ಗಿರಿಶ್ ಕರ್ನಾಡ್ ಎಂಬ ಅಗಾಧ ಪ್ರತಿಭೆಯ ನೆನದು..

Share

ಅವರು ಅತ್ಯಂತ ಕ್ರಿಯಾಶೀಲಾ ಮತ್ತು ಪ್ರಗತಿಪರ ಚಿಂತಕರು ಸೈದ್ದಾಂತಿಕನಿಲುವುಗಳ ಬದ್ಧತೆಯಲ್ಲೇ ಬದುಕಿದ ಮಹಾನ್ ಪ್ರತಿಭೆ ರಂಗಭೂಮಿ ತಜ್ಞರು,ನಟರು ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಟ್ಟದ್ದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತಮ್ಮದೇ ಆದ ಹೆಸರನ್ನು ಪಡೆದುಕೊಂಡ ಗಿರೀಶ್ ಕಾರ್ನಾಡ್ ಅವರ ಜನ್ಮ ದಿನ ಇಂದು ಆ ನಿಮಿತ್ತವಾಗಿ ಅವರ ಕುರಿತ ಒಂದು ಲೇಖನ.

ಪುರಾಣ,ಇತಿಹಾಸ,ಜಾನಪದ ಸೊಗಡುಗಳ ಅಂಶಗಳನ್ನಿಟ್ಟುಕೊಂಡು ಬರೆದ ಅವರ ನಾಟಕಗಳು ಪಡೆದ ಯಶಸ್ಸು ಅವರನ್ನು ಉತ್ತಂಗಕ್ಕೇರಿಸಿತು ಸಾಹಿತ್ಯದ ವಲಯದಲ್ಲಿ ಹೆಚ್ಚು ಗುರುತಿಸಿಕೊಂಡರು ಸದಾ ಒಂದಲ್ಲೊಂದು ಚಿಂತನೆಯಲ್ಲಿಯೇ ತೊಡಗಿರುತ್ತಿದ್ದ ಅವರು ಕರ್ನಾಟಕದ ಮಾಣಿಕ್ಯರಂತಿದ್ದವರು.
ಇಂತ ಮಹಾನ್ ವ್ಯಕ್ತಿ ಚಿಂತಕ ಪ್ರಗತಿಶೀಲ ವ್ಯಕ್ತಿತ್ವವುಳ್ಳ ಅವರು ೨೦೧೯ ಜೂನ್ ೧೦ ರಂದು ಇಹ ಲೋಕ ತ್ಯಜಿಸಿದಾಗ ಅವರ ವ್ಯಕ್ತಿತ್ವದ ಅರಿವು ಅವರ ಅಗಾಧ ಪ್ರತಿಭೆಯ ನೆನಪುಗಳು ಮಾತ್ರ ಉಳಿದಿವೆ:


ಗಿರೀಶ್ ಕಾರ್ನಾಡರು ೧೯೩೪ರ ಮೇ ೧೯ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದರು. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು.

ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಹಾಗೂ ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದರು. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಅನೇಕ ಗೌರವ ಮತ್ತು ಪದವಿಗಳನ್ನು ಪಡೆದಿದ್ದರು.

ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದವರ ಕೃತಿಗಳು ಪ್ರಶಸ್ತಿ ಬಂದ ಮೇಲೆ ಕೃತಿಗಳ ಮೂಲಭಾಷೆಯಿಂದ ಇತರ ಭಾಷೆಗಳಿಗೆ ಅನುವಾದಿತವಾಗುವುದು ಸರ್ವೇ ಸಾಮಾನ್ಯವಾದರೆ ಕಾರ್ನಾಡರ ಕೃತಿಗಳು ಪ್ರಶಸ್ತಿ ಬರುವ ಮುಂಚೆಯೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿ, ಆ ಭಾಷೆಗಳಲ್ಲಿ ಪ್ರಯೋಗವೂ ಆಗಿ ಯಶಸ್ವಿಯಾಗಿದ್ದವು, ಇಂಗ್ಲಿಷ್ ಭಾಷೆಯೂ ಸೇರಿದಂತೆ ಇವರ ನಾಟಕಗಳ ಪ್ರಯೋಗ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇಬ್ರಾಹಿಂ ಅಲ್ಕಾಜಿಯವರು ನಿರ್ದೇಶಿಸಿದ ‘ತುಘಲಕ್’ ವಿದೇಶ ಸಂಚಾರವನ್ನೇ ಕೈಗೊಂಡಿತ್ತು. ‘ಹಯವದನ’ ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಅಲ್ಲಿನವರಿಂದಲೇ ಪ್ರಯೋಗಗೊಂಡಿತ್ತು. ‘ನಾಗಮಂಡಲ’ವನ್ನು ಅಮೆರಿಕದ ಗಥ್ರಿ ಥಿಯೇಟರಿನವರು ಪ್ರದರ್ಶಿಸಿದರು. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು.

