ನವ ದೆಹಲಿ,ಜೂ, ೨೪;ಕೊರೊನಾ ಸೋಂಕಿನ ಸಂಕಷ್ಟದಲ್ಲಿಯೂ ಆಂಧ್ರ ಸರ್ಕಾರ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವುದನ್ನು ಪ್ರಶ್ನಿಸಿರು ಸುಪ್ರೀಂಕೋರ್ಟ್ ಒಂದು ವೇಳೆ ಪರೀಕ್ಷೆ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಒಂದು ಸಾವಾದರೂ ಅದಕ್ಕೆ ಆ ಸರ್ಕಾರವೇ ನೇರ ಹೊಣೆಯಾಗಲಿದ್ದು ಸಾವನ್ನಪ್ಪಿದ ವಿದ್ಯಾರ್ಥಿ ಕುಟುಂಬಕ್ಕೆ ಒಂದು ಕೋಟಿ ರೂ ಪರಿಹಾರ ನೀಡುವಂತೆ ಎಚ್ಚರಿಸಿದೆ
ಆಂಧ್ರಪ್ರದೇಶ ೧೨ನೇ ತರಗತಿ ಪರೀಕ್ಷೆ ನಡೆಸಲು ಮುಂದಾಗಿರುವ ನಿರ್ಣಯವನ್ನು ಖಂಡಿಸಿ ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಇಂದು ಈ ಅರ್ಜಿಯ ವಿಚಾರಣೆಗೆ ಮುಂದಾದ ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ದ್ವಿಸದಸ್ಯ ಪೀಠ, “ಇತರೆ ರಾಜ್ಯಗಳ ಪರೀಕ್ಷಾ ಮಂಡಳಿಗಳು ನೆಲದ ವಾಸ್ತವತೆಯ ಆಧಾರದ ಮೇಲೆ ಪ್ರಜ್ಞಾಪೂರ್ವಕವಾಗಿ ಪರೀಕ್ಷೆಗಳನ್ನು ನಡೆಸದಿರುವ ನಿರ್ಧಾರವನ್ನು ತೆಗೆದುಕೊಂಡಿವೆ.
ಈ ನಡುವೆ ಹೊಸ ರೂಪಾಂತರವಾದ ’ಡೆಲ್ಟಾ ಪ್ಲಸ್’ ಸೋಂಕು ಭಯದ ವಾತಾವರಣ ನಿರ್ಮಾಣ ಮಾಡಿದೆ. ಈ ಸೋಂಕು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಎಂಬುದು ಯಾರಿಗೂ ಸ್ಪಷ್ಟವಾಗಿಲ್ಲ. ಇಂತಹ ಸಂದರ್ಭದಲ್ಲಿ ೧೨ನೇ ತರಗತಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ಯಾರು ತೆಗೆದುಕೊಂಡರು ಮತ್ತು ಯಾವ ಆಧಾರದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ? ” ಎಂದು ನ್ಯಾಯಾಧೀಶರು ಕಟು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
“ಇದು ಪ್ರತಿಯೊಬ್ಬರ ಆರೋಗ್ಯದ ಪ್ರಶ್ನೆಯಾಗಿದೆ, ಪರೀಕ್ಷೆಗಳನ್ನು ನಡೆಸುವುದು ಮಾತ್ರವಲ್ಲ. ನಿಮ್ಮ ಯೋಜನೆಯ ಬಗ್ಗೆ ನಮಗೆ ಮನವರಿಕೆಯಾಗುತ್ತಿಲ್ಲ. ಹೀಗಾಗಿ ಪರೀಕ್ಷೆಗಳನ್ನು ನಡೆಸುವ ನಿರ್ಧಾರವನ್ನು ತೆಗೆದುಕೊಂಡ ವ್ಯಕ್ತಿ ಅಥವಾ ಸರ್ಕಾರಿ ಸಂಸ್ಥೆಯನ್ನು ಗುರುತಿಸಿ ನ್ಯಾಯಾಲಯಕ್ಕೆ ವರದಿ ನೀಡಿ” ಎಂದು ನ್ಯಾಯಾಲಯವು ಆಂಧ್ರಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ಮುಂಚೆಯೇ ಆಂಧ್ರಪ್ರದೇಶ ಸರ್ಕಾರ ಹೈದ್ರಾಬಾದ್ ಉಚ್ಛ ನ್ಯಾಯಾಲಯಕ್ಕೆ ೧೨ನೇ ತರಗತಿ ಪರೀಕ್ಷೆ ನಡೆಸುವ ಬಗ್ಗೆ ಅಫಿಡವಿಟ್? ಸಲ್ಲಿಸಿತ್ತು. ಈ ಅಫಿಡವಿಟ್?ನಲ್ಲಿ, “ಬೇರೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ ಸರ್ಕಾರ ೧೨ನೇ ತರಗತಿ ಅಂತಿಮ ಪರೀಕ್ಷೆಗಳನ್ನು ನಡೆಸಲು ಮುಂದಾಗಿದ್ದೇವೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಸುಧಾರಿತ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ನಡೆಸಲಾಗುವುದು.
ಶಾಲೆಗಳ ಆಂತರಿಕ ಅಂಕಗಳ ಮೇಲೆ ರಾಜ್ಯ ಶಿಕ್ಷಣ ಮಂಡಳಿಗೆ ಯಾವುದೇ ನಿಯಂತ್ರಣವಿಲ್ಲ. ಇತರ ರಾಜ್ಯಗಳು ಪರ್ಯಾಯ ಮೌಲ್ಯಮಾಪನ ವ್ಯವಸ್ಥೆಯನ್ನು ಆಧಾರವಾಗಿ ತೆಗೆದುಕೊಂಡಿವೆ – ಮತ್ತು ಆಂತರಿಕ ಮೌಲ್ಯಮಾಪನಗಳು ೧೨ ನೇ ತರಗತಿ ಫಲಿತಾಂಶಗಳನ್ನು ಘೋಷಿಸುವಷ್ಟು ನಿಖರವಾಗಿಲ್ಲದಿರಬಹುದು. ಹೀಗಾಗಿ ನಾವು ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ” ಎಂದು ಆಂಧ್ರಪ್ರದೇಶ ಸರ್ಕಾರ ಅಫಿಡವಿಟ್?ನಲ್ಲಿ ತಿಳಿಸಿದೆ.