ಪ್ರಶಾಂತ್ ಕಿಶೋರ್, ರಾಹುಲ್ ಗಾಂಧಿ ಭೇಟಿ-ರಾಷ್ಟ್ರ ರಾಜಕಾರಣದಲ್ಲಿ ಸಂಚಲನ

Share

ನವದೆಹಲಿ,ಜು,೧೩:ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಮಂಗಳವಾರ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ದೆಹಲಿಯ ರಾಹುಲ್ ಗಾಂಧಿ ನಿವಾಸಕ್ಕೆ ತೆರಳಿದ ಪ್ರಶಾಂತ್ ಕಿಶೋರ್ ಗಂಟೆಗಳ ಕಾಲ ಕಾಂಗ್ರೆಸ್ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹಾಗೂ ಕೆ.ಸಿ. ವೇಣುಗೋಪಾಲ್ ಹಾಜರಿದ್ದರು.

ಜೂನ್ ೨೧ರಂದು ಪ್ರಶಾಂತ್ ಕಿಶೋರ್ ಹಾಗೂ ಶರದ್ ಪವಾರ್ ಚರ್ಚೆ ನಡೆಸಿದ್ದು ದೇಶದಲ್ಲಿ ಹೊಸ ರಾಜಕೀಯ ಸಾಧ್ಯತೆಗಳ ಕುರಿತು ಚರ್ಚೆ ಆರಂಭವಾಗಿತ್ತು. ೨ ವಾರಗಳ ನಂತರ ಅವರು ರಾಹುಲ್ ಗಾಂಧಿಯವರನ್ನು ಭೇಟಿಯಾಗಿರುವುದು ದೆಹಲಿ ರಾಜಕೀಯದಲ್ಲಿ ಹೊಸ ರಾಜಕೀಯ ಗಾಳಿ ಬೀಸುವ ಮುನ್ಸೂಚನೆಯಾಗಿದೆ ಎಂದು ಹಲವು ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ವಿರುದ್ಧ ವಿರೊಧ ಪಕ್ಷಗಳ ಒಕ್ಕೂಟವನ್ನು ರಚಿಸುವ ಪ್ರಯತ್ನದಲ್ಲಿ ಅವರು ತೊಡಗಿದ್ದಾರೆ ಎಂಬ ಚರ್ಚೆ ಕಳೆದ ತಿಂಗಳಲ್ಲಿಯೇ ಆರಂಭವಾಗಿತ್ತು. ಪ್ರಶಾಂತ್ ಕಿಶೋರ್ ಭೇಟಿಯ ಮಾರನೇ ದಿನ ಶರದ್ ಪವಾರ್ ತಮ್ಮ ನಿವಾಸದಲ್ಲಿ ವಿರೋಧ ಪಕ್ಷಗಳ ಮುಖಂಡರ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಕಾಂಗ್ರೆಸ್ ನಾಯಕರ ಅನುಪಸ್ಥಿತಿ ತ್ರತೀಯ ರಂಗದ ರಚನೆಯ ಊಹಾಪೋಹಗಳು ಹರಿದಾಡಲು ಕಾರಣವಾಗಿತ್ತು. ಶರದ್ ಪವಾರ್ ತೃತೀಯ ರಂಗದ ಎಲ್ಲಾ ವದಂತಿಗಳನ್ನು ತಳ್ಳಿಹಾಕಿ ಕಾಂಗ್ರೆಸ್ ಇಲ್ಲದ ವಿರೊಧ ಪಕ್ಷಗಳ ಒಕ್ಕೂಟದಿಂದ ಬಿಜೆಪಿ ಎದುರಿಸುವುದು ಸಾಧ್ಯವಿಲ್ಲ ಎಂದಿದ್ದರು.

ಶರದ್ ಪವಾರ್ ಹೇಳಿಕೆಯ ಬೆನ್ನಲ್ಲೇ ಮಂಗಳವಾರ ಮಧ್ಯಾಹ್ನ ಪ್ರಶಾಂತ್ ಮತ್ತು ರಾಹುಲ್ ಭೇಟಿಯಾಗಿರುವುದು ೨೦೨೪ರ ಲೋಕಸಭೆ ಚುನಾವಣೆಗೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ವದಂತಿಗಳಿಗೆ ಪುಷ್ಠಿ ನೀಡಿದೆ.

ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆರ್‌ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್, ಶಿವಸೇನೆ ಸಂಸದ ಸಂಜಯ್ ರಾವತ್ ಸೇರಿದಂತೆ ಹಲವು ನಾಯಕರು ೨೦೨೪ರ ಲೋಕಸಭೆ ಚುನಾವಣೆಯಲ್ಲಿ ವಿರೊಧ ಪಕ್ಷಗಳು ಒಟ್ಟಾಗಿ ಬಿಜೆಪಿ ವಿರುದ್ಧ ಸ್ಪರ್ಧಿಸಬೇಕು ಎಂಬ ಪ್ರಶಾಂತ್ ಕಿಶೊರ್ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ. ಸಂಸತ್ ಮುಂಗಾರು ಅಧಿವೇಶನಕ್ಕೂ ವಾರ ಮೊದಲು ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ನಾಯಕರ ಭೇಟಿ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಘಟಿಸುವ ಮುನ್ಸೂಚನೆ ನೀಡುತ್ತಿದೆ.

ಈ ಬಾರಿ ಸಂಸತ್ ಮುಂಗಾರು ಅಧಿವೇಶನ ಜುಲೈ ೧೯ರಿಂದ ಅರಂಭವಾಗಿದ್ದು, ಕೋವಿಡ್ ಎರಡನೇ ಅಲೆಯ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳು ತೀವ್ರ ಚರ್ಚೆಗೆ ಗುರಿಯಾಗುವ ಸಾಧ್ಯತೆ ಇದೆ. ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಸುಮಾರು ೯ ತಿಂಗಳಿನಿಂದ ಧರಣಿ ನಡೆಸುತ್ತಿದ್ದಾರೆ. ಇದೆರಡು ಮುಖ್ಯ ವಿಷಯಗಳು ಸಂಸತ್ ಅಧಿವೇಶನದಲ್ಲಿ ಪ್ರತಿಧ್ವನಿಸುವ ಸಾಧ್ಯತೆ ಇದೆ. ವಿರೋಧ ಪಕ್ಷಗಳು ಎಂದಿನ ತಮ್ಮ ಪರಸ್ಪರ ಕಚ್ಚಾಟವನ್ನು ನಿಲ್ಲಿಸಿ ಜನರ ಸಮಸ್ಯೆಯನ್ನು ಸರ್ಕಾರದ ಮುಂದಿಡಲಿವೆಯೇ ಎಂಬುದನ್ನು ಕಾದು ನೋಡಬೇಕು.

Girl in a jacket
error: Content is protected !!