ಕನ್ನಡ ರಂಗಭೂಮಿಯಂತೂ ಕಾರ್ನಾಡರಿಗೆ ಋಣಿಯಾಗಿದೆ. ೭೦ರ ದಶಕದ ಬಯಲು ರಂಗೋತ್ಸವದ ಯಶಸ್ಸಿಗೆ ಅವರ ನಟನೆಯೂ ಒಂದು ಕಾರಣ. ಈಡಿಪಸ್ ನಾಟಕದಲ್ಲಿ ದೊರೆ ಈಡಿಪಸ್ ಪಾತ್ರವನ್ನು ಅವರೇ ವಹಿಸಿದ್ದರು. ಮುಂದೆ ಅವರು ರಂಗಭೂಮಿಯಲ್ಲಿ ನಟಿಸದಿದ್ದರೂ ಅವರ ನಾಟಕಗಳು ದೇಶವಿದೇಶಗಳಲ್ಲಿ ಯಶಸ್ವಿಯಾಗಿರುವಂತೆ ಕನ್ನಡದಲ್ಲೂ ಯಶಸ್ಸು ಕಂಡಿವೆ. ೬೦ರ ದಶಕದಲ್ಲಿ ಅವರ ‘ತುಘಲಕ್’ ಪ್ರದರ್ಶನ ತುಘಲಕ್ ಪಾತ್ರವಹಿಸಿದ ಸಿ.ಆರ್. ಸಿಂಹರನ್ನು ಬೆಳಕಿಗೆ ತಂದದ್ದಲ್ಲದೆ ಹವ್ಯಾಸಿರಂಗಕ್ಕೆ ಹೊಸಜೀವ ಸಂಚಾರವನ್ನೇ ತಂದಿತು.
ಪುರಾಣ ಬಳಸಿ ಕಾರ್ನಾಡರು ಯಯಾತಿ ಬರೆದರು. ಇತಿಹಾಸ ಬಳಸಿ ತುಘಲಖ್ ಬರೆದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ಬರೆದರು.
ಪರಿಪೂರ್ಣತೆಯ ಆಕಾಂಕ್ಷೆಯನ್ನು ವಸ್ತುವಾಗುಳ್ಳ ‘ಹಯವದನ’ದಲ್ಲಿ ಜಾನಪದ ರಂಗದ ಮಹತ್ವವನ್ನು ಬಯಲುಗೊಳಿಸುವುದರ ಜೊತೆಗೆ ಕಾರ್ನಾಡರು ರಂಗಸಾಧ್ಯತೆಗಳನ್ನು ವಿಸ್ತರಿಸಿದರು. ದೇಶಾದ್ಯಂತ ಸತ್ಯ ದೇವ ಧುಬೆ, ಬಿ.ವಿ.ಕಾರಂತರಂತಹ ಹಲವಾರು ಶ್ರೇಷ್ಠ ನಿರ್ದೇಶಕರು ‘ಹಯವದನ’ವನ್ನು ನಿರ್ದೇಶಿಸಿ ಸ್ಪರ್ಧಿಸಿದರು. ಹಯವದನ ಅಖಿಲಭಾರತ ವ್ಯಾಪ್ತಿಯನ್ನು ಮೀರಿ ಆಸ್ಟ್ರೇಲಿಯಾದಲ್ಲೂ ಪ್ರಯೋಗ ಕಂಡಿತು. ಅನಂತರ ಅವರು ಬರೆದ ನಾಟಕಗಳಲ್ಲಿ ತಲೆದಂಡ, ನಾಗಮಂಡಲ ಕಾರ್ನಾಡರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ನಾಟಕಗಳು ವಿವಿಧ ಭಾಷೆಗಳಿಗೆ ತರ್ಜುಮೆಯಾಗಿ ಯಶಸ್ವೀ ಪ್ರಯೋಗ ಕಂಡಿದೆ. ‘ನಾಗಮಂಡಲ’ ಚಲನಚಿತ್ರ ರೂಪದಲ್ಲೂ ಜಯಗಳಿಸಿದೆ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಅವರಿಂದಲೇ ಇಂಗ್ಲಿಷಿಗೆ ‘ಈiಡಿe ಚಿಟಿಜ ಖಚಿiಟಿ’ ಆಗಿ ರೂಪುಗೊಂಡು ಆಂಗ್ಲ ರಂಗ ವಲಯದಲ್ಲಿ ಅಪರಿಮಿತವಾದ ಯಶಸ್ಸನ್ನು ಪಡೆಯಿತು. ‘ಅಂಜುಮಲ್ಲಿಗೆ’ ಹಿಂದಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು. ’ತಲೆದಂಡ’ ಕಾರ್ನಾಡರ ಮಹತ್ವದ ಕೃತಿಗಳಲ್ಲೊಂದು.
ಕಾರ್ನಾಡರು ತಮ್ಮ ಮನಸ್ಸನ್ನು ನಾಟಕ ರಚನೆಯಲ್ಲಿ ನೆಟ್ಟು ತಮ್ಮ ದೇಹವನ್ನು ಚಲನಚಿತ್ರದಲ್ಲಿ ತೊಡಗಿಸಿಕೊಂಡವರು. ಅವರು ಕಿರು ಮತ್ತು ದೊಡ್ಡ ತೆರೆಯಲ್ಲಿ ಅಭಿನಯಿಸುತ್ತ, ಚಿತ್ರಕಥೆಗಳನ್ನು ಬರೆಯುತ್ತ, ಒಮ್ಮೊಮ್ಮೆ ಚಿತ್ರಗಳನ್ನು ನಿರ್ದೇಶಿಸುತ್ತ ತಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ನಾಟಕಗಳ ಶಿಲ್ಪವನ್ನು ಕಡೆದವರು.

