ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ, ನಾಯಕತ್ವ ವಹಿಸಿಕೊಳ್ಳುವುದಿಲ್ಲ: ಎಂ.ಬಿ ಪಾಟೀಲ್

Share

ಬೆಂಗಳೂರು,ಸೆ,03: ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ ,ವೀರಶೈವ ಲಿಂಗಾಯತರು ಒಂದೇ ಎಲ್ಲರೂ ಸೇರಿ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳುವ ಮೂಲಕ ತಮ್ಮ ಅಭಿಪ್ರಾಯವನ್ನು ಬದಲಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಏಕೆ ಇದರಲ್ಲಿ ತಪ್ಪು ತಿಳುವಳಿಕೆ ಬಂದಿತೋ ಗೊತ್ತಿಲ್ಲ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲ ಎಂದಿದ್ದಾರೆ.

ಕಳೆದರಡು ದಿನಗಳ ಹಿಂದ ಪಂಚಮಸಾಲಿ ಸಮುದಾಯದವರು ಹಿಂದುಳಿದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಎರಡನ್ನೂ ಸೇರಿಸಿ ಪ್ರತ್ಯೇಕ ಧರ್ಮ ಮಾಡಬೇಕೆಂಬ ಹಿಂದಿನ ಧ್ವನಿಯನ್ನು ಮತ್ತೆ ಮೊಳಗಿಸಿ, ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಮತ್ತೆ ಒತ್ತಾಯಿಸಿದ್ದರು.

ಧರ್ಮದ ಹೋರಾಟ ಇಲ್ಲ. ನಾನು ನಾಯಕತ್ವ ವಹಿಸಿಕೊಳ್ಳುವ ಪ್ರೆಶ್ನೆಯೇ ಇಲ್ಲ. 99 ಉಪ ಪಂಗಡ ಗಳಿಗೆ ಒಳ್ಳೆಯದಾಗಬೇಕು. ಎಲ್ಲರೂ ಜತೆಗೂಡಿ ಹೋಗಬೇಕು ಎಂಬುದಷ್ಟೇ ನನ್ನ ಅನಿಸಿಕೆ.`ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ ಒಳ್ಳೆಯದಾಗುತ್ತಿತ್ತು. ಆದರೀಗ ಇದು ಈಗ ಮುಗಿದ ಅಧ್ಯಾಯ ಎಂದರು.

ಈ ಹಿಂದೆ ವೀರಶೈವ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡುವಂತೆ ವೀರಶೈವ ಮಹಾಸಭೆಯವರು ಮನವಿ ಸಲ್ಲಿಸಿದ್ದರು. ಆದರೆ ಶಬ್ದದ ತಾಂತ್ರಿಕ ಬಳಕೆಯ ತೊಂದರೆಯಿಂದಾಗಿ ಆ ಬೇಡಿಕೆ ಈಡೇರಲಿಲ್ಲ. ಈ ಹಿನ್ನೆಲೆಯಲ್ಲಿ ನಾವು ಲಿಂಗಾಯತ ಸ್ವತಂತ್ರ ಧರ್ಮದ ಬೇಡಿಕೆ ಇಟ್ಟುಕೊಂಡು ಹೋರಾಟ ಮಾಡಿದ್ದೇವು. ಈ ಹೋರಾಟವನ್ನು ಮೊದಲು ಬೀದರ ಮತ್ತು ಬೆಳಗಾವಿಯಲ್ಲಿ ಆರಂಭ ಮಾಡಲಾಗಿತ್ತು. ಅದರ ನಂತರ ನಾನು ಹೋರಾಟದಲ್ಲಿ ಪಾಲ್ಗೊಂಡಿದ್ದೆ ಹೊರತು ನಾನು ಈ ಹೋರಾಟವನ್ನು ಆರಂಭಿಸಿರಲಿಲ್ಲ.

