ನವದೆಹಲಿ,ಮೇ,16:ಇದೇ ತಿಂಗಳ 28 ರಂದು ಜಿಎಸ್ ಟಿ ಮಂಡಳಿ ಸಭೆ ನಡೆಯಲಿದ್ದು .ಈ ವೇಳೆ ಕೋವಿಡ್ ಔಷಧೀಯ ಪರಿಕರಗಳ ಮೇಲಿನ ತೆರಿಗೆ ದರಗಳ ಕುರಿತು ಚರ್ಚಿಸುವ ಸಾಧ್ಯತೆಗಳಿವೆ.
ಜಿಎಸ್ ಟಿ ವ್ಯವಸ್ಥೆಯಿಂದ ರಾಜ್ಯಗಳಮೇಲಿನ ವರಮಾನ ಕೊರತೆಯನ್ನು ಯಾವ ರೀತಿ ತುಂಬಿಕೊಡಬಹುದು ಎನ್ನುವ ವಿಷಯ ಕುರಿತು ಚರ್ಚೆಗೆ ಬರಲಿವೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ನೇತೃತ್ವದಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಸಭೆ ನಡೆಯಲಿದೆ.
ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಸಚಿವರು ಹಾಗು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಅವರ ಕಚೇರಿಯು ಟ್ವೀಟ್ ಮಾಡಿದೆ.
ಕೋವಿಡ್–19 ಸಾಂಕ್ರಾಮಿಕದಿಂದ ಬಳಲುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಢುವ ಜೀವ ಉಳಿಸುವ ಔಷಧಗಳು, ಸಾಧನಗಳು ಮತ್ತು ಉಪಕರಣಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡುವಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ತಿಂಗಳು ಬೇಡಿಕೆ ಇಟ್ಟಿದ್ದರು. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಇದೇ ರೀತಿಯ ಬೇಡಿಕೆಯನ್ನು ಕೇಂದ್ರದ ಮುಂದಿಟ್ಟಿದ್ದರು. ಆದರೆ, ಕೋವಿಡ್ ಲಸಿಕೆ, ಔಷಧ ಹಾಗೂ ಆಮ್ಲಜನಕದ ಕಾನ್ಸನ್ಟ್ರೇಟರ್ಗಳಿಗೆ ಜಿಎಸ್ಟಿ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸದ್ಯ, ಲಸಿಕೆಗೆ ಶೇ 5ರಷ್ಟು ತೆರಿಗೆ ಇದೆ. ಕೋವಿಡ್ಗೆ ಸಂಬಂಧಿಸಿದ ಔಷಧಿಗಳಿಗೆ, ಆಮ್ಲಜನಕದ ಕಾನ್ಸನ್ಟ್ರೇಟರ್ಗಳಿಗೆ ಶೇ 12ರಷ್ಟು ತೆರಿಗೆ ಇದೆ.