ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಆಟ ಆಡಿ ಪಾಠ ಕಲಿ.
ವ್ಯಕ್ತಿ ಸದಾ ಬೆಳೆಯಬೇಕು. ದೈಹಿಕ ಬೆಳವಣಿಗೆಯ ಜೊತೆ ಜೊತೆಗೆ ಬೌದ್ಧಿಕ ನೈತಿಕ ಬೆಳವಣಿಗೆಯೂ ಆಗಬೇಕು. ದೇಹಬೆಳವಣಿಗೆಗೆ ಆಹಾರವಷ್ಟೇ ಸಾಲದು. ದೈಹಿಕ ಚಟುವಟಿಕೆ ಆಹಾರ ಜೀರ್ಣ ಮಾಡಿ ದೇಹದ ಒಳಹೊರಗನ್ನು ಬೆಳೆಸುವುದು. ಆಟೋಟಗಳು ದೈಹಿಕ ಚಟುವಟಿಕೆ ನೀಡಿ ಆರೋಗ್ಯ ನೀಡುವವು,ಸ್ಪರ್ಧಾತ್ಮಕ ಮನೋಭಾವ ಉತ್ತೇಜಿಸುವವು, ಪಾಠ ಕಲಿಸುವವು! ಆಟ ಪ್ರಾಯೋಗಿಕ! ಅದು ಬೌದ್ಧಿಕ ಜ್ಞಾನ ವೃದ್ಧಿಸುವುದು, ಗಟ್ಟಿಗೊಳಿಸುವುದು.ಓದಿನಲ್ಲೂ ಪೈಪೋಟಿ ಹುಟ್ಟಿಸುವುದು! ಬದುಕೇ ನಿಜ ಆಟ. ಬದುಕಾಟ ಗೆದ್ದವ ಗೆದ್ದವ. ಬದುಕಾಟದಲಿ ಪ್ರತಿ ಕ್ಷಣ ಪಾಠ! ಆಟವಿಲ್ಲದ ಪಾಠ ಜಡ. ಪಾಠವಿಲ್ಲದ ಆಟ ಕಸ! ಆಟೋಟ ಪಾಠ ಪೂರಕವಿರಲಿ. ಮೈಗುದ್ದುವ ಪ್ರಾಣ ನುಂಗುವ ಬೆಂಕಿ ದ್ವೇಷಕಾರುವ ಆಟಗಳ ಹಂಗು ಬೇಡ. ಚದುರಂಗ ಕಬಡ್ಡಿಯಂಥ ಭಾರತೀಯ ಆಟವಿರಲಿ. ಆಟದ ಗೀಳು, ಸೋಲಿಗೆ ಸೇಡು, ಹತಾಶೆ ಬೇಡ. ಬದುಕು ಗುರಿ, ಆಟವಲ್ಲ!
ಆಟವನಾಡೋಣ, ಜೀವನ ಪಾಠವ ಕಲಿಯೋಣ!!