ಆಲಮಟ್ಟಿ,ಜು,೩೧: ಆಲಮಟ್ಟಿ ಜಲಾಶಯದ ಹೊರಹರಿವನ್ನು ಗುರುವಾರ ಮಧ್ಯರಾತ್ರಿಯಿಂದ ಹೆಚ್ಚಿಸಲಾಗಿದ್ದು, ೪.೨೦ ಲಕ್ಷ ಕ್ಯುಸೆಕ್ ನೀರನ್ನು ಜಲಾಶಯದ ಮೂಲಕ ಬಿಡಲಾಗುತ್ತಿದೆ.
ಇದರಿಂದ ಪ್ರವಾಹದ ಆತಂಕ ಇನ್ನಷ್ಟು ಹೆಚ್ಚಿದ್ದು, ಜಲಾಶಯದ ಒಳಹರಿವು ಕೂಡಾ ೪.೨೦ ಲಕ್ಷ ಕ್ಯುಸೆಕ್ ಇದೆ. ಸದ್ಯ ೫೧೯.೬೦ ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ ೫೧೭.೧೭ ಮೀ.ವರೆಗೆ ನೀರಿದ್ದು, ೮೬.೫೯ ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.
ಆಲಮಟ್ಟಿಯಿಂದ ಹೊರಹರಿವು ಹೆಚ್ಚಿದ್ದರಿಂದ ನಿಡಗುಂದಿ ತಾಲ್ಲೂಕಿನ ಕೃಷ್ಣಾ ತೀರದ ಗ್ರಾಮಗಳಾದ ಅರಳದಿನ್ನಿ, ಕಾಶೀನಕುಂಟಿ, ಯಲ್ಲಮ್ಮನೂದಿಹಾಳ, ಯಲಗೂರ, ಮಸೂತಿ ಗ್ರಾಮzಲ್ಲಿ ಇಲ್ಲಿಯವರೆಗೆ ೧೧೫೦ ಎಕರೆ ಜಮೀನು ಜಲಾವೃತಗೊಂಡಿದೆ ಎಂದು ತಹಶೀಲ್ದಾರ್ ಸತೀಶ ಕೂಡಲಗಿ ತಿಳಿಸಿದರು.
ಜಾಕವೆಲ್ ಸಂಪೂರ್ಣ ಜಲಾವೃತ:
ಆಲಮಟ್ಟಿ ಜಲಾಶಯದ ಮುಂಭಾಗದ ಯಲಗೂರ ಬಳಿ ಇರುವ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯ ಜಾಕವೆಲ್ ಸಂಪೂರ್ಣ ಜಲಾವೃತಗೊಂಡಿದೆ. ಮುಂಜಾಗೃತೆಯ ಕ್ರಮವಾಗಿ ಅಲ್ಲಿದ್ದ ಪಂಪಸೆಟ್ನ್ನು ಶುಕ್ರವಾರ ಸ್ಥಳಾಂತರಿಸಲಾಗಿದೆ, ಇದರಿಂದ ನಿಡಗುಂದಿ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮಳೆಯ ಅಬ್ಬರ ಕಡಿಮೆಯಾಗಿದ್ದು, ರಾಜಾಪುರ ಬ್ಯಾರೇಜ್ ನಲ್ಲಿಯೂ ಒಳಹರಿವು ಶುಕ್ರವಾರ ಸಂಜೆ ಕಡಿಮೆಯಾಗಿದೆ. ಶನಿವಾರದ ವೇಳೆಗೆ ಒಳಹರಿವು ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.