ಭಾರತದಲ್ಲಿ ವ್ಯಕ್ತಿಗತ ಕಥನವಾಗಿರುವ ಚರಿತ್ರೆ ಸಮಷ್ಟಿ ಸಂಕಥನವಾಗಿರುವ ಇತಿಹಾಸಗಳು ಪ್ರಭುತ್ವದ ಪಡಿಯಚ್ಚುಗಳಾಗಿವೆ. ಆರಂಭದಿಂದಲೂ ಅಗ್ರಹಾರ ಸಂಸ್ಕೃತಿಯ ವಶದಲ್ಲಿರುವ ಅಕ್ಷರಗಳು ಕೆಲವು ಶೂದ್ರ ಸಮುದಾಯಗಳನ್ನು ಚರಿತ್ರೆಯಿಂದ ದೂರವೇ ಉಳಿಸಿದವು. ಇದರಲ್ಲಿ ದಲಿತರದೇ ಸಿಂಹಪಾಲು ಎನ್ನಬಹುದು. ಹೀಗಾಗಿ ಪಾರಂಪರಿಕ ಚರಿತ್ರೆಯಲ್ಲಿ ದಲಿತ ಚರಿತ್ರೆಯು ಮೊದಲಿನಿಂದಲೂ ಮೌನ ಚರಿತ್ರೆ. ಇದು ಮಾತನಾಡಿದ್ದೇ ಅಪರೂಪ. ಹೌದು ಈ ನಾಡಿನ ಮೇಲೆ ನೂರಾರು ಪ್ರಭುತ್ವಗಳಿಗೆ ಹೆಗಲಾದ ದಲಿತರಿಗೆ ತಮ್ಮದೇ ಆದ ಒಂದು ಚರಿತ್ರೆಯು ಇರಲಿಲ್ಲವೆಂದರೆ ಅಚ್ಚರಿಯೂ ಆಗುತ್ತದಲ್ಲವೇ?
ದಲಿತರದು ಮೂಲತಃ ಮೌಖಿಕ ಚರಿತ್ರೆ ಮಾತು ಮತ್ತು ಮೌನಗಳ ಮೂಲಕವೇ ಹರಿದಾಡಿದ ಹಾದಿಯಿದು. ಚರಿತ್ರೆಯ ಸಂಗತಿಗೆ ಬಂದರೆ ವೇಳವಾಳಿ,ಲೆಂಕವಾಳಿ,ಗರುಡ,ಕೀಳ್ಗುಂ
೧.ಆರ್ಯರು ಇವರನ್ನು ದಸ್ಯುಗಳೆಂದು ಕರೆದರು. ಅಂದರೆ ರಾಕ್ಷಸರು ಎಂದರು
೨. ರಾಮಾಯಣದಲ್ಲಿ ಶಂಭೂಕನಿಗೆ ಶೂದ್ರನೆಂದು ಏಕಲವ್ಯನಿಗೆ ನಿಷಾದನೆಂದು ಕರೆದಿದ್ದಾರೆ.
೩. ಇವರನ್ನು ಆಧುನಿಕ ಕಾಲದವರೆಗೂ ಚಾಂಡಾಲ, ಪಂಚಮ, ಹೊಲೆಯ,ಮಾದಿಗ, ಅಂತ್ಯಜರೆಂದು ಕರೆದಿದ್ದಾರೆ.
ಮರಾಠಿಯ ಬಾಬೂರಾವ್ ಬಾಗೂಲ್ ಅವರು ಈ ಬೆಳವಣಿಗೆಯನ್ನು ಕುರಿತಂತೆ “ ಸಾವಿರಾರು ವರ್ಷಗಳಿಂದ ಯಾರ ಮೇಲೆ ಅನ್ಯಾಯವಾಗಿದೆಯೋ ಅಂಥ ಅಸ್ಪೃಷ್ಯರಿಗೆ ದಲಿತರು ಎನ್ನಬೇಕು” ಎಂದಿರುವುದು ಸರಿಯಾಗಿದೆ.
