ಬೆಂಗಳೂರು,ಜು,15: ನಟ ದರ್ಶನ್ ಹೆಸರಲ್ಲಿ ವಂಚನೆ ನಡೆದಿದೆ ಎನ್ನುವ ಪ್ರಕರಣ ತಣ್ಣಗಾಗುತ್ತಿದ್ದಂತೆ ,ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್, ದರ್ಶನ್ ಮತ್ತು ಅವರ ತಂಡದ ವಿರುದ್ದ ಹಲ್ಲೆ ಆರೋಪ ಮಾಡಿದ್ದಾರೆ.
ಈ ಮೂಲಕ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದಿದ್ದು
ದರ್ಶನ್ ಮತ್ತು ಅವರ ತಂಡ ದಲಿತ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದು ಅದನದನು ಮೈಸೂರು ಪೊಲೀಸರು ಒತ್ತಡಕ್ಕೆ ಮಣಿದು ಮುಚ್ಚಿಹಾಕಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನ ಸಂದೇಶ್ ಪ್ರಿನ್ಸ್ ಹೋಟೆಲ್ ನಲ್ಲಿ ಸಪ್ಲೈಯರ್ ಗೆ ನಟ ದರ್ಶನ್ ಮತ್ತು ಸ್ನೇಹಿತರ ಗ್ಯಾಂಗ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಇಂದ್ರಜಿತ್ ಲಂಕೇಶ್ ಭೇಟಿ ಮಾಡಿ ದೂರು ನೀಡಿದ್ದಾರೆ.
ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.
ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ದೂರು ನೀಡಿ ಹೊರಗೆ ಬಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್, ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೇಲೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಹೊಟೇಲ್ ನಲ್ಲಿ ಇತ್ತೀಚೆಗೆ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಹೋಗಿ ಊಟ ಪಾರ್ಟಿ ಮಾಡಿದ್ದಾರೆ. ಈ ವೇಳೆ ಸಪ್ಲೈಯರ್ ಗೆ ಹೊಡೆದಿದ್ದಾರೆ. ಇದರಿಂದ ಅವನ ಕಣ್ಣು ಮಂಜಾಗಿ ಹೋಗಿದೆ, ನಂತರ ಹೋಗಿ ಪೊಲೀಸ್ ಸ್ಟೇಷನ್ ನಲ್ಲಿ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದಾರೆ. ಈ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ, ಸಾಕ್ಷಿಗಳನ್ನಿಟ್ಟುಕೊಂಡೇ ಇಂದು ಗೃಹ ಸಚಿವರಿಗೆ ದೂರು ನೀಡಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದೇನೆ ಎಂದಿದ್ದಾರೆ.
ಮಹಿಳೆಯಿಂದ 25 ಕೋಟಿ ರೂ. ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಇಂದ್ರಜಿತ್ ಲಂಕೇಶ್, ತಲೆ ಸೀಳ್ತೀನಿ ತಲೆ ಹೊಡಿತೀನಿ ಅಂದವರು ಈಗ ಉಲ್ಟಾ ಆಗಿದ್ದಾರೆ. ಈಗ ನನಗೆ ನಿರ್ಮಾಪಕರು ಬೇಕು ಅಂತಿರಲ್ಲಾ ಯಾಕೆ. 25 ಕೋಟಿ ರೂ. ವಂಚನೆ ಯತ್ನ ಕೇಸ್ ಸೆಟಲ್ ಮೆಂಟ್ ಆಯ್ತಾ. ನಿರ್ಮಾಪಕ ಮತ್ತು ನಟನ ಮಧ್ಯೆ ವ್ಯವಹಾರ ನಡೆಸಿದ್ದಾರೆ. ಫಿಕ್ಚರ್ ರೀತಿ ಕಥೆ ಕಟ್ಟಿ ಸುಮ್ಮನಾಗಿದ್ದು ಯಾಕೆ…? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮೈಸೂರು ಪೊಲೀಸರ ವಿರುದ್ಧ ಕಿಡಿಕಾರಿದ್ದು, ಮೈಸೂರಿನ ಸ್ಟೇಷನ್ ಗಳು ಸೆಟಲ್ ಮೆಂಟ್ ಸ್ಟೇಷನ್ ಗಳಾಗಿಬಿಟ್ಟಿವೆ. ಪೊಲೀಸರು ಕೈಗೆ ಬಳೇ ತೊಟ್ಟಿಕೊಂಡು ಕುಳಿತಿದ್ದಾರೆ. ಮೈಸೂರಿನಲ್ಲಿ ಸೆಲೆಬ್ರೆಟಿಗಳ ವರ್ತನೆ ಮಿತಿ ಮಿರಿದೆ. ಜನರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಹರಿಹಾಯ್ದಿದ್ದಾರೆ