ಒಳಮೀಸಲಾತಿ ಸರ್ವೇ ಕಾರ್ಯ ವಿಸ್ತರಣೆ: ಸದುಪಯೋಗಪಡಿಸಿಕೊಳ್ಳಲು ಎಚ್.ಆಂಜನೇಯ ಆಗ್ರಹ

Share

ಚಿತ್ರದುರ್ಗ, ಜೂ.1- ಒಳಮೀಸಲಾತಿ ಜಾರಿಗಾಗಿ ರಾಜ್ಯದಲ್ಲಿ ಕೈಗೊಂಡಿರುವ ಸರ್ವೇ ಕಾರ್ಯ ಅವಧಿಯನ್ನು ಮತ್ತೇ ವಿಸ್ತರಿಸಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ರಾಜ್ಯಾದ್ಯಂತ ನಾನು ಸೇರಿ ಅನೇಕ ಮುಖಂಡರು, ಸಂಘಟನೆಗಳು ಪದಾಧಿಕಾರಿಳು ಸುತ್ತಾಡಿದ್ದು, ಮಾದಿಗ ಸಮುದಾಯದಲ್ಲಿ ಜಾತಿಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಜಾಗೃತಿ ಮೂಡಿಸಿದ್ದೇವೆ. ಆದರೂ ಬಹಳಷ್ಟು ಮಂದಿ ಹೊರಗುಳಿದಿದ್ದಾರೆ ಎಂದರು.

ಈ ಕಾರಣಕ್ಕೆ ಮತ್ತೇ ಸವೇ ಅವಧಿಯನ್ನು ಜೂ.8ರ ವರೆಗೆ ವಿಸ್ತರಿಸಿದ್ದು, ಈ ಅವಧಿಯೊಳಗೆ ಪರಿಶಿಷ್ಟ ಜಾತಿಯಲ್ಲಿನ ಪ್ರತಿಯೊಬ್ಬರೂ ನೋಂದಣಿ ಮಾಡಿಕೊಳ್ಳಬೇಕು. ಆಗತಾನೇ ಹುಟ್ಟಿದ ಮಗುವನ್ನು ಕೂಡ ನೋಂದಣಿ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ ಎಂದು ಹೇಳಿದರು.

ಮೇ 5ರಂದು ಆರಂಭಗೊಂಡ ಸಮೀಕ್ಷೆ ಆರಂಭದಲ್ಲಿ ಕುಂಟುತ್ತಾ, ಬಳಿಕ ವೇಗ ಪಡೆದುಕೊಂಡಿದೆ. ಆದರೆ, ಬೆಂಗಳೂರು ಪ್ರದೇಶದಲ್ಲಿ ಬಹಳಷ್ಟು ಮಂದಗತಿಯಲ್ಲಿ ಸಾಗುತ್ತಿದೆ. ಈ ಪ್ರದೇಶದಲ್ಲಿ ಹೆಚ್ಚು ಜಾಗೃತಿ ಜೊತೆಗೆ ಗಣತಿದಾರರು ಶ್ರಮವಹಿಸಿ ಬದ್ಧತೆಯಿಂದ ಕಾರ್ಯನಿರ್ವಹಿಸಬೇಕಿದೆ ಎಂದರು.

ಇಲ್ಲಿಯವರೆಗೂ 1.4 ಕೋಟಿ ಜನರು ಸರ್ವೇ ಕಾರ್ಯದಲ್ಲಿ ಪಾಲ್ಗೊಂಡಿದ್ದು. ಇನ್ನೂ ಬಹಳಷ್ಟು ಮಂದಿ ಹೊರಗುಳಿದಿದ್ದಾರೆ. ಇವರೆಲ್ಲರೂ ನೋಂದಣಿ ಮಾಡಿಕೊಂಡಲ್ಲಿ ಮಾತ್ರ ಮೀಸಲಾತಿಯಲ್ಲಿ ನ್ಯಾಯಯುತವಾಗಿ ತಮ್ಮ ಪಾಲನ್ನು ಪಡೆಯಲು ಸಾಧ್ಯ ಎಂದು ಹೇಳಿದರು.

ಒಳಮೀಸಲಾತಿ ಜಾರಿ ಬಳಿಕ ಎಕೆ, ಎಡಿ, ಆದಿಆಂಧ್ರ ಪದಗಳೇ ಇರುವುದಿಲ್ಲ. ಆಗ ಮೂಲ ಜಾತಿ ಆಧಾರದ ಮೇಲೆ ಮೀಸಲಾತಿ ದೊರೆಯಲಿದೆ. ಆದ್ದರಿಂದ ಜಾತಿಗಣತಿ ಸಮೀಕ್ಷೆ ಮಹತ್ವದ ಕಾಲಘಟ್ಟವಾಗಿದ್ದು, ಇದರಲ್ಲಿ ಪಾಲ್ಗೊಳ್ಳುವ ಮೂಲಕ ಮೀಸಲು ಹಕ್ಕು ಪಡೆದುಕೊಳ್ಳಬೇಕು ಎಂದರು.