ಭಾರತದಲ್ಲಿ ಖಿಲ್ಜಿ ವಂಶದಿಂದ ಔರಂಗಜೇಬನವರೆಗೆ ದಲಿತರಿಗೆ ಆಶಾದಾಯಕ ಬೆಳಕೇ ಇರಲಿಲ್ಲ. ಮಧ್ಯಯುಗೀನ ಭಕ್ತಿ ಪಂಥದ ಆಸ್ತಿಕರನ್ನು ರಕ್ಷಿಸಿತಾದರೂ ಅದೂ ನಾಸ್ತಿಕರ ಕಡೆ ಮುಖಮಾಡಿ ಕರುಣೆ ತೋರಲಿಲ್ಲ. ಅಕ್ಬರನ ಕಾಲವನ್ನು ಬಿಟ್ಟರೆ ಉಳಿದ ಎಲ್ಲಾ ಕಡೆಗೂ ದಲಿತರು ಸೇವಕರಾಗಿ,ಗುಲಾಮರಾಗಿ, ದಾಸರಾಗಿ,ಸೈನಿಕರಾಗಿ,ಮನೋರಂಜಕರಾಗಿ ಸಾಗಿಬಂದವರು. ಕುತೂಹಲಕ್ಕೆ ಈ ಸಂಖ್ಯೆಯನ್ನು ನೋಡಿದಾಗ ಅಲ್ಲಾವುದ್ದೀನ್ ಖಿಜ್ಬಿಯ ಕಾಲಕ್ಕೆ ಐವತ್ತು ಸಾವಿರ ಗುಲಾಮರಿದ್ದರೆ,ಫಿರೋಜ್ ಶಹಾನ ಕಾಲಕ್ಕೆ ಎರಡು ಲಕ್ಷ ಗುಲಾಮರಿದ್ದರು. ಗುಲಾಮಿತನವು ನಮ್ಮ ಹೆಮ್ಮೆಯ ವಿಜಯನಗರ ಕಾಲದಲ್ಲೂ ಅತಿ ಹೆಚ್ಚು ಜನಪ್ರಿಯವಾಗಿತ್ತು ಎಂಬುದನ್ನು ಅಲ್ಲಿಗೆ ಬಂದ ಪ್ರವಾಸಿ ಕಥನಗಳೇ ಹೇಳುತ್ತವೆ. ಬಡತನ ಮೂಲದ ಹೆಣ್ಣು ಮಕ್ಕಳು ಇಲ್ಲಿ ನರ್ತಕಿಯರಾಗಿ ,ವೇಶ್ಯೆಯರಾಗಿದ್ದರಲ್ಲದೇ ಧನಿಕರ ಮನೆಗಳಲ್ಲಿ ಹೊಟ್ಟೆಪಾಡಿಗೆ ದುಡಿಯುತಿದ್ದರು. ಬಿಟ್ಟಿ ಆಳುಗಳಾಗಿದ್ದರು ಮಾರಾಟದ ವಸ್ತುಗಳಂತಿದ್ದರು. ದಾನ ನೀಡುವ ಸರಕಿನಂತಿದ್ದರು. ಬಹುತೇಕರು ಹುಲ್ಲು ಚಾವಣಿಗಳಲ್ಲಿ ಬದುಕುತಿದ್ದ ಬಡವರಾದರೂ ಇವರಲ್ಲಿ ಸೌಹಾರ್ಧತೆಯ ಸಂಸ್ಕಾರವಿತ್ತು ಎಂದು ಬಾರ್ಬೋಸನು ಬರೆದಿದ್ದಾನೆ. ಸತಿಯಂತಹ ಪದ್ದತಿ ಈ ವರ್ಗಗಳಲ್ಲಿ ಕಾಣದಿದ್ದರೂ ಬಾಲ್ಯವಿವಾಹ ಪದ್ದತಿ ಹೇರಳವಾಗಿತ್ತು.
ದಲಿತರ ಚರಿತ್ರೆಗೆ ಗೌರವದ ಲೇಪನವನ್ನೂ ಕೊಡುವ ಉದಾಹರಣೆಗೂ ಅಲ್ಲಲ್ಲಿ ಕಾಣಿಸುತ್ತವೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಾಗರು ದಲಿತರು ಎಂದು ತರ್ಕಿಸಿದ್ದಾರೆ. ಎಸ್.ಎಸ್. ಹಿರೇಮಠರು ಬದಾಮಿ ಚಾಲುಕ್ಯ ವಂಶದ ಪ್ರಖ್ಯಾತ ಅರಸ ಪುಲಕೇಶಿ ಹೆಸರಿನಲ್ಲೇ ಪೊಲೆ (ಪೊಲೆಯ) ರೂಪ ಇರುವುದರಿಂದ ಇವರ ಮೂಲವು ಹೊಲೆಯ ಮೂಲವೆನ್ನುತ್ತಾರೆ. ಮಾತೃ ಮೂಲೀಯವಾದ ಇವರು ಹಾರತೀ ಎಂಬುವವಳ ಪುತ್ರರು ಹಂದಿ ಗುರುತಿನವರು ಎನ್ನುತ್ತಾರೆ.ಬೇಸಾಯ ಗಾರರಾದ ಇವರನ್ನು ಸಲಿಕೆಯವರು ಎಂಬ ಕುಲದ ಚಿನ್ಹೆಯೂ ಇದೆ ಎನ್ನುತ್ತಾರೆ.