ಚಲನಚಿತ್ರ ಕ್ಷೇತ್ರಕ್ಕೂ ಅವರ ಕೊಡುಗೆ ಗಣನೀಯ. ಅರವತ್ತರ ದಶಕದಲ್ಲಿ ಅವರು ಚಿತ್ರಕತೆ ರಚಿಸಿ ಅಭಿನಯಿಸಿದ ‘ಸಂಸ್ಕಾರ’ ರಾಷ್ಟ್ರಪಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ಪ್ರತಿಭಾವಂತ ಯುವ ನಿರ್ದೇಶಕರು ಸಮಾಜದ ವಾಸ್ತವತೆಗಳನ್ನು ಪ್ರತಿಬಿಂಬಿಸುವಂಥ ಚಿತ್ರಗಳನ್ನು ತೆಗೆಯಲು ಧೈರ್ಯವನ್ನು ದೊರಕಿಸಿಕೊಟ್ಟಿತು. ಕನ್ನಡ ಚಿತ್ರರಂಗ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ. ವಿ. ಕಾರಂತರೊಡನೆ ಅವರು ನಿರ್ದೇಶಿಸಿದ ಚಿತ್ರಗಳು ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ. ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳು ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ. ನಟರಾಗಿ ಶ್ಯಾಂ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕಾ; ಶಂಕರ ನಾಗರ ಮಾಲ್ಗುಡಿ ಡೇಸ್, ಕನ್ನಡ ಮತ್ತು ತೆಲುಗಿನ ಆನಂದ ಭೈರವಿ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ್ ಹೀಗೆ ಹಲವಾರು ನೆನಪುಗಳು ಮರುಕಳಿಸುತ್ತವೆ. ಎಪ್ಪತ್ತರ ದಶಕದಲ್ಲಿ ಬಂದ ಮಹಾನ್ ಪ್ರತಿಭೆಗಳಾದ ನಾಸಿರುದ್ದೀನ್ ಷಾ, ಓಂ ಪುರಿ, ಗಿರೀಶ್ ಕಾಸರವಳ್ಳಿ ಮುಂತಾದ ಹಲವಾರು ಪ್ರಸಿದ್ಧರು ಗಿರೀಶರು ಪೂನಾ ಫಿಲಂ ಇನ್ಸ್ಟಿಟ್ಯೂಟಿನಲ್ಲಿದ್ದಾಗ ಮೂಡಿಬಂದವರು. ಓಂ ಪುರಿಯಂತವ ನಟನೆಗೆ ಯೋಗ್ಯನೆ ಎಂಬುದನ್ನು ಪ್ರಶ್ನಿಸಿದ್ದ ಅಂದಿನ ಕಾಲದಲ್ಲಿ ಆತನಲ್ಲಿದ್ದ ಪ್ರತಿಭೆಯನ್ನು ಕಂಡವರು ಗಿರೀಶ್. ಕನ್ನಡದಲ್ಲಿ ವಿಷ್ಣುವರ್ಧನ್, ಶಂಕರನಾಗ್, ಸಿ. ಆರ್. ಸಿಂಹ ಮುಂತಾದ ಅನನ್ಯ ಪ್ರತಿಭೆಗಳನ್ನು ಹುಡುಕಿಕೊಟ್ಟವರು ಕೂಡಾ ಗಿರೀಶರೆ. ಅವರು ಎಷ್ಟು ಪ್ರಾಜ್ಞರಾಗಿ ಕಲಾವಂತಿಕೆ ಹೊತ್ತ ಚಿತ್ರಗಳಲ್ಲಿ ನಟಿಸುತ್ತಾರೋ, ಅಷ್ಟೇ ಸರಾಗವಾಗಿ ಕನ್ನಡ, ತಮಿಳು, ಹಿಂದಿ, ಮಲಯಾಳ, ಮರಾಠಿ ಹೀಗೆ ವಿವಿದ ಭಾಷೆಗಳ ಕಮರ್ಷಿಯಲ್ ಹಣೆಪಟ್ಟಿಯ ಚಿತ್ರಗಳಲ್ಲೂ ಸರಾಗವಾಗಿ ಎಂಬಂತೆ ನಟಿಸಿಬಂದಿರುವುದನ್ನು ಕಂಡು ಇವರ ಅಪ್ರತಿಮ ವೈವಿಧ್ಯತೆಯ ಕುರಿತಾಗಿ ಅಚ್ಚರಿಹುಟ್ಟುತ್ತದೆ.

 

Girl in a jacket
error: Content is protected !!