ಬೆಂಗಳೂರು,ಮಾ,23;ಹಿಂದೂ ದೇವಾಲಯಗಳ ಜಾತ್ರೆಗಳಲ್ಲಿ ಮುಸ್ಲಿಂ ವರ್ತಕರಿಗೆ ನಿರ್ಬಂಧ ಹೇರಿರುವ ಕುರಿತು ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಸದಸ್ಯರ ನಡುವೆ ವಾಕ್ಸಮರ ನಡೆಯಿತು.
ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಶಾಸಕ ಯು.ಟಿ.ಖಾದರ್, ಹಿಂದೂ ದೇವಾಲಯಗಳ ಧಾರ್ಮಿಕ ಕೇಂದ್ರಗಳಲ್ಲಿ ಕೆಲವು ಧರ್ಮದವರು ವ್ಯಾಪಾರ ಮಾಡಬಾರದು ಎಂದು ಬ್ಯಾನರ್ ಹಾಕಿದ್ದಾರೆ. ಈ ರೀತಿಯ ಬ್ಯಾನರ್ ಹಾಕಿರುವರು ಹೇಡಿಗಳು, ಕ್ರೂರಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ನ ಕೆಲವು ಶಾಸಕರು ಇದಕ್ಕೆ ದನಿಗೂಡಿಸಿದರು.
ಈ ವೇಳೆ ಉಡುಪಿ ಹಾಗೂ ಮಂಗಳೂರಿನ ಶಾಸಕರು ರೋಷಾಗ್ನಿ ಹೊರ ಹಾಕಿದರು. ಬಿಜೆಪಿ ಶಾಸಕರಾದ ರಘಪತಿ ಭಟ್, ಹರೀಶ್ ಪೂಂಜಾ, ರೇಣುಕಾಚಾರ್ಯ, ಸತೀಶ್ ರೈ ಸೇರಿದಂತೆ ಇತರರು ಯು.ಟಿ.ಖಾದರ್ ವಿರುದ್ಧ ಮುಗಿ ಬಿದ್ದರು. ಹೇಡಿಗಳು ಅಂತ ಯಾರಿಗೆ ಹೇಳುತ್ತಿದ್ದೀರಾ ಎಂದು ಲೆಫ್ಟ್ ರೈಟ್ ಕ್ಲಾಸ್ ತೆಗೆದುಕೊಂಡರು. ತೀರಾ ಈ ಚರ್ಚೆಯ ವೇಳೆ ಏಯ್ ಕೂತ್ಕೊಳಲೋ ಅಂತ ಜಮೀರ್ ಅಹಮ್ಮದ್ ಗೆ ರೇಣುಕಾ ಚಾರ್ಯ ಗದರಿದರು. ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ತಹಬದಿಗೆ ತರಲು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಪಡಿಪಾಟಲು ಪಟ್ಟರು.
ಬಪ್ಪನಾಡು, ಮಾರುಗುಡಿ ದೇವಾಲಯ ಸೇರಿದಂತೆ ಇತರ ದೇವಸ್ಥಾನಗಳ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದವರು ಕೈ ಜೋಡಿಸಿದ್ದಾರೆ. ಹೀಗಿರುವಾಗ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರುವಂತಿಲ್ಲ ಎಂದು ರಿಜ್ವಾನ್ ಹರ್ಷದ್ ಕಿಡಿಕಾರಿದರು.
2002 ರ ಧಾರ್ಮಿಕ ಕಾಯ್ದೆಯಲ್ಲಿ ಹಿಂದೂಗೇಳತರರಿಗೆ ಅವಕಾಶ ನೀಡುವಂತಿಲ್ಲ ಎಂದು ಕಾನೂನು ಇದೆ. ಅದೇ ಕಾನೂನು ಅನುಸರಿಸುತ್ತಿದ್ದಾರೆ ಎಂದು ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದ ನಂತರ ಚರ್ಚೆಗೆ ತೆರೆ ಬಿದ್ದಿತು.