ಬೆಂಗಳೂರು,ಜೂ,14- ಸಾಹಿತಿ ಎಸ್. ಎಲ್. ಭೈರಪ್ಪ ಅವರ ಜೀವನ ಮತ್ತು ಸಾಹಿತ್ಯಕ್ಕೆ ಎರಡು ವಿಶ್ಲೇಷಣೆ ಅಗತ್ಯವಿಲ್ಲ. ಅವರ ಜೀವನ ಮತ್ತು ಬದುಕು ಎರಡೂ ಒಂದೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ನಗರದ ಬಿಎಂಎಸ್ ಎಂಜನೀಯರಿಂಗ್ ಕಾಲೇಜಿನಲ್ಲಿ ನಡೆದ ಸಾಹಿತಿ ಎಸ್. ಎಲ್ ಭೈರಪ್ಪ ಪ್ರತಿಷ್ಠಾನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಎಸ್. ಎಲ್. ಭೈರಪ್ಪನವರ ಕೃತಿಗಳನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ನಾನು ಪರ್ವ ಕಾದಂಬರಿಯನ್ನು ಕಾಲೇಜು ಜೀವನದಲ್ಲಿಯೇ ಓದಲು ಪ್ರಯತ್ನ ಮಾಡಿದ್ದೆ, ಅಷ್ಟು ಸುಲಭವಾಗಿ ಅರ್ಥವಾಗಿರಲಿಲ್ಲ. ಕೆಲವು ವರ್ಷಗಳ ನಂತರ ಮತ್ತೆ ಓದಿದೆ. ಪ್ರತಿ ಸಾರಿ ಓದಿದಾಗ ಹೊಸ ಆಯಾಮ ಸಿಗುತ್ತದೆ. ನನಗೆ ಕಾಡಿರುವ ಎರಡು ಪುಸ್ತಕಗಳು ಒಂದು ಭೈರಪ್ಪ ಅವರ ಕಾದಂಬರಿ ಹಾಗೂ ಸ್ವಾಮಿ ವಿವೇಕಾನಂದರ ಲೈಫ್ ಆಪ್ಟರ್ ಡೆತ್ ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ ಲೈಫ್ ಆಪ್ಟರ್ ಡೆತ್ ಪುಸ್ತಕದಲ್ಲಿ ವಿವೇಕಾನಂದರು ಸಾಧಕರಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಬದುಕುವುದು ಸಾಧಕ. ಅಂತಹ ಒಬ್ಬ ಸಾಧಕರು ಎಸ್. ಎಲ್. ಭೈರಪ್ಪ ಅವರು, ಅವರ ಜೀವನ ಮತ್ತು ಸಾಹಿತ್ಯಕ್ಕೆ ಎರಡು ವಿಶ್ಲೇಷಣೆ ಅಗತ್ಯವಿಲ್ಲ. ಜೀವನ ಮತ್ತು ಬದುಕು ಎರಡೂ ಒಂದೇ ಆಗಿದೆ. ಕೆಲವರು ದೊಡ್ಡ ಪ್ರಶಸ್ತಿಗಳನ್ನು ತೆಗೆದುಕೊಂಡಿದ್ದಾರೆ. ಆದರೆ, ಅವರ ಬದುಕು ಮತ್ತು ಬರಹಕ್ಕೆ ತದ್ವಿರುದ್ದವಾಗಿರುತ್ತದೆ ಎಂದರು.
ಬದುಕನ್ನು ತಿಳಿದುಕೊಳ್ಳುವುದೇ ಕಷ್ಟ. ಅಂತಹ ಬದುಕನ್ನು ಆದರ್ಶವಾಗಿಟ್ಟುಕೊಂಡು ಸಾಹಿತ್ಯ ಬರೆಯುವುದು ದೊಡ್ಡ ಸವಾಲು ಅವರಿಗೆ ಇನ್ನೊಬ್ಬ ವ್ಯಕ್ತಿ, ಇನ್ನೊಂದು ವಿಚಾರ ಅವರಿಗೆ ಸವಾಲು ಅಲ್ಲ. ಅವರು ಬಹಳ ಗಟ್ಟಿಯಾಗಿದ್ದಾರೆ. ಆದರೆ, ಅವರು ಬರೆಯುವ ಪ್ರತಿಯೊಂದು ಶಬ್ದವೂ ಪರೀಕ್ಷೆ. ಒಂದು ಕೃತಿ ಬರಬೇಕಾದರೆ ಮರು ಜನ್ಮ ಪಡೆಯುತ್ತ ಬಂದಿದೆ.
