ವಿಶಾಲಾ ಆರಾಧ್ಯ
ಗಜ಼ಲ್
ಏನು ಮಾಯೆಯೇ ಗೆಳತಿ
ಯಾವ ಛಾಯೆಯೇ …
ಏನು ಮಾಯೆ ಯಾವ ಛಾಯೆ
ಸೆಳೆಯಿತೆನ್ನ ಭವದ ಮಾಯೇ
ಕರೆದಲ್ಲಿಗೆ ಕೊಳಲ ಕರೆಗೆ
ಕೊರಳು ಸಾಗಿದೇ..!!
ಮನದ ವೀಣೆ ನುಡಿದಿದೆ
ಭಾವ ತಂತಿ ಮೀಟಿ
ಎದೆಯ ಮರುಗ ಘಮಿಸಿದೆ
ಜೀವ ಸೀಮೆ ದಾಟಿ
ಸಾಗಿ ಬಂದು ಪ್ರೇಮ ತೀರದಿ
ಮನವು ಅಲೆದಿದೆ
ಒಲವ ಅರಸಿದೆ..!!
ಭಾವಗಳಿಗೆ ಚಿಗುರು ಮೂಡಿ
ಕಾವ್ಯದಲ್ಲಿ ಇಣುಕಿವೆ
ಜೀವವಿಂದು ಹಗುರವಾಗಿ
ಬಾನಿನಲ್ಲಿ ತೇಲಿದೆ
ಮನದ ಬಸಿರು ಬಲಿತು ರಾಗ
ಮೋಹನನ ಕರೆದಿದೆ..
ಸಮ್ಮೋಹನವಾಗಿದೆ!!
ಸಟೆಯಲ್ಲವೇ ಗೆಳತೀ
ಸೋತು ಹೋದೆನೇ..
ದಿಟವಹುದು ಶ್ಯಾಮನಲ್ಲಿ
ಬರೆತು ಹೋದೆನೇ
ಮಾಟಗಾರ ಮೋಡಿ ಮಾಡಿ
ಮಾಯವಾದನೇ !!
ತೋಳಬಂಧಿಯಾಗಿ ಜೀವ
ಮಧುರ ತಲ್ಲಣ..
ಬಾಳ ಯಾನದಲ್ಲಿ ಇದುವೇ
ಒಲವ ಕಂಪನ
ಕಾಲದೊಳಗೆ ಲೀನವಾಗಿ
ಒಡನೆ ಸಾಗಿ ಹೋಗುವೇ !!