ಶ್ರೀ. ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ
ಹರ ಮುನಿದರೂ ಗುರು ಕಾಯುವನು.
ಹರ ಶಿವ ಪರಮಾತ್ಮ ದೇವರು. ಅಂತ್ಯಗಾಣಿಸುವ, ಪಾಪ ಕಳೆಯುವ ವರನೀಡುವ ಕರುಣಾಮಯಿ ದೀನಾದಿ ರಕ್ಷಕ! ಆಯುಷ್ಯ ತೀರಿದ ಮಾರ್ಕಂಡೇಯನ ಹರ ಬದುಕಿಸಿದ! ಗುರು =ಅರಿವು, ಜ್ಞಾನದಾತ. ಸಿಟ್ಟಿನಲಿ ಧ್ವಂಸಕೆ ಕೈ ಹಾಕಿದವ, ಅರಿವಾಗುತ್ತಲೇ ರಕ್ಷಿಸುವ!ಉರಿಗಣ್ಣಿನಿಂದ ಮನ್ಮಥನ ಸುಟ್ಟ ಹರ, ರತಿದೇವಿ ಅಂಗಲಾಚಿ ಗೋಳಿಟ್ಟುದ ಕಂಡು ಕರಗಿ ಗುರುವಾಗಿ ಬದುಕಿಸಿದ! ಇಂದ್ರ ತ್ರಿಶಂಕುವಿಗೆ ಸ್ವರ್ಗ ಪ್ರವೇಶ ತಿರಸ್ಕರಿಸಿ ನೂಕಿದ! ಗುರು ವಿಶ್ವಾಮಿತ್ರ ಶಿಷ್ಯನಿಗೆ ಹೊಸ ಸ್ವರ್ಗವನ್ನೇ ಸೃಷ್ಟಿಸಿದ! ಬಲ್ಲ-ಹಿರಿಯರ ಸಿಟ್ಟಿನ ಹಿಂದೆ ಅಕ್ರಮದ ವಿರುದ್ಧ ಧ್ವನಿ ಇದೆ. ತಪ್ಪಿತಸ್ಥ ಅರಿವುಗೊಂಡು ಸರಿಗೊಂಡರೆ ಅದು ಕಾಯುವುದು. ಪೌರಾಣಿಕ ಹರ ಅಗೋಚರ ಕಾಲ್ಪನಿಕ! ಪುರಾತನ ಹರ ಶಿವ ನಾಮದ ವ್ಯಕ್ತಿ ಐತಿಹಾಸಿಕ. ಗುರು ನರರೂಪದ ಪ್ರತ್ಯಕ್ಷ ಹರ! ಜ್ಞಾನ ಬೆಳಕ ಬಿತ್ತಿ ದೈವದಿಕ್ಕನ್ನೇ ಬದಲಿಸಬಲ್ಲ! ಆಯುಷ್ಯ ತೀರಿ ಮೃತ್ಯು ಮುಟ್ಟಿದ ಭಕ್ತೆ ಹಿರೂಬಾಯಿ, ಭಕ್ತ ಶಿವಪ್ಪ, ಬಡಿಗೇರ ಕಾಳಪ್ಪ, ತುಕ್ಕಪ್ಪನ ಮಗ ಹನುಮಂತರನ್ನು ಗುರು ಸಿದ್ಧಾರೂಢರು ಮತ್ತೆ ಬದುಕಿಸಿದರು! ತಾಯಿ-ಗುರು, ಮಗು – ವಿದ್ಯಾರ್ಥಿಗೆ ಹೊಡೆವರು, ಕಣ್ಣೀರೊರಸಿ ಅಪ್ಪುವರು! ಗುರಿ ಇಟ್ಟು ಕೂಲ್ಲಲು ಮುಂದಾದ ಯೋಧ, ಶತ್ರು ಶಸ್ತ್ರ ತ್ಯಜಿಸಿ ಕೈ ಎತ್ತಿದರೆ ಯುದ್ಧ ನಿಲ್ಲಿಸುವ!
ಅರಿವಿನ ಗುರುವಿಗೆ ಬಾಗೋಣ, ಜ್ಞಾನವ ಪಡೆದು ಬೆಳಗೋಣ!!