ಬಳಾರಿ ದೈವವು ದಲಿತರ ಮಾತೃಮೂಲೀಯ ಕುಟುಂಬವನ್ನು ಸೂಚಿಸುತ್ತದೆ.
ದಲಿತ ಕಾವ್ಯದ ತಾತ್ವಿಕತೆ:
ದಲಿತ ಕಾವ್ಯವು ಸಿಟ್ಟಿನ ರೊಚ್ಚಿನ ಪ್ರತಿಕಾರದ ಹಾದಿಯನ್ನು ಹಿಡಿದದ್ದು. ಇಲ್ಲಿ ವಸ್ತುವಿಗಿಂತಲೂ ಅದನ್ನು ಅಭಿವ್ಯಕ್ತಿಸುವ ರೀತಿಗೇ ಹೆಚ್ಚು ಪ್ರಾಧಾನ್ಯತೆ ದೊರಕಿದೆ. ಮಾರ್ಕ್ಸವಾದವನ್ನು ಮೊದಲು ತನ್ನ ಸೈದ್ಧಾಂತಿಕ ಪ್ರೇರಣೆಯನ್ನಾಗಿ ಸ್ವೀಕರಿಸಿದ ಕನ್ನಡ ದಲಿತ ಕಾವ್ಯವು ಪ್ರತಿಕಾರ ಸೂಚಕ ರೆಬೆಲಿಯನ್ ಆಗಿಯೇ ರೂಪುಗೊಂಡಿದೆ. ಶೋಷಣೆಯನ್ನೂ ತನ್ನ ಮೇಲೆರಗಿದ ಸಾಮಾಜಿಕ ಹಾಗೂ ಧಾರ್ಮಿಕ ಅಕ್ರಮಣಗಳ ವಾಸ್ತವಗಳನ್ನು ಗುರುತಿಸುವ ಪ್ರಯತ್ನಗಳು ಇಲ್ಲಿ ಕಾಣಿಸುತ್ತವೆ. ಸಂಘಟನೆಯನ್ನ ಹಾಗೂ ಸಂಘರ್ಷವನ್ನ ತನ್ನ ರೂಪವನ್ನಾಗಿ ಮಾಡಿಕೊಂಡ ಈ ಕಾವ್ಯವು ನೋವನ್ನೇ ತನ್ನ ಕೇಂದ್ರವಾಗಿಸಿಕೊಂಡಿದೆ. ಈ ನೆಲೆಯಲ್ಲಿ ಕನ್ನಡದ ಆಧುನಿಕ ಕಾವ್ಯವು ತನ್ನ ಆರಂಭವನ್ನು ಆನಂದದಿಂದ ರೂಪಿಸಿಕೊಂಡರೆ ನವ್ಯಕಾಲಕ್ಕೆ ಅರಿವನ್ನು ದಲಿತ ಕಾಲಕ್ಕೆ ನೋವನ್ನು ತನ್ನ ಕೇಂದ್ರಬಿಂದುವಾಗಿಸಿಕೊಂಡಿದೆ.