ಒಂದು ವೇಳೆ ಈಗಾಗಲೇ ಪ್ರತ್ಯೇಕ ಧರ್ಮ ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ, ನಮ್ಮ ಉಪಪಂಗಡಗಳು 2ಎ ಮೀಸಲಾತಿ ಕೇಳುವ ಪ್ರಸಂಗವೇ ಬರುತ್ತಿರಲಿಲ್ಲ. ಪಂಚಮಸಾಲಿ ಸೇರಿದಂತೆ ಬಹುತೇಕ ಎಲ್ಲ ಸಮಾಜಗಳು ಕೃಷಿ ಆಧಾರಿತ ಜೀವನ ಸಾಗಿಸುತ್ತೀವೆ. ಅವರಲ್ಲೂ ಬಡತನವಿದೆ. ಈ ಹಿನ್ನೆಲೆಯಲ್ಲಿ ಕೂಡಲಸಂಗಮ ಮತ್ತು ಹರಿಹರ ಸ್ವಾಮಿಜಿಗಳು ಹೋರಾಟ ಮಾಡುತ್ತಿದ್ದಾರೆ ಅದು ತಪ್ಪಲ್ಲ. ಈ ಸ್ವಾಮಿಜಿಗಳು ನಡೆಸಿದ ಹೋರಾಟದಲ್ಲಿ ನಾನು ಕೂಡ ಚಿತ್ರದುರ್ಗಕ್ಕೆ ತೆರಳಿ ಪಾಲ್ಗೊಂಡು, ನ್ಯಾಯಯುತ ಬೇಡಿಕೆಗೆ ಬೆಂಬಲ ವ್ಯಕ್ತಪಡಿಸಿದ್ದೇನೆ ಎಂದರು.

ಮಾಧ್ಯಮದರ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಬೇಡಿಕೆಗಳಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಈ ಹಿಂದೆಯೂ ಸಂಬಂಧವಿರಲಿಲ್ಲ. ಇಂದೂ ಸಂಬಂಧವಿಲ್ಲ. ಮುಂದೆಯೂ ಸಂಬಂಧವಿರಲ್ಲ. ಈ ವಿಷಯದಲ್ಲಿ ಯಾರಲ್ಲಿಯೂ ಭಿನ್ನಾಭಿಪ್ರಾಯ ಬರುವ ಪ್ರಶ್ನೆಯೇ ಇಲ್ಲ. ನಾವು ಈಗ ಒಗ್ಗಟ್ಟಾಗುತ್ತಿದ್ದೇವೆ. ಇದರಲ್ಲಿ ಯಾರಿಗೆ ತೊಂದರೆ ಆಗುತ್ತದೆ ಎಂಬುದು ಅರ್ಥವಾಗುತ್ತಿಲ್ಲ. ನಾನು ಬೆಂಗಳೂರಿನಲ್ಲಿ ನೀಡಿರುವ ಹೇಳಿಕೆಯ ಕುರಿತು ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರಿಗೂ ಮಾಹಿತಿ ನೀಡಿದ್ದೇನೆ ಎಂದರು.