ಇದನ್ನು ಬರೆಯಬೇಕೆಂದರೆ ಎಷ್ಟು ಕಷ್ಟ ಇದೆ. ಅಷ್ಟು ಸುಲಭ ಇಲ್ಲ. ಅವರು ಯಾವುದೇ ಪ್ರಶಸ್ತಿಗೂ ಲಾಬಿ ಮಾಡಿಲ್ಲ. ಕೆಲವರು ನೊಬೆಲ್ ಪ್ರಶಸ್ತಿಗೂ ಲಾಬಿ ಮಾಡಿದವರು ಇದ್ದಾರೆ. ಎಲ್ಲರೂ ಒಂದೇ ಥರ ವಿಚಾರ ಮಾಡಲು ಸಾಧ್ಯವಿಲ್ಲ. ವಿಭಿನ್ನತೆ ಬಹಳ ಮುಖ್ಯ. ಭೈರಪ್ಪನವರು ಪಾತ್ರಗಳಲ್ಲಿ ವಿಭಿನ್ನತೆ ತಂದಿದ್ದಾರೆ. ಪುಸ್ತಕದ ಮೊದಲ ಪುಟ ಓದಿದರೆ ಮುಂದಿನ ಪುಟ ತಿರುವಬೇಕು ಎನಿಸಬೇಕು. ಅವರು ಪೌರಾಣಿಕ ಮತ್ತು ಆಧುನಿಕ ವಿಷಯಗಳನ್ನೊಳಗೊಂಡ ಕಾದಂಬರಿ ಬರೆದಿದ್ದಾರೆ. ಮುಂದಿನ ತೊಬ್ಬಂತೈದು ವರ್ಷಗಳ ನಂತರ ಓದಿದರೂ ಆಗಲೂ ಪ್ರಸ್ತುತವಾದ ವಿಷಯ ಅವರು ಬರೆದಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಗೌರವಧನ ಬರುವುದು ಭೈರಪ್ಪ ಅವರಿಗೆ. ಭೈರಪ್ಪ ಅವರು ಬಡವರಾಗಲು ಓದುಗರು ಬಿಟ್ಟಿಲ್ಲ. ನಾವು ದುಡ್ಡು ಕೊಟ್ಟು ಪುಸ್ತಕ ಓದಬೇಕು. ಭೈರಪ್ಪ ಅವರದು ಸಿದ್ದರಾಮಯ್ಯ ಅವರ ಬಜೆಟ್ ಇದ್ದಹಾಗೆ. ತೆರಿಗೆ ಸಂಗ್ರಹ ಹೆಚ್ಚಾಗಿದೆ ಎನ್ನುತ್ತಾರೆ. ಆದರೆ ಸಾಲ ಮಾಡುವುದು ಹೆಚ್ಚುತ್ತಿದೆ ಎಂದರು.
ಭೈರಪ್ಪ ಅವರು ತಮ್ಮ ಊರಿಗೆ ಕುಡಿಯುವ ನೀರಿನ ಯೋಜನೆ ಮಾಡಲು ನನ್ನ ಬಳಿ ಬಂದರು. ಅವರಿಗೆ ಹುಟ್ಟೂರಿನ ಬಗ್ಗೆ ಇದ್ದ ಅಭಿಮಾನ ಮೆಚ್ಚುವಂಥದ್ದು. ಬಹಳ ಜನ ಹುಟ್ಟೂರು ಮರೆಯುತ್ತಾರೆ. ಭೈರಪ್ಪ ಅವರ ಕಳಕಳಿಯ ಮುಂದೆ ನಮ್ಮದೇನು ಅಲ್ಲ. ಅವರ ಊರಿಗೆ ನೀರು ಕೊಡಿಸಿರುವ ಗೌರವ ಅವರಿಗೆ ಸಲ್ಲಬೇಕು. ಅವರು ಇನ್ನೊಂದು ದೊಡ್ಡ ಹೆಜ್ಜೆ ಇಟ್ಟಿದ್ದಾರೆ. ಅವರ ಹೆಸರಿನಲ್ಲಿ ಟ್ರಸ್ಟ್ ಮಾಡಿದ್ದಾರೆ. ನಮಗೆ ಸಮಾಜ ಏನು ಕೊಟ್ಟಿದೆಯೋ ಅದನ್ನು ನಾವು ಸಮಾಜಕ್ಕೆ ವಾಪಸ್ ಕೊಟ್ಟಾಗ ನಮ್ಮ ಬದುಕಿನ ಬ್ಯಾಲೆನ್ಸ್ ಸೀಟ್ ಪೂರ್ತಿಯಾಗುತ್ತದೆ. ಭೈರಪ್ಪನವರು ತಮಗೆ ಸಮಾಜ ಕೊಟ್ಟಿರುವುದನ್ನು ಸಮಾಜಕ್ಕೆ ಕೊಟ್ಟಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಎಸ್. ಎಲ್. ಭೈರಪ್ಪ, ಶತಾವಧಾನಿ ಆರ್. ಗಣೇಶ್, ವಿಶ್ವವಾಣಿ ಪತ್ರಿಕೆ ಸಂಪಾದಕ ವಿಶ್ವೇಶ್ವರ ಭಟ್, ಸಹನಾ ವಿಜಯಕುಮಾರ್, ಅರುಣ್ ಹಾಜರಿದ್ದರು.