
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಸಿದ್ಧಸೂಕ್ತಿ :
ಘಟವಿದ್ದರೆ ಮಠ.
ಘಟ ಶರೀರ, ಗುರು ಭಕ್ತ ವಿದ್ಯಾರ್ಥಿವೃಂದ. ಮಠ ಅಧ್ಯಾತ್ಮ ಕೇಂದ್ರ, ಘಟನಿಲಯ.ಒಂದಕ್ಕೊಂದು ಶೋಭೆ.ಘಟಕ್ಕೆ ತಕ್ಕ ಮಠಬೇಕು, ಮಠಕ್ಕೆ ತಕ್ಕ ಘಟಬೇಕು. ಘಟ ಮಠಗಳಲ್ಲಿ ಮುಖ್ಯ ಘಟ! ಗುರು ಭಕ್ತ ವಿದ್ಯಾರ್ಥಿಗಳಿಲ್ಲದ ಮಠ ಮಂದಿರ ಮಸೀದಿ ಚರ್ಚ್ ಭೂತಬಂಗಲೆ! ಮಠ ಹುಟ್ಟುವುದು ಘಟದಿಂದ. ಮಠದಿಂದ ಘಟ ಹುಟ್ಟುವುದಲ್ಲ! ಸಿದ್ಧಾರೂಢರು ನೆಲೆ ನಿಂತ ಸ್ಮಶಾನ ಇಂದು ಅತಿ ದೊಡ್ಡ ಮಠ! ಶಂಕರರಿಂದ ಚತುರಾಮ್ನಾಯ ಪೀಠ! ನಿಜಗುಣ ಶಿವಯೋಗಿ ಮಠ ಕಟ್ಟಲಿಲ್ಲ, ನೂರಾರು ಮಠಗಳಲಿ ಅವರದೇ ಶಾಸ್ತ್ರ! ಮಠ ನೋಡಿ, ಅದು ಪರರಿಗಾಗಬಾರದೆಂದು ಸ್ವಾಮಿಯಾಗುವುದಲ್ಲ, ಮಠ ಹುಡುಕಿಕೊಂಡು ಬರುವ, ಮಠ ನಿರ್ಮಿಸುವ ಘನ ವ್ಯಕ್ತಿತ್ವದ ನಿರ್ಮಾಣವಾಗಬೇಕು! ಇದು ಹಿರಿದು, ಪಂಚ ಸಪ್ತ ಮಠಾಧೀಶತನವಲ್ಲ! ಬೂದಿಲೇಪಿತ ಸ್ಮಶಾನ ವಾಸಿಪ ಬುರುಡೆಯಲಿ ತಿರಿದುಂಬ ಶಿವ ಯಾವ ಮಠಾಧೀಶ?ದೊಡ್ಡ ಮಠದ ಸ್ವಾಮಿ ದೊಡ್ಡ ಗುರುವೆಂದಲ್ಲ, ದೊಡ್ಡ ವ್ಯಕ್ತಿತ್ವದವ ದೊಡ್ಡವ! ಪೀಠ ಸಿಂಹಾಸನದಲಿ ಕುಳಿತ ಬೆಕ್ಕು ಗುರು-ರಾಜನಾಗಬಲ್ಲುದೇ? ಮಠಪತಿಯ ಭ್ರಮೆ ಏಕೆ? ಇಲ್ಲೆಂಬ ಕೊರಗೇಕೆ? ಮಠಕ್ಕಾಗಿ ಬಲಿ ಏಕೆ? ಉಸಿರು ಕಟ್ಟುವ ನೆಲೆ ಏಕೆ? ನೀನಾಗು ನಿಜ ಗುರು, ಬಯಲಿಗೆ ಧಾವಿಸು! ವಿಶಾಲವೀ ಜಗ, ನೀ ನಿಂತ ನೆಲ ಕ್ಷೇತ್ರ!
ಗುರುತಮ ಗುರುತನ ಗಳಿಸೋಣ, ಬಯಲಾಲಯ ಮಠಪತಿ ಆಗೋಣ!!