
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ತ್ಯಾಗಿಯವನಂತರದಿ ಮಂಕುತಿಮ್ಮ
ತ್ಯಾಗಿ=ಬಿಟ್ಟವನು. ಪ್ರತಿ ದೇಹಧಾರಿ ಜಗದಲಿ ಎಲ್ಲರಂತೆ. ಆಟೋಟ ಊಟ ಉಸಿರಾಟ ಬಟ್ಟೆ ನೆಲೆ ಜಲ ಜನ ವಸ್ತು ಒಡನಾಟ ಪರಿಸರ ಹಣ ಆಸ್ತಿ ಎಲ್ಲ ಎಲ್ಲರಿಗೂ ಬೇಕು, ಬಿಡಲಾಗದು-ಬಿಟ್ಟಿರಲಾಗದು! ಕಾಡೇನು! ನಾಡೇನು! ಎಲ್ಲ ಎಲ್ಲಿಗೂ ಸುಳಿವುದು! ಹಾಗೆಂದು ಅಂತರ ಕಡಿವಾಣ ಬೇಕಿಲ್ಲ ಎಂದಲ್ಲ! ಎಲ್ಲೆಂದರಲ್ಲಿ ಸಿಕ್ಕಿದ್ದರಲ್ಲಿ ನುಸುಳಬೇಕೆಂದಲ್ಲ! ಬಿಡಬೇಕು, ಬಿಡದಿರೆ ಮನದ ಬಯಕೆ ತೊರೆದಿರಬೇಕು! ನಿಜದ ಅರಿವು ಪಕ್ವವಾದರೆ ಮನ ವಿಶಾಲ! ಅದು ವಿಷಯಗಳಿಗಂಟದು. ಎಣ್ಣೆ ಹಚ್ಚಿದ ಕೈಗೆ ಹಲಸಿನ ಜಿಡ್ಡು ಮೆತ್ತದಂತೆ! ಪಕ್ವ ಮನ ಮಾಗಿದ ಹಣ್ಣು! ಬಳ್ಳಿ ಎಳೆದರೂ ಕದಲದು! ಕಳಚಿ ಉಳಿವುದು! ಅದು ಸುಟ್ಟ ಬೀಜ! ಬಿತ್ತಿದರೂ ನಾಟದು! ಅದು ಹುಸಿ ಗುಂಡು! ಹಾರಿಸಿದರೂ ಕೊಲ್ಲದು! ಹೊರಗೆ ಲೋಕಾಸಕ್ತಿ, ಒಳಗೆ ವಿರಕ್ತಿ! ಹೊರಗೆ ಕೆಲಸದ ಚಿಂತೆ, ಒಳಗೆ ಉದಾಸೀನ! ನೃತ್ಯಗಾರ್ತಿ ತಲೆಯ ಮೇಲೆ ಉರಿವ ದೀಪವಿರಿಸಿದ ಬಿಂದಿಗೆ ಹೊತ್ತು ಸಾವಿರ ಜನರೆದುರು ವಾದ್ಯ ಪರಿಕರದ ಸಂಗೀತಕ್ಕನುಗುಣ ನರ್ತಿಸಿದರೂ ಅವಳ ಅಂತರ್ಲಕ್ಷ್ಯ ಬಿಂದಿಗೆಯತ್ತ! ತ್ಯಾಗಿ ಹೊರಗೆ ಸಂಸಾರಿ, ಮಠ ಮನೆಯ ಹೊರೆ! ಸುಖ ದುಃಖ ಸಂಭ್ರಮೀ! ಒಳಗೆ ನಿರ್ಲಿಪ್ತ ಯೋಗಿ! ಹೊರಗೆ ಕಾಗೆಗೆ ಕೋಗಿಲೆಬಣ್ಣ! ಒಳಗಿನ ಧ್ವನಿಯೇ ಬೇರೆ ಅಣ್ಣಾ! ಅರಮನೆ ಬೆಂಕಿಗಾಹುತಿಯಾದರೂ ಕುಂದದ ಜನಕ ಮಹಾರಾಜ ಇದಕೆ ನಿದರ್ಶನ!
ಬದುಕಿನ ನೊಗವನು ಎಳೆಯೋಣ! ಒಳಗೆ ವಿರಾಗಿಯಾಗೋಣ!!