ಜನಾಂಗಗಳ ಚರಿತ್ರೆಗಳು ಪುರಾಣಗಳನ್ನು ತನ್ನ ಅಸ್ತಿತ್ವದ ಹೆಮ್ಮೆಯನ್ನಾಗಿ ರೂಪಿಸಿಕೊಂಡಂತೆ ದಲಿತ ಕಾವ್ಯವೂ ತನ್ನ ವಾದ್ಯಗಳನ್ನು ಮಿತ್ ಗಳಲ್ಲಿಟ್ಟು ನೋಡಿದೆ. ಗಂಗಾರಾಂ ಚಾಂಡಾಳರ ಕರ್ನಾಟಕ ದಲಿತ ಚಳುವಳಿ ಮತ್ತು ಬಿ.ಆರ್. ಅಂಬೇಡ್ಕರ್ ಪ್ರಭಾವ ಎನ್ನು ಕೃತಿಯಲ್ಲಿ” ಭೂಮಿಯೆಲ್ಲಾ ಜಲಪ್ರಳಯವಾಗಿ ಮುಳುಗಿದಾಗ ಒಂದು ಡೋಲು ಮಾತ್ರ ತೇಲುತ್ತಿರುತ್ತದೆ. ಈ ಡೋಲು ಹೊಲೆಯರು ಮತ್ತು ಶೂದ್ರಾತಿ ಶೂದ್ರರು ತಮ್ಮ ಬದುಕಿನಲ್ಲಿ ಹೊಂದಿದ ಅಮರವೂ ಆದ ಸೃಷ್ಟಿಶೀಲತೆಯ ಕಲೆಗಾರಿಕೆಯ ಜೀವಂತ ಪ್ರತೀಕವಾಗಿದೆ”.
“ ದಲಿತರ ಸಾಮಾಜಿಕ ಬದುಕು ದುರಂತಗಳ ಸರಮಾಲೆಯಾದರೆ ಸಾಂಸ್ಕೃತಿಕ ಬದುಕು ಚೇತೋಹಾರಿ ಜೀವಪರ ಮೌಲ್ಯಗಳಿಂದ ಕೂಡಿದೆ. ಇವರು ಬಡತನದಿಂದ ಬಸವಳಿದಿದ್ದರೂ ಇವರ ಬದುಕಿನ ಜೀವಸೆಲೆ ಎಂದೂ ಇವರಲ್ಲಿ ಬತ್ತಿಹೋಗಿಲ್ಲ.”
ನನ್ನ ಮಕ್ಕಳು ಒಂದುದಿನ
ಕಾಡಲಿಲ್ಲ ಬೇಡಲಿಲ್ಲ
ಆದರೂ ಬೆಳೆದರು
ಹುಲಿ ಹುಲಿಯಾಗಿ
ಮನಿ ಅಂಗಳದಲ್ಲಿ
ಬೀದಿ ಬೀದಿಗಳಲ್ಲಿ ( ಕಪ್ಪು ಕಾವ್ಯ- ಅರವಿಂದ ಮಾಲಗತ್ತಿ)
ದಲಿತ ವ್ಯಕ್ತಿತ್ವಗಳನ್ನ ಹುಲಿಯಾಗಿ ಆವಾಹಿಸುವ ಪ್ರಜ್ಞೆಯೇ ಅವರೊಳಗೆ ವಿಶಿಷ್ಟ ಸಾಮರ್ಥ್ಯವನ್ನು ಕುರಿತದ್ದಾಗಿದೆ. ಬದುಕಲು ಈ ವ್ಯವಸ್ಥೆಯಿಂ ಏನೂ ಸಿಕ್ಕದಿದ್ದರೂ ಅವರ ಸಹಜ ಸಾಮರ್ಥದಿಂದಲೇ ಹುಟ್ಟಿಕೊಳ್ಳುವ ಪ್ರಭಾವ ಶಾಲಿ ವ್ಯಕ್ತಿ ಚೇತನವನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಎಂಬ ಚಿಂತನೆ ಇಲ್ಲಿ ಕಂಡರೂ ಅಂಗಳ ಮತ್ತು ಬೀದಿ ಬೀದಿಗಳಲ್ಲಿ ಕುಣಿವ ಹುಲಿಗಳು ಮೊಹರಂ ಹಬ್ಬದ ದಲಿತರು ಎಂದು ಕಾಣುವಾಗ ಈ ಕಾವ್ಯ ನೋವನ್ನೂ ಅಷ್ಟೇ ತೀವ್ರವಾಗಿ ಕಾಣಿಸುತ್ತದೆ. ಏಕೆಂದರೆ ವಾಸ್ತವವಾಗಿ ದಲಿತರು ಏನಾಗಿದ್ದಾರೆ ಎಂಬ ನೆನಪನ್ನು ಜಿ.ಗೋವಿಂದಯ್ಯನವರ ಕಣ್ಣೀರ ಮಣ್ಣಲ್ಲಿ ಕಾವ್ಯವು ಸೂಚಿಸುತ್ತದೆ.
