ಜಿಡಿಎಸ್ ನಿಂದ 2ಡಿಜಿ ಔ‍ಷಧ ಖರೀದಿಸಿ ಹಂಚಲು ಚಿಂತನೆ

Share

ಬೆಂಗಳೂರು,ಮೇ,17: ರಾಜ್ಯದ ಕೋವಿಡ್‌ ಸ್ಥಿತಿಗತಿ ಮತ್ತು ಜೆಡಿಎಸ್‌ ವತಿಯಿಂದ ಜನರಿಗೆ ನೀಡಲಾಗುತ್ತಿರುವ ಪರಿಹಾರ ಕಾರ್ಯಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಪಕ್ಷದ ಶಾಸಕರು, ಮುಖಂಡರೊಂದಿಗೆ ಸೋಮವಾರ ಆನ್‌ಲೈನ್‌ ಸಮಾಲೋಚನೆ ನಡೆಸಿದರು.

ಕೊರೊನಾ ವೈರಸ್‌ ಸೋಂಕು ಪತ್ತೆ ಪರೀಕ್ಷೆ ಕಡಿಮೆ ಪ್ರಮಾಣದಲ್ಲಿ ನಡೆಯುತ್ತಿರುವುದು, ಪರೀಕ್ಷಾ ವರದಿಗಳು ವಿಳಂಬವಾಗಿ ಬರುತ್ತಿರುವುದು ಮತ್ತು ವರದಿ ವಿಳಂಬವಾಗುತ್ತಿರುವುದರಿಂದ ಆಗುತ್ತಿರುವ ಅನಾಹುತಗಳು, ಲಸಿಕೆ ಅಭಿಯಾನ ಅವ್ಯವಸ್ಥೆ, ಆಕ್ಸಿಜನ್‌ ಪೂರೈಕೆಯಲ್ಲಿ ಅಗುತ್ತಿರುವ ಸಮಸ್ಯೆ, ತಾರತಮ್ಯ, ಆಸ್ಪತ್ರೆಗಳು ರೋಗಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡುತ್ತಿರುವುದನ್ನು ಶಾಸಕರು ಕುಮಾರಸ್ವಾಮಿ ಅವರ ಗಮನಕ್ಕೆ ತಂದರು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಕುಮಾರಸ್ವಾಮಿ ಅವರು ಭರವಸೆ ನೀಡಿದರು.
ಹಳ್ಳಿಗಳಲ್ಲಿ ಸೋಂಕಿಗೆ ಒಳಗಾಗಿರುವವರಿಗೆ ಮಾಹಿತಿ, ಜಾಗೃತಿ ನೀಡಲು ಆಶಾ ಕಾರ್ಯಕರ್ತೆಯರು ಶ್ರಮ ವಹಿಸುತ್ತಿರುವುದಾಗಿ ಶಾಸಕರು ಮಾಹಿತಿ ನೀಡಿದರು. ಆಶಾ ಕಾರ್ಯಕರ್ತರ ಕಾರ್ಯಕ್ಕೆ ಎಚ್‌ಡಿಕೆ ಹರ್ಷ ವ್ಯಕ್ತಪಡಿಸಿದರು.

ಡಿಆರ್‌ಡಿಒ ಅಭಿವೃದ್ಧಪಡಿಸಿರುವ 2ಡಿಜಿ ಔ‍ಷಧದ ಪೊಟ್ಟಣಗಳನ್ನು ಖರೀದಿ ಮಾಡಿ ರಾಜ್ಯದಾದ್ಯಂತ ಜೆಡಿಎಸ್‌ ವತಿಯಿಂದ ಉಚಿತವಾಗಿ ವಿತರಿಸುವ ಬಗ್ಗೆ ಆನ್‌ಲೈನ್‌ ಸಭೆಯಲ್ಲಿ ಸಮಾಲೋಚನೆ ನಡೆಯಿತು. ಔ‍ಷಧ ಪರಿಣಾಮಕಾರಿ ಎಂದು ಕಂಡು ಬಂದರೆ ಅದನ್ನು ಖರೀದಿಸಿ ಹಂಚಲು ನಿರ್ಧರಿಸಲಾಯಿತು. ಎಚ್‌.ಡಿ ಕುಮಾರಸ್ವಾಮಿ ಅವರ ಈ ನಿರ್ಧಾರಕ್ಕೆ ಶಾಸಕರು, ಮುಖಂಡರು ಹರ್ಷ ವ್ಯಕ್ತಪಡಿಸಿದರು, ಪ್ರಶಂಸಿದರು.

ಪಡಿತರ ಸಮಸ್ಯೆಗೆ ಶಾಸಕರ ಆಕ್ರೋಶ

ಪಡಿತರ ತೆಗೆದುಕೊಳ್ಳಲು ಥಂಬ್‌ ಇಂಪ್ರೆಶನ್‌ ರದ್ದು ಮಾಡಿ, ಆಧಾರ್‌ ಕಡ್ಡಾಯಗೊಳಿಸಿರುವುದನ್ನು ಬಹುತೇಕ ಶಾಸಕರು ವಿರೋಧಿಸಿದರು. ಆಧಾರ್‌ ಲಿಂಕ್‌ ಆಗದೇ, ಪಡಿತರ ಸಿಗದೇ ಜನ ಪರದಾಡುತ್ತಿದ್ದಾರೆ ಎಂದು ಶಾಸಕರು, ಮುಖಂಡರು ದೂರಿದರು. ಚೆಕ್‌ ಲೀಸ್ಟ್‌ ಮೂಲಕ ಪಡಿತರ ವಿತರಿಸಬೇಕು. ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಾರಬೇಕಾಗಿ ಬಹುತೇಕ ಶಾಸಕರು ಎಚ್‌ಡಿಕೆ ಅವರಿಗೆ ಮನವಿ ಮಾಡಿದರು. ಸರ್ಕಾರಕ್ಕೆ ಈ ವಿಷಯ ತಲುಪಿಸಿ ಸಮಸ್ಯೆ ಪರಿಹರಿಸುವದಾಗಿ ಹೇಳಿದರು.

ರಾಜ್ಯದಾದ್ಯಂತ ಯುವಕರೇ ಹೆಚ್ಚಾಗಿ ಕೋವಿಡ್‌ಗೆ ಬಲಿಯಾಗುತ್ತಿರುವ ಗಂಭೀರ ವಿಚಾರವನ್ನು ಶಾಸಕರು ಕುಮಾರಸ್ವಾಮಿ ಅವರ ಗಮನಕ್ಕೆ ತಂದರು.ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿರುವುದಾಗಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

Girl in a jacket
error: Content is protected !!