ಬೆಂಗಳೂರು, ಡಿ,16: ಮಾಜಿ ಕೇಂದ್ರ ಸಚಿವ ಆರ್ ಎಲ್ ಜಾಲಪ್ಪ (98) ಇಂದು (ಶುಕ್ರವಾರ)ಸಂಜೆ ಕೊನೆಯುಸಿರೆಳೆದಿದ್ದಾರೆ.
ಶ್ವಾಸಕೋಶ ಹಾಗೂ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.10ರಂದು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗಿಲ್ಲ.
ಇದೇ ಫೆಬ್ರವರಿಯಲ್ಲಿ ಜಾಲಪ್ಪ ಅವರು ಪಾರ್ಶ್ವವಾಯುಗೆ ತುತ್ತಾಗಿದ್ದು, ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು. ಆದ್ದರಿಂದ ಸತತ ಎರಡು ಗಂಟೆಗಳ ಕಾಲ ಶಸ್ತ್ರ ಚಿಕತ್ಸೆ ಮಾಡಲಾಗಿತ್ತು.
ಕರ್ನಾಟಕದ ಪ್ರಮುಖ ರಾಜಕಾರಣಿಯಾಗಿದ್ದ ಜಾಲಪ್ಪ 4 ಬಾರಿ ಲೋಕಸಭಾ ಸದಸ್ಯರು ಹಾಗೂ ಕೇಂದ್ರ ಸಚಿವರಾಗಿದ್ದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದರು.
ಆರ್.ಎಲ್ ಜಾಲಪ್ಪ ರಾಜಕೀಯ ಹಾದಿ
ಆರ್.ಎಲ್. ಜಾಲಪ್ಪ 19 ಅಕ್ಟೋಬರ್ 1925 ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಜನಿಸಿದ್ದರು.
ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿ ಪಡೆದಿರುವ ಆರ್ ಎಲ್ ಜಾಲಪ್ಪ ಅವರು ಬಳಿಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಸದಸ್ಯರಾಗಿದ್ದರು