ಬೆಂಗಳೂರಿನ ಬಹಳಷ್ಟು ಸ್ಲಂ ಪ್ರದೇಶದಲ್ಲಿ ಕೂಲಿಗಾರರೇ ಹೆಚ್ಚು. ಗಣತಿದಾರರು ಮನೆ ಬಾಗಿಲಿಗೆ ಬರುವ ವೇಳೆಗೆ ಕೆಲಸಕ್ಕೆ ಹೋಗಿರುತ್ತಾರೆ, ಇನ್ನೂ ಪ್ರತಿಷ್ಠಿತ ಬಡಾವಣೆಗಳಲ್ಲಿ ಸಾಮಾಜಿಕ ಸಮಸ್ಯೆ ಕಾರಣಕ್ಕೆ ನೋಂದಣಿ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಈಗಾಗಲೇ ನಾವೆಲ್ಲರೂ ಗಣತಿದಾರರ ಜೊತೆ ಮನೆ ಮನೆಗೆ ಭೇಟಿ ನೀಡಿ, ಜಾಗೃತಿ ಜೊತೆಗೆ ನೋಂದಣಿ ಮಾಡಿಸುವ ಕೆಲಸ ಮಾಡಲಾಗಿದೆ. ಆದರೂ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಕೆಲ ಪಡಿತರ ಚೀಟಿಯಲ್ಲಿ ಎಸ್ಸಿ ಸಮುದಾಯವರನ್ನು ಎಸ್‌ಟಿ ಎಂದು ನಮೋದಿಸಿರುವುದು ಕೂಡ ಸಮಸ್ಯೆ ಆಗಿದೆ. ಈ ಸಂಬಂಧ ಆಯೋಗಕ್ಕೆ ದೂರು ನೀಡಿದ್ದು, ತಕ್ಷಣ ಸರಿಪಡಿಸುವುದಾಗಿ ಭರವಸೆ ನೀಡಿದ್ದಾರೆ. ಜೊತೆಗೆ ಇಂತಹ ಪ್ರಕರಣಗಳ ಕುರಿತು ಸ್ಥಳೀಯವಾಗಿ ಸಮಾಜ ಕಲ್ಯಾಣ ಇಲಾಖೆಗೆ ದೂರು ನೀಡುತ್ತಿದ್ದಂತೆ ಅವರೇ ಸಮಸ್ಯೆ ಪರಿಹರಿಸಲಿದ್ದಾರೆ ಎಂದರು.

ಸರ್ಕಾರದ 36 ಇಲಾಖೆ ಹಾಗೂ ವಿಶ್ವವಿದ್ಯಾಲಯ ಸೇರಿ ಅನೇಕ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಜಾತಿವಾರು ಮಾಹಿತಿಯನ್ನು ನ್ಯಾ.ನಾಗಮೋಹನ್ ದಾಸ್ ಆಯೋಗ, ಸರ್ಕಾರ ಕೇಳಿದ್ದರೂ ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ. ಈ ಸಂಬಂಧ ತಕ್ಷಣ ಅಂತಹ ಅಧಿಕಾರಿಗಳಿಗೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ನೋಟಿಸ್ ಜಾರಿ ಮಾಡಬೇಕು. ಆಗ ಮಾತ್ರ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

ಸರ್ಕಾರಿ ಉದ್ಯೋಗದಲ್ಲಿ ಶೇ.1ರಷ್ಟು ಮಾತ್ರ ಮಾದಿಗರು ಅವಕಾಶ ಪಡೆದುಕೊಂಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಪೌರಕಾರ್ಮಿಕರಾಗಿದ್ದಾರೆ. ಈ ಎಲ್ಲ ಮಾಹಿತಿ ಪಡೆದುಕೊಂಡರೇ ಮೀಸಲಾತಿ ಹಂಚಿಕೆ ಮಾಡಲು ಹೆಚ್ಚು ಅನುಕೂಲ ಆಗಲಿದೆ ಎಂದರು.

ಉದ್ಯೋತ ನೇಮಕಾತಿಗೆ ತಡೆ ಹಾಕಿರುವುದರಿಂದ ಬಹಳಷ್ಟು ನಿರುದ್ಯೋಗಿಗಳು ವಯಸ್ಸಿನ ಮೀತಿ ಮೀರುವ ಆತಂಕಕ್ಕೆ ಸಿಲುಕಿದ್ದು, ಆದ್ದರಿಂದ ಸರ್ಕಾರ ವಯೋಮಿತಿಯನ್ನು ಒಂದು ವರ್ಷ ಸಡಿಲಗೊಳಿಸಬೇಕು ಎಂದು ಆಗ್ರಹಿಸಿದರು.

