ಸಿದ್ಧಸೂಕ್ತಿ ; ಬೆಳೆಯುವ ಸಿರಿ ಮೊಳಕೆಯಲ್ಲಿ

Share

 

ಬೆಳಗಿನ ಸೂರ್ಯೋದಯದ ಕಾಲದಲ್ಲಿ ಮನಸಿನ ಭಾವಗಳಿಗೆ ಒಂದಿಷ್ಟು ಹಿತವೆನಿಸುವ ಮಾತುಗಳು..ಸಂದೇಶದ ಅಣಿಮುತ್ತುಗಳನ್ನು ಇನ್ನೂ ಪ್ರತಿ ದಿನ ಬೆಳಗಿನ ಹೊತ್ತು ಡಾ.ಆರೂಢಭಾರತೀ ಸ್ವಾಮೀಜಿ ಅವರು ‘ಸಿದ್ಧಸೂಕ್ತಿ ‘ಯಲ್ಲಿ  ನೀಡುತ್ತಾರೆ.

 

ಡಾ ಆರೂಢಭಾರತೀ ಸ್ವಾಮೀಜಿ.
ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ, ರಾಮೋಹಳ್ಳಿ.

 

ಬೆಳೆಯುವ ಸಿರಿ ಮೊಳಕೆಯಲ್ಲಿ.

ಉತ್ತಿ ಗೊಬ್ಬರ ಹಾಕಿ ಬಿತ್ತಿ ನೀರುಣಿಸಿದ ಬೀಜ ಸಂಭ್ರಮದಿ ಮೊಳೆಯುವುದು. ಅದು ಉತ್ತಮ ಫಸಲು ನೀಡುವ ಸಂಕೇತ. ಸೊರಗುತಲೆದ್ದ ಮೊಳಕೆ ಬಾಡಿ ಒಣಗುವುದು, ಬದುಕಿದರೆ ಫಲ ಹೀಚು ಜೊಳ್ಳು ಉದುರುವುದು! ಕಟ್ಟಡದ ಅಡಿಪಾಯ ಸೂಚಿಪುದು ಅದರಾಯುಃ. ಸಂಸ್ಕಾರಯುತ ಪ್ರೌಢ ಆರೋಗ್ಯ ಮಹಿಳೆಗೆ ನವಮಾಸ ಬಳಿಕ ಜನಿಸುವ ದೃಢ ಶಿಶು ಬಿದಿಗೆಯ ಚಂದ್ರ! ಅಸಂಸ್ಕೃತ ಅಪ್ರಾಪ್ತ ರೋಗಿಷ್ಠ ಮಹಿಳೆಗೆ ಅವಧಿಪೂರ್ವ ಜನಿಸುವ ದುರ್ಬಲ ಶಿಶು ಬದುಕಿಗೆ ಮುಳ್ಳು!ಭವಿಷ್ಯ ಅಡಗಿದೆ ಬಾಲ್ಯದಲ್ಲಿ! ಹೆತ್ತವರು ಮಕ್ಕಳಿಗೆ ಮಾಡಬೇಕಾದದ್ದು ಆಸ್ತಿಯಲ್ಲ, ಮಕ್ಕಳನ್ನೇ ಆಸ್ತಿಯಾಗಿಸಿ! ಉತ್ತಮ ಆಹಾರ ನೀಡಿ ಆರೋಗ್ಯಯುತ ಶರೀರ ನಿರ್ಮಿಸಿ.ವಿದ್ಯೆ ನೀಡಿ, ಶ್ರೇಷ್ಠ ಜೀವನ ಕ್ರಮ ಕಲಿಸಿ. ವಿನಯ ಧೈರ್ಯ ಶೌರ್ಯ ಸಾಹಸ ಉತ್ಸಾಹ ಗುರು ಹಿರಿ ದೇಶ ದೈವಭಕ್ತಿ ಸೇವೆ ದುಡಿಮೆ ಆದರ್ಶಗಳನ್ನು ಮಗುವಿದ್ದಾಗಿನಿಂದಲೇ ಕಲಿಸಿ.ಮಿಕ್ಕಿದ್ದನ್ನು ಮುಂದೆ ಅದೇ ಗಳಿಸುವುದು! ಕಲಿಸದಿರೆ ಮಕ್ಕಳ ಹುಟ್ಟಿಸುವುದು ಪಡೆವುದು, ಗುರು ಹಿರಿಯರೆನಿಸುವುದು ಕೇಡು! ಬಸವ ಶಂಕರ ಸಿದ್ಧಾರೂಢ ಪರಮಹಂಸರಂಥವರ ಬಾಲ್ಯವ ಶೋಧಿಸಿ. ಛತ್ರಪತಿ ಶಿವಾಜಿಯ ವ್ಯಕ್ತಿತ್ವ ನಿರ್ಮಾಣಗೊಂಡದ್ದು ಬಾಲ್ಯದಲ್ಲಿ ತಾಯಿ ಜೀಜಾಬಾಯಿಯಿಂದ! ಸ್ವಾಮಿ ವಿವೇಕಾನಂದರಾಗಿ ಜಗಬೆರಗುಗೊಳಿಪ ವ್ಯಕ್ತಿತ್ವ ರೂಪುಗೊಂಡದ್ದು ನರೇಂದ್ರನ ಶೈಶವದಲ್ಲಿ ತಾಯಿ ಭುವನೇಶ್ವರಿ ತಂದೆ ವಿಶ್ವನಾಥರಿಂದ!
ಮಕ್ಕಳ ಬೆಳೆಸೋಣ, ಶ್ರೇಷ್ಠ ಬದುಕನು ಕಲಿಸೋಣ!!

Girl in a jacket
error: Content is protected !!