ಅಪ್ಪನಪ್ಪನ ನುಡಿಗೆ ತಲೆತೆತ್ತು
ಅತ್ತತ್ತು
ತಮ್ಮೆದೆಯ ರಕ್ತವನೆ ಹುತ್ತುತ್ತು
ಹಿಂದೂಯಿಸಮ್ ಗಾಂದಿಯಿಸಮ್ ಗಳ ನೆಟ್ಟು
ಕಣ್ಬಿಟ್ಟು
ಕೊತ ಕೊತ ಕುದಿದು ಕರ್ರಗಾದವರು
ಬರಿ ಹೆಸರಿಗೆ ಬಸುರಾದವರು ಇವರು
ನನ್ನವರು ಅವರಿವರು ಕಾಲಲ್ಲಿ ವದ್ದು ವದ್ದು
ಮಾಡಿದ್ದಕ್ಕೆ ಹೊಲೆ ಮಾದಿಗರಾದವರು.
ಚರಿತ್ರೆಯು ಹೆಮ್ಮೆಯನ್ನು ಶೋಧಿಸಿದರೂ ಪುರಾಣವು ಸುಂದರ ಹೊಳಹನ್ನು ಸುತ್ತಿದರೂ ಇವರ ವಾಸ್ತವ ಮಾತ್ರ ಕವಿತೆಗಳಲ್ಲಿ ನೋವುಣ್ಣುತ್ತಲೇ ಸಾಗುವ ವಾಸ್ತವತೆಯನ್ನು ದಲಿತ ಕಾವ್ಯಗಳಲ್ಲಿ ಕಾಣಬಹುದು.
ನೆರಕೆಯಲ್ಲಿ ನಿರುಕಿಸಿದ
ಸಿಲವಾರದ ಬಟ್ಟಲು ಹಿಡಿದು ಹೊರಗೆ
ಕುಕ್ಕುರುಗಾಲು ಕೂತು ಒಸಿ
ಕಾಪಿ ಉಯ್ರಿರಯ್ಯಾ ಎಂದು ಹಲುಬಿ
ಬೇಡುತಿದ್ದ ಅಪ್ಪನ ಕಂಡು ಬಿಸಿಯಾಗಿ ನಾನು
ತಳಮಳಗೊಂಡಿದ್ದು ಎಷ್ಟೋ ಸಲ ( ಮೂಡ್ನಾಡೋಡು ಚಿನ್ನಸ್ವಾಮಿ-ಊರ ತೆಂಕಣ ತಜ್ಞರು)
ದಲಿತ ಕಾವ್ಯಕ್ಕೆ ಪರಂಪರೆಯ ಹಂಗಿಲ್ಲ. ಅಲ್ಲಿಯ ಹಾಗೆ ರಮ್ಯ ಕತೆಗಳ ಹೇಳುವ ಉಮೇದು ಇಲ್ಲ. ಅದಕ್ಕೆ ಬೇಕಿರುವುದು ಜೀವಂತ ಬದುಕನ್ನು ಬವಣೆಯಿಂದ ಪಾರಾಗಿಸುವ ಬದಲಾವಣೆ ಮಾತ್ರ.
ಬ್ರಹ್ಮವೆಂಬುದು ಸುಮ್ಮನೆ
ಪರಬ್ರಹ್ಮವೆಂಬುದು ಸುಮ್ಮನೆ
ಅಗಣಿತ ತಾರಾಲೋಕ ಸುಮ್ಮನೆ
ಸೂರ್ಯಲೋಕ ಚಂದ್ರಲೋಕ ಸುಮ್ಮನೆ
ನಾಕ ನರಕ ಮೋಹ ಚರಕ ಸುಮ್ಮನೆ
ಎಲ್ಲಿಹುದು ಎಲ್ಲಿಹುದು ನಮ್ಮ ಮನೆ? ( ಮುಳ್ಳೂರು ನಾಗರಾಜ –ನೆಲದ ಜೋಗುಳ)
ತನ್ನ ತನದ ಅಸ್ಮಿತೆಯನ್ನ ಗಾಢವಾಗಿ ಶೋಧಿಸುವ ಈ ಪರಂಪರೆಯು ಸೂಜಿಗಾತ್ರದ ಕೊಳವೆಯಲ್ಲೂ ಮನುಷ್ಯನೊಬ್ಬನ ಹಾಡು ಹುಡುಕುವಂತಹದು.
