ಬೆಂಗಳೂರು,ಜೂ.೧೨:ನಾಯಕತ್ವ ಬದಲಾವಣೆ ಕಿಚ್ಚು ಬಿಜೆಪಿಯಲ್ಲಿ ನಿಂತಿಲ್ಲ, ಅದು ಇನ್ನೂ ತೆರೆಮರೆಯಲ್ಲಿ ನಡೆಯುತ್ತಿದೆ,ಶತಾಯಗತಾಯ ಬಿಎಎಸ್ವೈ ಅವರನ್ನು ಬದಲಾಯಿಸಲೇ ಬೇಕು ಎಂದು ಒಂದು ವರ್ಗ ಸೆಟೆದು ನಿಂತಿದೆ ಹಾಗಾಗಿ ಈ ಚಟವಟಿಕೆಗಳು ನಿರಂತರವಾಗಿ ನಡೆಯುತ್ತಿವೆ.
ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಯಾವುದೇ ಚಿಂತನೆ ನಮ್ಮಲಿಲ್ಲ ಎಂದು ಹೇಳಿದ ಮಾರನೇ ದಿನವೇ ಒಂದು ತಂಡ ದೇಯಲಿಯಲ್ಲಿ ಬೀಡು ಬಿಟ್ಟು ಬಿಎಸ್ವೈ ಬದಲಾವಣೆಗೆ ಹೈಕಮಾಂಡ್ ಭೇಟಿಗೆ ಸಜ್ಜಾಗಿದೆ.
ನಾಯಕತ್ವ ಬದಲಾವಣೆ ಚಟುವಟಿಕೆಗಳಲ್ಲಿ ಪ್ರಮುಖವಾಗಿ ಹೆಸರು ಕೇಳಿ ಬರುತ್ತಿರುವ ಶಾಸಕ ಅರವಿಂದ್ ಬೆಲ್ಲದ ದೆಹಲಿಗೆ ತೆರಳಿ ವರಿಷ್ಠರ ಭೇಟಿಗೆ ಮುಂದಾಗಿರುವುದು ಮತ್ತೆ ನಾಯಕತ್ವ ಬದಲಾವಣೆಯ ಚರ್ಚೆಗಳು ಮುನ್ನೆಲೆಗೆ ಬರುವಂತಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಶಾಸಕ ಅರವಿಂದ ಬೆಲ್ಲದ ದೆಹಲಿಗೆ ತೆರಳಿ ವರಿಷ್ಠ ನಾಯಕರ ಭೇಟಿಗೆ ಮುಂದಾಗಿರುವುದು ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಕಿಚ್ಚು ಆರಿಲ್ಲ ಎಲ್ಲವೂ ಬೂದಿ ಮುಚ್ಚಿದ ಕೆಂಡದಂತಿದೆ ಎಂಬಂತೆ ಕಾಣುತ್ತಿದೆ.
ಸದ್ಯ ದೆಹಲಿಯಲ್ಲಿರುವ ಅರವಿಂದ್ ಬೆಲ್ಲದ ಅವರು ವರಿಷ್ಠರ ಭೇಟಿಗಾಗಿ ಕಾದು ಕುಳಿತ್ತಿದ್ದಾರೆ. ಅವರು ರಾಜ್ಯ ಉಸ್ತುವಾರಿ ಅರುಣ್ಸಿಂಗ್ ಸೇರಿದಂತೆ ಪಕ್ಷದ ಹಲವು ವರಿಷ್ಠರನ್ನು ಭೇಟಿ ಮಾಡುವ ಸಾಧ್ಯತೆ ಇದೆ.
ಶಾಸಕ ಬೆಲ್ಲದ್ ಪದೇ ಪದೇ ದೆಹಲಿಗೆ ತೆರಳುತ್ತಿದ್ದು, ಕೆಲದಿನಗಳ ಹಿಂದೆಯಷ್ಟೇ ಸಚಿವ ಯೋಗೇಶ್ವರ್ ಜತೆ ದೆಹಲಿ ಯಾತ್ರೆ ನಡೆಸಿದ್ದರು.
