ಬೆಂಗಳೂರು,ಜು,08-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ಕರ್ನಾಟಕದ ಅಸ್ಮಿತೆ ಸಾರುವ 6 ಮತ್ತು ಜಿ.ಐ. ಟ್ಯಾಗ್ ಹೊಂದಿರುವ 28 ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ ವ್ಯವಸ್ಥೆ ಇರುವ ಆಕರ್ಷಕ *ಕಲಾಲೋಕ* ಮಳಿಗೆ ಸಿದ್ಧವಾಗುತ್ತಿದೆ. ಇದನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.
ಅವರು ಮಂಗಳವಾರ ಇಲ್ಲಿ ಸರಕಾರಿ ಸ್ವಾಮ್ಯದ ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ (ವಿಟಿಪಿಸಿ) ಸೇರಿದಂತೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಪ್ರಮುಖ ಅಧಿಕಾರಿಗಳೊಂದಿಗೆ ಈ ಯೋಜನೆಯ ಪ್ರಗತಿಯ ಸಂಬಂಧ ಪರಿಶೀಲನಾ ಸಭೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕಲಾಲೋಕ ಮಳಿಗೆಯಲ್ಲಿ ರಾಜ್ಯದ ಅಸ್ಮಿತೆ ಸಾರುವ ಕಾಫಿ, ಮೈಸೂರು ಸಿಲ್ಕ್ಸ್, ಕೆಎಸ್ಡಿಎಲ್ ಉತ್ಪನ್ನಗಳಾದ ಗಂಧದ ಸಾಬೂನು ಇತ್ಯಾದಿ, ಲಿಡ್ಕರ್ ಉತ್ಪನ್ನಗಳು, ಕರಕುಶಲ ನಿಗಮದ ವಸ್ತುಗಳು ಮತ್ತು ಕೈಮಗ್ಗ ನಿಗಮದ ಉತ್ಪನ್ನಗಳು ಇರಲಿವೆ. ಇವುಗಳ ಜೊತೆಗೆ ಚನ್ನಪಟ್ಟಣದ ಬೊಂಬೆಯಂಥ 28 ಜಿ.ಐ. ಉತ್ಪನ್ನಗಳನ್ನೂ ಇಡಲಾಗುವುದು. ಇವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ಯಾಕಿಂಗ್ ವಿನ್ಯಾಸ ಮತ್ತು ಬ್ರ್ಯಾಂಡಿಂಗ್ ಮಾಡಿ, ಪ್ರದರ್ಶನ ಮತ್ತು ಮಾರಾಟ ನಡೆಸಲಾಗುವುದು. ಜಾಗತಿಕ ಮಟ್ಟದ ಗ್ರಾಹಕರನ್ನು ಸೆಳೆಯುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಇಂಟರ್ನ್ಯಾಷನಲ್ ಲಾಂಜ್ ನಲ್ಲಿ ಕೂಡ ಕಲಾಲೋಕ ಮಳಿಗೆ ತೆರೆಯಲಾಗುವುದು. ಇದಕ್ಕಾಗಿ ಟೆಂಡರ್ ಆಹ್ವಾನಿಸಲಾಗುವುದು. ಈಗ ಸಿದ್ಧವಾಗುತ್ತಿರುವ ಮೊದಲ ಮಳಿಗೆಯು 130 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು, ಆಗಸ್ಟ್ ಕೊನೆಯ ಹೊತ್ತಿಗೆ ಸಂಪೂರ್ಣವಾಗಿ ಇದರ ಕೆಲಸಗಳು ಮುಗಿಯಲಿವೆ. ಕೆಂಪೇಗೌಡ ವಿಮಾನ ನಿಲ್ದಾಣವು ಇದಕ್ಕೆ ನಿಗದಿತ ಬಾಡಿಗೆಯಲ್ಲಿ ಶೇಕಡ 50ರಷ್ಟು ರಿಯಾಯಿತಿ ಕೊಟ್ಟಿದೆ ಎಂದು ಪಾಟೀಲ ತಿಳಿಸಿದ್ದಾರೆ.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ವಿಶ್ವೇಶ್ವರಯ್ಯ ಟ್ರೇಡ್ ಪ್ರೊಮೋಶನ್ ಸೆಂಟರ್ (ವಿಟಿಪಿಸಿ) ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರ್ ಸೇರಿದಂತೆ ಇತರ ಎಲ್ಲ ಹಿರಿಯ ಅಧಿಕಾರಿಗಳು ಇದ್ದರು.