ಕೊಪ್ಪಳ,ಜು,20- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತ ಪಕ್ಷದ ಶಾಸಕರ ಪ್ರಶ್ನೆಗೆ ಮೊದಲು ಉತ್ತರ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಸವಾಲು ಹಾಕಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕರ ಪ್ರಶ್ನೆಗೆ ಉತ್ತರಿಸಿ ನಂತರ ವಿರೋಧ ಪಕ್ಷದವರ ವಿರುದ್ಧ ಸವಾಲು ಹಾಕಲಿ. ಇಡೀ ರಾಜ್ಯದ ಜನ ಮೈಸೂರಿನ ಸಮಾವೇಶದಲ್ಲಿ ಏನು ನಡೆದಿದೆ ಎನ್ನುವುದನ್ನು ನೋಡಿದ್ದಾರೆ ಎಂದು ವ್ಯಂಗ್ಯವಾಗಿ ನುಡಿದರು.
ಎಲ್ಲಾ ಕ್ಷೇತ್ರಗಳಲ್ಲಿ ಅನುದಾನವಿಲ್ಲದೆ ಶಾಸಕರು ಪರದಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕಾಂಗ್ರೆಸ್ ಶಾಸಕರಿಗೆ ಮಾತ್ರ ಮುಖ್ಯಮಂತ್ರಿಗಳೋ ಎನ್ನುವ ರೀತಿಯಲ್ಲಿ ರಾಜ್ಯದ ಜನರು ಚರ್ಚೆ ಮಾಡುತ್ತಿದ್ದಾರೆ ಎಂದರು. ಅಭಿವೃದ್ಧಿಗೆ 50 ಕೋಟಿ ರೂ ಅನುದಾನ ನೀಡುತ್ತೇವೆ ಎಂದು ಯಾವುದೇ ದಾಖಲೆಯನ್ನು ಸಿದ್ದರಾಮಯ್ಯ ಅವರು ನೀಡಿಲ್ಲ. ಕಾಂಗ್ರೆಸ್ ಶಾಸಕರಿಗೆ ಮಾತ್ರ ಪತ್ರವನ್ನು ಬರೆದಿದ್ದಾರೆ. 50 ಕೋಟಿ ಅನುದಾನ ಬರುವುದಕ್ಕೆ ಎಷ್ಟು ದಿನ ಕಾಯಬೇಕೋ; ವಿರೋಧ ಪಕ್ಷದವರಿಗೆ ಅನುದಾನ ಕೊಡುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ ಎಂದು ಟೀಕಿಸಿದರು.
ಆಡಳಿತ ಪಕ್ಷದಲ್ಲಿ ಕುದುರೆ ವ್ಯಾಪಾರ ಜೋರು…
ಕಾಂಗ್ರೆಸ್ ಪಕ್ಷದಲ್ಲಿ ಯಾರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂದು ಒಳಗೊಳಗೆ ಸಮಾಲೋಚನೆಗಳು ನಡೆಯುತ್ತಿವೆ. ಆಡಳಿತ ಪಕ್ಷದಲ್ಲಿ ಕುದುರೆ ವ್ಯಾಪಾರವು ಕೂಡ ಭರ್ಜರಿಯಾಗಿ ಪ್ರಾರಂಭವಾಗುವ ಮುನ್ಸೂಚನೆಗಳು ಗೋಚರವಾಗುತ್ತಿದೆ ಎಂದು ವಿಜಯೇಂದ್ರ ಅವರು ತಿಳಿಸಿದರು.
ಆಡಳಿತ ಪಕ್ಷದ ಶಾಸಕರೇ ತಮ್ಮ ವಿರುದ್ಧ ತಿರುಗಿ ಬೀಳುವ ಸಂದರ್ಭದಲ್ಲಿ 50 ಕೋಟಿ ಅನುದಾನ ನೀಡುವುದಕ್ಕೆ ಮುಖ್ಯಮಂತ್ರಿಗಳು ನಿರ್ಧಾರ ಮಾಡಿದ್ದಾರೆ. ಆದರೆ ಆಡಳಿತ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರ ಪರಿಣಾಮವೇ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಅವರು ಪದೇ ಪದೇ ಕರ್ನಾಟಕಕ್ಕೆ ಬಂದು ಶಾಸಕರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಿಶ್ಲೇಷಿಸಿದರು.
ಮೈಸೂರಿನ ಸಮಾವೇಶದಲ್ಲಿ ಕ್ರಾಂತಿಯ ಸುಳಿವು….
ಕಾಂಗ್ರೆಸ್ ಪಕ್ಷದ ಸರ್ಕಾರದಲ್ಲಿ ನವೆಂಬರ್ನಲ್ಲಿ ಅಥವಾ ಅದಕ್ಕಿಂತ ಮುಂಚಿತವಾಗಿ ಕ್ರಾಂತಿಯಾಗುವ ಬಗ್ಗೆ ಮೈಸೂರಿನ ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಅವರು ಸುಳಿವು ನೀಡಿದ್ದಾರೆ ಎಂದು ಅವರು ತಿಳಿಸಿದರು. ಭ್ರಷ್ಟಾಚಾರದಲ್ಲಿ ಕಾಂಗ್ರೆಸ್ ಸರ್ಕಾರ ಮುಳುಗಿ ಹೋಗಿದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸ ಕಾರ್ಯಗಳು ಆಗುತ್ತಿಲ್ಲ. ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ನೇತೃತ್ವದ ಬಗ್ಗೆ ರಾಜ್ಯದಲ್ಲಿ ಎಲ್ಲಿ ಹೋಗಿ ವಿಚಾರಿಸಿದರೂ ರಾಜ್ಯದ ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಕೊಪ್ಪಳ ಕೆಆರ್ಐಡಿಎಲ್ನಲ್ಲಿ ಅವ್ಯವಹಾರದ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, 72 ಕೋಟಿ ಕಾಮಗಾರಿ ನಡೆಯದೇ ಇದ್ದರೂ ಬಿಲ್ಲುಗಳನ್ನು ನೀಡಿ ದುಡ್ಡು ಹೊಡೆದಿರುವ ಪ್ರಕರಣವು ನಡೆದಿದೆ. ರಾಜ್ಯದ ಪ್ರತೀ ಜಿಲ್ಲೆಯಲ್ಲಿಯೂ ಹಗರಣಗಳು ನಡೆಯುತ್ತಿದ್ದು ಇದರ ಬಗ್ಗೆ ಬಿಜೆಪಿ ಚರ್ಚಿಸಿ ಹೋರಾಟವನ್ನು ಮಾಡುತ್ತೇವೆ ಎಂದು ತಿಳಿಸಿದರು.
ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರ ಸಂಬಂಧವಾಗಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಅವರು ನಮ್ಮ ಪಕ್ಷದ ದೊಡ್ಡ ಶಕ್ತಿ. ಅವರು ಒಟ್ಟಾಗಿ, ಒಂದಾಗಿ ಚುನಾವಣೆಗೆ ಹೋದಾಗ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಗೆದ್ದಿದೆ. ಅವರಿಬ್ಬರು ಸಹ ಪಕ್ಷದ ಬಗ್ಗೆ ನಿಷ್ಠೆಯನ್ನು ಇಟ್ಟುಕೊಂಡು ಪಕ್ಷದ ಸಂಘಟನೆಯನ್ನು ಬಲಪಡಿಸುತ್ತೇವೆ ಎಂದು ನನಗೆ ಸಹಕಾರವನ್ನು ನೀಡಿದ್ದಾರೆ ಎಂದು ತಿಳಿಸಿದರು.