ಸೀ ಶೋರ್ ಸ್ಟುಡಿಯೋಸ್ ಮೂಲಕ ಸಂದೀಶ್ ಹೆಚ್.ಟಿ. ಹಾಗೂ ಪೆರುಮಾಳ್ ವಿ. ಅವರ ನಿರ್ಮಾಣದ *ಶಿವನ ಪಾದ* ಲವ್, ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಹಾರರ್ ಟಚ್ ಹೊಂದಿರುವ ಕ್ರೈಮ್ ಕಥಾನಕ ಇರುವ ಚಿತ್ರ. ಈ ಹಿಂದೆ ಬಂಗಾರಿ, ಬೆಟ್ಟದ ದಾರಿ, ನಡಗಲ್ಲು, ಅಲ್ಲದೆ ತಮಿಳಿನ ಕಾದಲ್ ಪೈತ್ಯಂ ಚಿತ್ರಗಳನ್ನು ನಿರ್ದೇಶಿಸಿದ್ದ ಮಾಚಂದ್ರು ಅವರು ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಅರ್ಧದಷ್ಟು ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಶೇ.೫೦ರಷ್ಟು ಶೂಟಿಂಗ್ ಮಾತ್ರ ಬಾಕಿಯಿದೆ. ಉಳಿದ ಮಾತಿನಭಾಗ ಹಾಗೂ ೨ ಹಾಡುಗಳನ್ನು ಸಾಗರ, ಮದ್ದೂರು, ಪುಟ್ಟಣ್ಣ ಸ್ಟುಡಿಯೋ, ಮಿಲನಹೌಸ್, ಬೆಂಗಳೂರು ಸುತ್ತಮುತ್ತ ಈ ಹಂತದಲ್ಲಿ ಚಿತ್ರೀಕರಣ ನಡೆಸಲಾಗುವುದು. ಮುದಿನ ವಾರದಿಂದ ಈ ಶೂಟಿಂಗ್ ಆರಂಭವಾಗಲಿದೆ.
ಆರು ಪಾತ್ರಗಳ ಸುತ್ತ ನಡೆಯುವ ಈ ಕುತೂಹಲಕರ ಕಥೆಯಲ್ಲಿ ಒಂದು ಕೊಲೆ ಚಿತ್ರದ ಮೇಜರ್ ಕಂಟೆಂಟ್ ಆಗಿದೆ. ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಹೆಚ್.ಟಿ. ಸಾಂಗ್ಲಿಯಾನ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿಯೇ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶಿವನ ಪಾದ ಎನ್ನುವುದು ಉತ್ತರ ಕರ್ನಾಟಕದಲ್ಲಿರುವ ಒಂದು ಪ್ರಸಿದ್ದ ಪ್ರವಾಸಿತಾಣ. ಈ ಚಿತ್ರದಲ್ಲಿ ಆ ಲೊಕೇಶನ್ ಕೂಡ ಒಂದು ಪಾತ್ರವಾಗಿಯೇ ಮೂಡಿಬರಲಿದ್ದು, ಬಹುತೇಕ ಜರ್ನಿಯಲ್ಲೇ ನಡೆಯೋ ಕುತೂಹಲಕರ ಕಥೆಯಿದಾಗಿದೆ.
ನಾಗೇಶ್ ಆರ್. ಆನಂದ್, ವರ್ಷಿತ ಗಿರೀಶ್, ಮೇಘನಾ, ಬಲ ರಾಜವಾಡಿ, ನವೀನ್ ಡಿ.ಪಡೀಲ್, ಅಂಜಲಿ, ಹರಿಹರನ್ ಬಿ.ಪಿ, ಆಟೋ ನಾಗರಾಜ್, ಶೇಷಗಿರಿ, ನರಸಿಂಹ ಮೂರ್ತಿ, ಸೂರಿ, ಹೇರಂಭಾ ಮುಂತಾದವರ ತಾರಾಗಣ ಶಿವನಪಾದಕ್ಕಿದೆ. ಮಾಚಂದ್ರು ಅವರೇ ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೀನಸ್ ಮೂರ್ತಿ ಈ ಚಿತ್ರದ ಛಾಯಾಗ್ರಾಹಕರು. ವೀರ್ ಸಮರ್ಥ ಅವರ ಸಂಗೀತ ಸಂಯೋಜನೆ, ವಿಜಯ್ ಭರಮಸಾಗರ ಅವರ ಸಾಹಿತ್ಯ, ವೆಂಕಿ ಯುವಿಡಿ ಅವರ ಸಂಕಲನ ಈ ಚಿತ್ರಕ್ಕಿದೆ.