ಬಿಸಿ ಉಸಿರಿಗೆ ದಿನಕರಿಗಿ ಹೋಗುತ್ತಿರುವಾಗ
ಮುರಿದು ಕಟ್ಟಬೇಕು ಮಾತ
ಇಲ್ಲದಿದ್ದರೆ ಅಲ್ಲಮನೆಂಬ ಅಲ್ಲಮ ಸಿಡಿದರೂ
ಸಿಡಿಯಹುದು ನನ್ನಂತವರೊಳಗಿಂದ
ಕ್ರಾಂತಿ ಎಂದರೆ ಪ್ರೇಮಪತ್ರ ಬರೆಯುವ ಹುಮ್ಮಸ್ಸಿನಂತೆ
ಬತ್ತಿ ಹೋಗುವುದಿಲ್ಲ ಇದು
ಹಚ್ಚಿ ಉರಿಸುತ್ತಿರಬೇಕು ಉಸಿರೆಂಬ ಉಸಿರಿನಲ್ಲಿ ( ಸುಬ್ಬು ಹೊಲೆಯಾರ್-ತಾಥಾಗತರ ಉಸಿರು )
ದಲಿತ ಕಾವ್ಯಕ್ಕೆ ಉರಿವ ಸಿಟ್ಟು ಜೊತೆಯಾದಂತೆಯೇ ತಣ್ಣನೆಯ ಕಾವ್ಯ ಸೌಂದರ್ಯವೂ ಜೊತೆಯಾಗಿರುವುದನ್ನು ಸಿದ್ಧಲಿಂಗಯ್ಯ,ಕೆ.ಬಿ.ಸಿದ್ದಯ್ಯ,ಮೂ
ಪ್ರೀತಿ ಎಂಬುದು ಗೆಳತಿ
ಮಿಂಚುಗಳ ಮಾಲೆಯೇನೆ
ಪಾರಿವಾಳದ ಎದೆಗೆ ಗುರಿಯಿಟ್ಟು ಬಿಟ್ಟ
ಬಾಣಗಳ ದಾಳಿಯೇನೆ ( ನಿನ್ನ ಕಣ್ಣಿನ ಮಾತು : ಸಿದ್ಧಲಿಂಗಯ್ಯ)
ಹಗಲು ಇರುಳಿನ ಬಲೆಯೊಳಗೆ
ಹಕ್ಕಿ ಸಿಲುಕಿದೆ
ಪಕ್ಕದಲ್ಲೇ ಬೇಟೆಗಾರರ ಒಲೆ
ಉರಿಯುತ್ತಿದೆ ( ಹಕ್ಕಿ ಮತ್ತು ಬಲೆ: ಎನ್.ಕೆ. ಹನುಮಂತಯ್ಯ)
ಕನ್ನಡ ದಲಿತ ಕಾವ್ಯವು ಇದು ತನ್ನ ಭಿನ್ನ ಭಿನ್ನ ರೂಪಗಳಿಂದ ಹೊಸ ಹೊಸ ಬಗೆಯ ನಿರೂಪಣಾ ಕ್ರಮಗಳಿಂದ ಗಟ್ಟಿ ಹೆಜ್ಜೆಗಳನ್ನು ಇಡುತ್ತಲೇ ಮುಂದುವರೆದಿದೆ. ಕನ್ನಡ ಕಾವ್ಯಕ್ಕೆ ದಲಿತ ಪ್ರಜ್ಞೆ ಪಂಪನಿಂದ ಪ್ರಾರಂಭವಾದರೂ ಅದಕ್ಕೊಂದು ಆಸರೆ ದೊರೆತದ್ದು ಬಸವಣ್ಣನಿಂದ ಅದು ಮತ್ತೆ ಅದಕ್ಕೊಂದು ಗಟ್ಟಿ ನೆಲೆ ದೊರೆತದ್ದು ಬುದ್ಧ ಮತ್ತು ಅಂಬೇಡ್ಕರರ ಚಿಂತನೆಗಳಿಂದ. ಈ ನದಿಗೆ ಸೇರಿಕೊಂಡ ಹೊಳೆಗಳಂತೆ ಪುಲೆ,ಪೆರಿಯಾರ್ ಚಿಂತನೆಗಳು ಪಕ್ಕದ ದಲಿತ ಪ್ಯಾಂಥರ್ಸ,ದಿಗಂಬರ ಕಾವ್ಯಗಳು ದೂರದ ಕಪ್ಪು ಕಾವ್ಯವು ಪ್ರೇರಣೆ ನೀಡಿದೆ ಎನ್ನಬಹುದು.
