
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ತೆರುವನಸ್ಥಿಯ ಧರೆಗೆ ಮಂಕುತಿಮ್ಮ.
ಬದುಕು ಸ್ಥಿರವಲ್ಲ. ಬುಗುರಿಯಂತೆ ಅಸ್ಥಿರ! ಗಿರ್ರನೆ ತಿರುಗುವ ಬುಗುರಿ ಸ್ಥಿರದಂತೆ ತೋರುವುದು. ಕ್ರಮೇಣ ಗತಿ ಕಡಿಮೆಯಾಗುವುದು. ಶಕ್ತಿ ಕುಂದುವುದು.ಭೂಶಕ್ತಿಗೆ ಸೋತು ಉರುಳಿ ಮಲಗುವುದು! ಅಂತೆಯೇ ಎಲ್ಲರ ಬದುಕು. ಜನಪತಿ ಭೂಪತಿ ಧನಪತಿ ದನಪತಿ ಜಗಪತಿ ಗೃಹಪತಿ ಮಠಪತಿ ಖಗಪತಿ ಸುರಪತಿ ಬಲಪತಿ ದಳಪತಿ ಗಜಪತಿ ವನಪತಿ ಕುಲಪತಿ ವಿದ್ಯಾಪತಿ ಪತಿ ಪತ್ನಿ ಯಾರಾದರೇನು? ಇದ್ದಂತೆ ಇರಲಾರರು! ಏರಿದವನು ಇಳಿಯಲೇಬೇಕು, ಉಬ್ಬಿದವನು ಸೊರಗಲೇಬೇಕು! ಕಾಲ ಕಳೆದಂತೆ ಎಲ್ಲ ಬರಿದಾಗುವುದು. ಬಲ ಸಾಮರ್ಥ್ಯ ಕ್ಷೀಣಿಸುವುದು. ಬಿಸಿ ರಕ್ತದ ಬಲಿಷ್ಠ ದೇಹ ಬಲಹೀನಗೊಳ್ಳುವುದು! ಅದು ಒಮ್ಮೆ ನೆಲಕ್ಕೊರಗುವುದು! ಸಾವಿರ ಸಾವಿರ ಸಂಖ್ಯೆಯ ಯುವ ಜನತೆಯ ಕಣ್ಮನ ಸೆಳೆದು ಲಗ್ಗೆ ಇಟ್ಟು, ಚಿತ್ರ ರಸಿಕರ ಹೃದಯ ಸಿಂಹಾಸನದ ಸಾಮ್ರಾಜ್ಞಿಯಾಗಿ ಮೆರೆದ ಅಭಿನಯ ಶಾರದೆಯ ಮುಪ್ಪಿನ ದೇಹ ಚಿರನಿದ್ರೆಗೆ ಜಾರಿ ಮಲಗಿತ್ತು, ಬೆರಳೆಣಿಕೆಯ ಜನ ಮಾತ್ರ ಸುತ್ತ ನೆರೆದಿತ್ತು!
ಇಷ್ಟೇ ಜೀವನ ಎನ್ನೋಣ! ಸಾಯುವ ಮುನ್ನ ಬದುಕೋಣ!!