದಿಂದ ಎಂತಹ ಹೆಸರು ಮಾಡಿದ್ದರೆಂದು ಗೊತ್ತಾಗುತ್ತದೆ. ಅವರ ಸಮಾಜ ಸೇವೆ, ಜನರಿಗೆ ಸಹಾಯ ಮಾಡಿರುವುದು ಶ್ಲಾಘನೀಯ. ನನ್ನ ಬಳಿ ಒಂದು ಆ?ಯಪ್ ರಿಲೀಸ್ ಮಾಡಿದ್ದರು. ಒಂದು ಟ್ರೈಲರ್ ಬಿಡುಗಡೆ ಮಾಡುವ ಬಗ್ಗೆ ಕೂಡ ಚರ್ಚೆ ನಡೆಸಿದ್ದರು. ಅರಣ್ಯಕ್ಕೆ ಸಂಬಂಧಿಸಿದ ವಿಚಾರ ಅಂತ ಹೇಳಿದರು. ಆದರೆ ನನ್ನ ಅಪಾಯಿಂಟ್ಮೆಂಟ್ಗಿಂತ ಮೇಲಿರುವ ಅಪಾಯಿಂಟ್ಮೆಂಟ್ಗೆ ಬೆಲೆ ಕೊಟ್ಟರು. ತಂದೆಯವರಂತೆ ಅವರೂ ನಟನಾ ಪ್ರತಿಭೆ ಪಡೆದಿದ್ದರು. ಅಂತವರನ್ನು ನಾವು ಕಳೆದುಕೊಂಡಿದ್ದೇವೆ. ಅವರ ನಿಧನದಿಂದ ಕರ್ನಾಟಕ ಬಡವಾಗಿದೆ ಎಂದು ಕಂಬನಿ ಮಿಡಿದರು.
ಶಿವರಾಮ್ ನಿಧನಕ್ಕೆ ಸಂತಾಪ:
ಹಿರಿಯ ನಟ ಶಿವರಾಮ್ ಸಹ ಅತ್ಯುತ್ತಮ ನಟರಾಗಿದ್ದರು. ಜೊತೆಗೆ ಅಯ್ಯಪ್ಪ ಸ್ವಾಮಿ ಭಕ್ತರಾಗಿದ್ದರು. ಪುನೀತ್ ರಾಜ್?ಕುಮಾರ್ ನಿಧನರಾಗಿದ್ದ ವೇಳೆ ನನ್ನ ಜೊತೆ ಮಾತನಾಡಿದ್ದರು. ಅವರನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆಂದು ತಿಳಿದುಕೊಂಡಿರಲಿಲ್ಲ. ಸುಮಾರು ಮೂನ್ನೂರು ಚಿತ್ರಗಳಲ್ಲಿ ನಟಿಸಿದ್ದ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ ಎಂದರು.