ಕನ್ನಡ ದಲಿತ ಕಾವ್ಯವು ವಿಶೇಷ ಎನ್ನಿಸಲು ಇಲ್ಲಿನ ವಸ್ತು ಮತ್ತು ಅಭಿವ್ಯಕ್ತಿ ಕ್ರಮಗಳೇ ಕಾರಣ. ಇದರ ಜನಪದ ಲಯಗಾರಿಕೆ,ನುಡಿಯೊಳಗೆ ಅಡಗಿದ ಕಾವ್ಯಾತ್ಮಕ ರೂಪಗಳು ಕಾರಣವಾಗಿವೆ. ನೇರವಾಗಿ ಮತ್ತು ಜೋರಾಗಿ ಸದ್ದು ಮಾಡುವ ಬೆಂಕಿಉಂಡೆಯ ಹಾಗಿ ಸಿಡಿಯುವ ,ಮಂಜು ಗಡ್ಡೆಯ ಹಾಗೆ ಒಳಗೇ ಅಡಗಿಕೊಂಡಿರುವ ಇದರ ಬಹುರೂಪಿ ಗುಣಗಳೂ ಈ ಕಾವ್ಯದೊಳಗಿವೆ.
ದಲಿತ ಕಾವ್ಯದಲ್ಲಿ ಕೆಲವರು ಪರಂಪರೆಯನ್ನು ಪ್ರಶ್ನಿಸಿ ಸಿಡಿದರೆ ಮತ್ತೆ ಕೆಲವರು ಅದನ್ನು ಮುರಿದು ಕಟ್ಟಲು ನೋಡಿದ್ದಾರೆ. ಕೆಲವರು ತಮಗಾದ ಜಾತಿಯ ಶೋಷಣೆಯನ್ನು ನೆನೆದು ಸಿಡಿದರೆ ಮತ್ತೆ ಕೆಲವರು ನೋವಿನ ಹಾದಿಗೆ ಬಿಡುಗಡೆಯ ದಾರಿ ಹುಡುಕಲು ಮಿಡಿದಿದ್ದಾರೆ.
ಪರಂಪರೆಯನ್ನು ಹಾಗೇ ಸುಮ್ಮನೆ ಇಣುಕಿದರೆ ಅಲ್ಲಿ ರಂಜನೆಗಾಗಿ ಶೃಂಗಾರಕ್ಕಾಗಿ ಹುಟ್ಟಿದ ಕಾವ್ಯವು ಧಾರ್ಮಿಕ ಪರಿವರ್ತನೆಯನ್ನು ಉಣಬಡಿಸಲು ಹೆಣಗಿದ ಕಾವ್ಯವು ಕಾಣಿಸುತ್ತದೆ. ಮುಂದೆ ಕಾವ್ಯವು ತನ್ನ ಸುಂದರ ವಸ್ತು ಮತ್ತು ಅಭಿವ್ಯಕ್ತಿಗಳಿಗಾಗಿ ಹೊಸ ಹೊಸ ರೂಪ ತಳೆಯುತ್ತಾ ಹೊರಟಿದ್ದನ್ನು ನೋಡಬಹುದು. ಈ ದಾರಿಯಲ್ಲಿ ಸಾಮಾಜಿಕ ಪ್ರಜ್ಞೆಯು ಒಂದು ಪ್ರತಿಕ್ರಿಯೆಯಂತೆಯೂ ಕಾಣಿಸಿದೆ. ಆದರೆ ಕಾವ್ಯವನ್ನೇ ಜನರು ತಿನ್ನುವ ಅನ್ನದ ಅಗುಳು ಎಂದದ್ದು ದಲಿತ ಕಾವ್ಯವೇ. ಇದು ರಾಜರ ಹಾಡಾಗದೆ,ಧರ್ಮದ ದೀಪವಾಗದೇ ನೆಲದ ಜೋಗುಳವಾಯಿತು. ಸೂಜಿ ಗಾತ್ರದ ಕೊಳವೆಯೊಳಗೂ ಮನುಷ್ಯನೊಬ್ಬನ ಹಾಡು ಹುಡುಕುವ ಶೋಧವಾಯಿತು. ಬಹು ರೂಪಗಳ ಬಹುಬಗೆಯ ಚಿಂತನೆಗಳ ಸಾವಿರಾರು ನದಿಯಾಯಿತು.