ಮುಡಾ ಹಗರಣ, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ: ಆರ್.ಅಶೋಕ್
by-ಕೆಂಧೂಳಿ
ಬೆಂಗಳೂರು,ಫೆ,07-: ಮುಡಾ ಹಗರಣ, ಸಿದ್ದರಾಮಯ್ಯನವರ ವಿಚಾರದಲ್ಲಿ ಕಾನೂನು ಹೋರಾಟವನ್ನು ಮುಂದುವರೆಸಲಿದ್ದೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹೈಕೋರ್ಟಿನ ಆದೇಶವನ್ನು ಒಪ್ಪಲೇಬೇಕಿದೆ. ಆದರೆ, ನ್ಯಾಯ ಸಿಗುವವರೆಗೂ ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ಹೇಳಿದರು.
ಪಕ್ಷದ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ, ನಾಲ್ಕು ಗೋಡೆಗಳ ಮಧ್ಯೆ ಮಾತನಾಡುವಂತೆ ಪಕ್ಷದ ಉಸ್ತುವಾರಿಗಳು ತಿಳಿಸಿದ್ದಾರೆ. ಕೇಂದ್ರದ ಅಭಿಪ್ರಾಯವೂ ಇದೇ ಆಗಿದೆ. ಅದು ಅವರ ಅಭಿಪ್ರಾಯವೂ ಹೌದು; ನನ್ನ ಅಭಿಪ್ರಾಯವೂ ಅದೇ ಆಗಿದೆ ಎಂದು ಪಕ್ಷದೊಳಗಿನ ಭಿನ್ನಮತ ಕುರಿತ ಪ್ರಶ್ನೆಗೆ ಅವರು ಉತ್ತರ ಕೊಟ್ಟರು.
ಕಾಂಗ್ರೆಸ್ಸಿನ ಭ್ರಷ್ಟಾಚಾರ, ಹಗರಣಗಳು, ಲೂಟಿ, ಅಧಿಕಾರ ದುರುಪಯೋಗ, ಶೇ 60 ಕಮಿಷನ್, ಬಾಣಂತಿಯರ ಸಾವು, ಮೈಕ್ರೋ ಫೈನಾನ್ಸ್ನಿಂದ ಸಾವು ಸಂಭವಿಸುತ್ತಿದೆ. ಲವ್ ಜಿಹಾದ್, ಮುಡಾ, ವಾಲ್ಮೀಕಿ ನಿಗಮದ ಹಗರಣ ಸೇರಿ ಎಷ್ಟೊಂದು ಹಗರಣಗಳಲ್ಲಿ ಈ ಸರಕಾರ ಸಿಲುಕಿದೆ. ಇದು ಬಿಜೆಪಿಗೆ ಸುವರ್ಣಾವಕಾಶ ಎಂದು ನುಡಿದರು. ನಾವೆಲ್ಲರೂ ಜೊತೆಗೂಡಿ ಹೋರಾಡಿದರೆ ಕಾಂಗ್ರೆಸ್ಸನ್ನು ಬಗ್ಗು ಬಡಿಯಬಹುದು ಎಂದು ತಿಳಿಸಿದರು.
ಪಕ್ಷದ ವಿಚಾರದಲ್ಲಿ 15- 20 ದಿನಗಳಲ್ಲಿ ನಮ್ಮ ಕೇಂದ್ರದ ನಾಯಕರು ಅಂತಿಮ ತೀರ್ಮಾನ ಕೊಡಲಿದ್ದಾರೆ. ಆ ನಂತರ ನಾರ್ಮಲ್ ಬಿಜೆಪಿ, ನಾರ್ಮಲ್ ಪ್ರೊಸೆಸ್ ಮುಂದುವರೆಯಲಿದೆ ಎಂದು ತಿಳಿಸಿದರು. ಪಕ್ಷದ ಇನ್ಚಾರ್ಜ್ ನಮ್ಮ ಸುಪ್ರೀಂ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.