ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಮುಗ್ಗಲಗೇಡಿಗೆ ಶಾಸ್ತ್ರ ಹೇಳಿದರೆ,.. ತೊಳಕೊಳ್ಳುದ ಬಿಟ್ಟಿತಂತೆ.
ಮುಗ್ಗಲಗೇಡಿ=ಸೋಮಾರಿ. ಶಾಸ್ತ್ರ =ವೈರಾಗ್ಯ ಬೋಧಕ ವೇದಾಂತ. ಗುರುಗಳು ಪ್ರವಚನ ಮಾಡುತ್ತಿದ್ದರು:ಹುಟ್ಟು ಸಾವು, ಹಸಿವು ಬಾಯಾರಿಕೆ, ಸುಖ ದುಃಖ, ಇವೆಲ್ಲ ದೇಹಕ್ಕೆ. ಆತ್ಮನಿಗಲ್ಲ. ನಾನು ಆತ್ಮಾ, ದೇಹವಲ್ಲ. ಆತ್ಮಾ ನಿತ್ಯ, ಪರಿಪೂರ್ಣ, ನಿತ್ಯತೃಪ್ತ,ಸದಾ ಪರಿಶುದ್ಧ! ಹತ್ತಿರದ ಹುಟ್ಟು ಸೋಮಾರಿಯ ಕಿವಿಗೆ ಈ ಮಾತು ಬಿತ್ತು! ಪುಳಕಿತಗೊಂಡ, ಸಂತಸಪಟ್ಟ! ಶೌಚದ ನಂತರ ಒತ್ತಾಯಕ್ಕೆ… ತೊಳೆದುಕೊಳ್ಳುತ್ತಿದ್ದ ಆತ ಅಂದಿನಿಂದ ಅದನ್ನು ಬಿಟ್ಟ! “ನಾನು ಆತ್ಮಾ, ಪರಿಶುದ್ಧ” ಎಂದ ! ಊಟ ತಿಂಡಿ ಬಿಡಲಿಲ್ಲ! ಗುರು ಹೇಳಿದ, ದೇವರು ಎಲ್ಲಾ ಕಡೆ ಇದ್ದಾನೆ. ಮದ ಗಜ ಎದುರಾಯಿತು.ಮಾವುತ ಅತ್ತ ಹೋಗೆಂದು ಅರಚಿದ. ಶಿಷ್ಯ ಕದಲಲಿಲ್ಲ. ಆನೆಯೂ ದೇವರೆಂದ! ಮಾವುತನೂ ದೇವರೆಂದು ತಿಳಿಯಲಿಲ್ಲ! ಆನೆ ಹೊಸಕಿಹಾಕಿತು! ಜಗತ್ತು ಸುಳ್ಳು ಎಂದು ಉಪದೇಶ. ಬೆಳ್ಳಿ ಬಂಗಾರ ಮಿಂಚಿನ ವೇಷಭೂಷಸಹಿತ ಅದ್ದೂರಿ ಪೂಜೆ! ನಮಗಾಗಿ ಅಲ್ಲ, ಭಕ್ತರ ಖುಷಿಗೆ ಎಂದು ಸಮಜಾಯಿಷಿ! ಅರ್ಧಂಬರ್ಧ ತಿಳಿದು ಯದ್ವಾತದ್ವಾ ನಡೆಯುವವರು, ಮೂಗಿನ ನೇರಕ್ಕೆ ಅರ್ಥೈಸುವವರು ಎಡಬಿಡಂಗಿಗಳು. ಇಂಥವರೇ ಹೆಚ್ಚು! ನೆನಪಿರಲಿ, ಆತ್ಮನ ಧರ್ಮ ಆತ್ಮನಿಗೆ, ದೇಹದ ಧರ್ಮ ದೇಹಕ್ಕೆ. ಆತ್ಮ ಪಾರಮಾರ್ಥಿಕ, ದೇಹ ಲೌಕಿಕ!
ತತ್ತ್ವವ ಒಳಗೆ ಅರಿಯೋಣ, ಲೋಕದ ನಡೆಯನು ಒಪ್ಪೋಣ!!