ಸಿದ್ದರಾಮಯ್ಯ ಅವರನ್ನು ಅಂಬೇಡ್ಕರ್‌ಗೆ ಹೋಲಿಸುವ ಮೂಲಕ ಸಿಎಂ ಓಲೈಕೆ ನಡೆಸುತ್ತಿದ್ದೀರಾ ಎಂಬ ಪ್ರಶ್ನೇಗೆ ಪ್ರತಿಕ್ರಿಯಿಸಿದ ಆಂಜನೇಯ, ಈ ವಿಷಯದಲ್ಲಿ ಯಾರೇ ಎಷ್ಟೇ ಟೀಕೆ ಮಾಡಲಿ, ಡೊಂಟ್‌ಕೇರ್. ನನ್ನ ಮಾತಿಗೆ ಈಗಲೂ ಬದ್ಧ ಎಂದರು.

ನಾಡಿನಲ್ಲಿ ಬಹಳಷ್ಟು ಮಠಾಧೀಶರನ್ನು ಆಧುನೀಕ ಬಸವಣ್ಣ, ನಡೆದಾಡುವ ದೇವರು ಎಂದು ಬಣ್ಣಿಸಿದ್ದೇವೆ. ಕಾರಣ ಅವರ ನಿಸ್ವಾರ್ಥ ಸೇವೆ, ಜನರಿಗೆ ಮಾಡಿದ ಒಳ್ಳೆಯ ಕೆಲಸಕ್ಕೆ ಕೃತಜ್ಞತೆ ಸಲ್ಲಿಸುವ ಮಾದರಿಯಾಗಿದೆ. ಅದೇ ರೀತಿ ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಮಾಡಿದಷ್ಟು ಅನುಕೂಲ ದೇಶದಲ್ಲಿ ಯಾವುದೇ ರಾಜಕಾರಣಿ ಮಾಡಿಲ್ಲ. ಎಸ್ಸಿಎಸ್ಪಿ, ಟಿಎಸ್ಪಿ ಕಾಯ್ದೆ, ಜನಸಂಖ್ಯೆ ಆಧರಿತ ಆರ್ಥಿಕ ಮೀಸಲು, ಗುತ್ತಿಗೆಯಲ್ಲಿ ಮೀಸಲಾತಿ ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಆದ್ದರಿಂದ ಅವರು ನಮ್ಮ ಪಾಲಿಗೆ ಅಂಬೇಡ್ಕರ್ ಆಗಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಪೌರಕಾರ್ಮಿಕರಿಗೆ ಸಿದ್ದರಾಮಯ್ಯ ಅನುಕೂಲ ಮಾಡಿಕೊಟ್ಟಷ್ಟು ಯಾವ ಮುಖ್ಯಮಂತ್ರಿಯೂ ಮಾಡಿಲ್ಲ. ಹೊರಗುತ್ತಿಗೆ ಪದ್ಧತಿಯಡಿ ಪೌರನೌಕರರನ್ನು ಎಜೆನ್ಸಿಯವರು ಸುಲಿಗೆ ಮಾಡುತ್ತಿದ್ದರು. ಇದಕ್ಕೆ ಕಡಿವಾಣ ಹಾಕಲು ಸ್ಥಳೀಯ ಸಂಸ್ಥೆಗಳೇ ಪೌರಕಾರ್ಮಿಕರನ್ನು ನೇರ ನೇಮಕಾತಿ ಮಾಡಿಕೊಂಡು ಅವರಿಗೆ ವೇತನ ನೀಡಲು ನಿಯಮ ಜಾರಿಗೊಳಿಸಲಾಗಿದೆ. ಜೊತೆಗೆ ಅನೇಕರನ್ನು ಖಾಯಂ ಗೊಳಿಸಲಾಗಿದೆ. ಜೊತೆಗೆ ಒಳಮೀಸಲಾತಿ ಜಾರಿಗೆ ದಿಟ್ಟ ಕ್ರಮಕೈಗೊಂಡಿದ್ದಾರೆ. ಹೀಗೆ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಅವರು ದಲಿತರ ಕಣ್ಣಿಗೆ ಅಂಬೇಡ್ಕರ್ ರೀತಿ ಕಾಣುತ್ತಿದ್ದಾರೆ. ಈ ಕಾರಣಕ್ಕೆ ಹೇಳಿದ್ದೇನೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ
ಜಿಪಂ ಮಾಜಿ ಸದಸ್ಯರಾದ ಬಿ.ಪಿ.ಪ್ರಕಾಶಮೂರ್ತಿ, ನರಸಿಂಹರಾಜು, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಮುಖಂಡರಾದ ರವೀಂದ್ರ, ಶರಣಪ್ಪ, ದೇವರಾಜ್, ತಮಕಟ್ಟು ಹನುಮಂತಪ್ಪ, ಐನಹಳ್ಳಿ ಗ್ರಾಪಂ ಅಧ್ಯಕ್ಷ ಆರ್.ಉಮೇಶ್ ಇತರರಿದ್ದರು.

Girl in a jacket
error: Content is protected !!