ಶಾಸಕ ಅರವಿಂದ ಬೆಲ್ಲದ ಅವರ ಹಾದಿಯಲ್ಲೇ ಯಡಿಯೂರಪ್ಪ ವಿರೋಧಿ ಬಣದ ಕೆಲ ಸಚಿವರು ಹಾಗೂ ಶಾಸಕರು ವರಿಷ್ಠರನ್ನು ಭೇಟಿ ಮಾಡಿ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದ್ದಾರೆ.
ಈ ತಿಂಗಳ ೧೬ ಇಲ್ಲವೇ ೧೭ ರಂದು ರಾಜ್ಯಕ್ಕೆ ಭೇಟಿ ನೀಡಲಿರುವ ರಾಜ್ಯ ಉಸ್ತುವಾರಿ ಅರುಣ್ಸಿಂಗ್ರವರಿಗೆ ಈ ಸಂಬಂಧ ಮನವಿ ಮಾಡಲು ಕೆಲ ಶಾಸಕರು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.
ಅರುಣ್ಸಿಂಗ್ರವರ ರಾಜ್ಯ ಭೇಟಿ ಸಂದರ್ಭದಲ್ಲಿ ನಾಯಕತ್ವ ಬದಲಾವಣೆಯ ಪರ-ವಿರೋಧ ಚಟುವಟಿಕೆಗಳು ಪರಾಕಾಷ್ಠೆಗೆ ತಲುಪುವ ಸಾಧ್ಯತೆಯೂ ಇದೆ. ಬಿಜೆಪಿಯಲ್ಲಿನ ಈ ಅಂತರ್ಯುದ್ಧ ವರಿಷ್ಠರು ಯಾವ ರೀತಿ ಮದ್ದು ಅರೆಯುತ್ತಾರೋ ಎಂಬುದು ಕುತೂಹಲ ಮೂಡಿಸಿದೆ.
ದೆಹಲಿ ಭೇಟಿ ರಾಜಕೀಯದಲ್ಲ: ಅರವಿಂದ ಬೆಲ್ಲದ
ದೆಹಲಿ ಭೇಟಿಗೆ ರಾಜಕೀಯ ಉದ್ದೇಶವಿಲ್ಲ. ದೆಹಲಿ ಭೇಟಿ ಖಾಸಗಿ ಭೇಟಿ ಎಂದು ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪಷ್ಟಪಡಿಸಿದ್ದಾರೆ.
ದೆಹಲಿಗೆ ಕುಟುಂಬದ ಜತೆ ಖಾಸಗಿ ಭೇಟಿಗೆ ಬಂದಿದ್ದೇನೆ,ದೆಹಲಿ ಭೇಟಿಯ ಹಿಂದೆ ರಾಜಕೀಯ ಉದ್ದೇಶ ಇಲ್ಲ. ಪಕ್ಷದ ಯಾವುದೇ ರಾಷ್ಟ್ರೀಯ ನಾಯಕರ ಭೇಟಿಗಾಗಲಿ, ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಲಿ ದೆಹಲಿಗೆ ಬಂದಿಲ್ಲ ಎಂದು ಅವರು ದೆಹಲಿಯಿಂದಲೇ ಸ್ಪಷ್ಟನೆ ನೀಡಿದ್ದಾರೆ.
ದೆಹಲಿ ಭೇಟಿಯ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ವರದಿಗಳು ಬಿತ್ತರವಾಗುತ್ತಿದೆ. ಈ ವರದಿಗಳು ಸದ್ಯಕ್ಕೆ ದೂರವಾಗಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ದೆಹಲಿಗೆ ಬಂದಿಲ್ಲ. ಅನಗತ್ಯವಾಗಿ ದೆಹಲಿ ಭೇಟಿ ಬಗ್ಗೆ ಗೊಂದಲ ಸೃಷ್ಟಿಸುವುದು ಬೇಡ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.