
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಬದುಕು ಜಟಕಾ ಬಂಡಿ.
ಬದುಕು ಸಂಕೀರ್ಣ. ಗೆರೆ ಕೊರೆದಂತೆ ಇರದು. ಕಡ್ಡಿ ಮುರಿದಂತಾಗದು. ಅದು ಜಟಕಾ ಬಂಡಿ=ಕುದುರೆ ಗಾಡಿ! ನಾವು ನೀವೆಲ್ಲ ಈ ಗಾಡಿ ಎಳೆವ ಕುದುರೆ! ಯಾರಿಗೂ ಕಾಣದ, ಅರಿಯದ ವಿಧಿ =ಹಣೆಯ ಬರಹ ಗಾಡಿಯ ಸಾಹೇಬ ಸಾರಥಿ! ಸಾರಥಿ ಹೇಳಿದಂತೆ ಕುದುರೆ ಕೇಳಬೇಕು, ನೂಕಿದತ್ತ ಸಾಗಬೇಕು, ಓಡಿಸಿದತ್ತ ಓಡಬೇಕು! ಮದುವೆಗೋ ಮಸಣಕೋ! ಇಲ್ಲದಿದ್ದರೆ ಕುದುರೆ ಬದಲು! ಇಷ್ಟವೋ ಅನಿಷ್ಟವೋ, ಸುಖ ದುಃಖ ಏರಿಳಿತಗಳನ್ನು ಅನುಭವಿಸಲೇಬೇಕು. ಅವು ಹಗಲು- ರಾತ್ರಿ, ಎಚ್ಚರ – ನಿದ್ದೆ – ಕನಸು, ರಸ್ತೆ ವೃತ್ತದಲ್ಲಿನ ಹಸಿರು -ಹಳದಿ- ಕೆಂಪು ದೀಪಗಳಂತೆ! ಚಕ್ರದ ಉರುಳುಗಳಂತೆ! ಬರುವವು ಹೋಗುವವು, ಖಾಯಂ ಉಳಿಯವು! ಬದಲಾಗುವವು, ಇಳಿದದ್ದು ಏರುವುದು, ಏರಿದ್ದು ಇಳಿಯುವುದು! ಜಗವಿದು ಒಬ್ಬ ಸುಖಿಸಲಾರೆನೆಂದ ಪರಮಾತ್ಮನ ವಿನೋದ ಕ್ರೀಡಾ ಲೀಲೆ, ಚದುರಂಗದಾಟ! ವಿಧಿಯಾಟ ತಪ್ಪಿಸಲು, ಬದಲಿಸಲು ಆಗದು! ಆದರೂ ನಮಗಿಹುದು ಉದ್ದನೆಯ ಹಗ್ಗ ಕಟ್ಟಿದ ಹಸುವಿನಂದದ ಸೀಮಿತ ಸ್ವಾತಂತ್ರ್ಯ! ಇಡೀ ಹಗ್ಗವನ್ನು ಗೂಟಕ್ಕೆ ಸುತ್ತಿಕೊಂಡು ಇರುವ ಅವಕಾಶ ಕಳೆದುಕೊಂಡರೆ ಅದು ಹಸುದೋಷ! ಜಗದ ಬಗೆಗಿನ ನಮ್ಮರಿವು ಸಾಗರದ ಹನಿ ಬಿಂದು! ಆನೆ ಎದುರಿನ ಇರುವೆ! ದೈವಲೀಲೆಯನೊಪ್ಪಿ, ನಮ್ಮಯ ಶಕ್ತಿ ಸಾಮರ್ಥ್ಯವನರಿತು, ಅತಿ ಸಾರ್ಥಕ ಹಿರಿ ಬದುಕ ವಿಸ್ತರಿಪುದು ಇರಲಿ ನಮ್ಮಯ ಹೆಗ್ಗುರಿ!!