ಈ ಮಧ್ಯೆ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿರುವ ಹಿನ್ನೆಲೆಯಲ್ಲಿ 2023ರ ಚುನಾವಣೆ ದೃಷ್ಠಿಯಿಂದ ಈ ವಿಚಾರ ಪ್ರಸ್ತಾಪಿಸುತ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಶಾಸಕ ಎಂ.ಬಿ.ಪಾಟೀಲ ಅವರು, ಕಾಂಗ್ರೆಸ್ ನಲ್ಲಿ 113 ಸ್ಥಾನಗಳನ್ನು ಗೆದ್ದ ನಂತರ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ. ಯಾವುದೇ ಸಮುದಾಯ, ಯಾವುದೇ ಪಕ್ಷಗಳಲ್ಲಿ ನಾವೇ ನಾಯಕರಾಗುತ್ತೇವೆ ಎಂದರೆ ಸಾಧ್ಯವಿಲ್ಲ. ಜನ ಒಪ್ಪಿ ಬೆಂಬಲ ನೀಡಿದಾಗ ಮಾತ್ರ ನಾವು ನಾಯಕರಾಗುತ್ತೇವೆ. ನಾನು ಈ ಹಿನ್ನೆಲೆಯಲ್ಲಿಯೇ ಚುನಾವಣೆಯ ನಂತರ ಸಭೆ ಸೇರುತ್ತೇನೆ ಎಂದು ಹೇಳಿದ್ದೇನೆ. ಈಗಲೇ ಹೇಳಿದರೆ ಅದಕ್ಕೆ ರಾಜಕೀಯ ಬಣ್ಣ ಕೊಡುತ್ತಾರೆ ಎಂಬ ಪರಿಜ್ಞಾನವು ನನಗೆ ಇದೆ ಎಂದು ಉತ್ತರಿಸಿದರು.

ತಾವು ಹೋರಾಟದಿಂದ ಹೆದರಿ ಹಿಂದೆ ಸರಿಯುತ್ತಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ನನ್ನ ತಂದೆ–ತಾಯಿ ಬಿಟ್ಟು ಯಾರಿಗೂ ಹೆದರಲ್ಲ. ನಾನು ಈ ಹಿಂದೆಯೂ ತಪ್ಪು ಮಾಡಿಲ್ಲ. ಇಂದು ಮಾಡಿಲ್ಲ. ಮುಂದೆಯೂ ತಪ್ಪು ಮಾಡಲ್ಲ. ಬೀದರನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮನದಾಳದ ಮಾತನ್ನು ಹೇಳಿದ್ದೇನೆ. ಕಳೆದ ಹೋರಾಟದ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳಿಂದ ಪೆಟ್ಟು ತಿಂದಿದ್ದೇನೆ. ಅಧಿಕಾರ ಕಳೆದುಕೊಂಡಿದ್ದೇನೆ ಎಂದು ಅಂದು ಮನದಾಳದ ಮಾತನ್ನು ಹೇಳಿದ್ದೇನೆ. ಇದರಲ್ಲಿ ನನಗೆ ಯಾವುದೇ ರಾಜಕೀಯ ಅಜಂಡಾ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಈ ಕುರಿತು ಮಾಜಿಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತನಾಡುತ್ತೀರಾ? ಎಂದು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ವಿಚಾರವಿಲ್ಲ. ಆದ್ಯಾಗ್ಯೂ ಯಡಿಯೂರಪ್ಪನವರು ನಮ್ಮ ಸಮಾಜದ ಹಿರಿಯ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳು. ಚುನಾವಣೆ ನಂತರ ಆ ಸಂದರ್ಭ ಬಂದಾಗ ಈ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.

ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನೆಡೆಯಾಗಿದೆ? ಎಂದು ಕೆಲವರು ನೀಡಿರುವ ಹೇಳಿಕೆಗಳ ಕುರಿತ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ತಮ್ಮ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಮುಜುಗರ ಆಗುವುದಿಲ್ಲ. ಈ ಹಿಂದೆ ನಾನು ಹೋರಾಟ ಮಾಡಿದಾಗ ಕಾಂಗ್ರೆಸ್ ಪಕ್ಷಕ್ಕೆ ಯಾವುದೆ ಹಿನ್ನೆಡೆ ಆಗಿಲ್ಲ. 2008ರಲ್ಲಿ ಹಾಗೂ 2013ರಲ್ಲಿ ಬಂದಷ್ಟೆ ಲಿಂಗಾಯತ ಮತಗಳು 2018ರಲ್ಲಿಯೂ ಬಂದಿದ್ದನ್ನು ದಾಖಲೆ ಸಮೇತ ಈ ಹಿಂದೆಯೆ ಮಾಹಿತಿ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.

Girl in a jacket
error: Content is protected !!