ಉತ್ತರಾಖಂಡ,ಜೂ,೧೫- ಡೆಹ್ರಾಡೂನ್ ನಿಂದ ಕೇದಾರನಾಥಕ್ಕೆ ತೆರಳುತ್ತಿದ್ದ ಹೆಲಿಕಾಪ್ಟರ್ ಗೌರಿಕುಂಡದ ಬಳಿ ಪತನಗೊಂಡದ್ದು, ಪೈಲಟ್ ಸೇರಿ ೭ ಮಂದಿ ಸಾವನ್ನಪ್ಪಿದ ಘಟನೆ ನಡೆದಿದೆ.
ಆರ್ಯನ್ ಅವಿಯೇಷನ್ ಕಂಪನಿಗೆ ಸೇರಿದ ವಿಮಾನ ೬ ಮಂದಿ ಪ್ರಯಾಣಿಕರನ್ನು ಗುಪ್ತಕಾಶಿಗೆ ಹೊತ್ತು ತೆರಳುತ್ತಿದ್ದು, ಈ ವೇಳೆ ಗೌರಿಕುಂಡ್ ಬಳಿ ಇಂದು ಬೆಳಗಿನ ಜಾವ ೫.೩೦ರ ಸುಮಾರಿಗೆ ಪತವಾಗಿದೆ. ಹವಾಮಾನ ವೈಪರೀತ್ಯದಿಂದಾಗಿ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
ಹೆಲಿಕಾಪ್ಟರ್ ಪತನವನ್ನು ಹೆಲಿಕಾಪ್ಟರ್ ನೋಡಲ್ ಅಧಿಕಾರಿ ರಾಹುಲ್ ಚೌಬೆ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ನಂದನ್ ಸಿಂಗ್ ರಾಜ್ವರ್ ಅವರು ದೃಢಪಡಿಸಿದ್ದಾರೆ.
ಘಟನೆ ವೇಳೆ ಹೆಲಿಕಾಪ್ಟರ್ ನಲ್ಲಿ ಪೈಲಟ್ ಸೇರಿ ಒಟ್ಟು ೭ ಮಂದಿ ಇದ್ದರು ಎನ್ನಲಾಗಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಸಂತಾಪ
ಈ ನಡುವೆ ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ರುದ್ರಪ್ರಯಾಗ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಪತನ ಸುದ್ದಿ ಅತೀವ್ರ ದುಃಖ ತಂದಿದೆ. ಎಸ್ಡಿಆರ್ಎಫ್, ಸ್ಥಳೀಯ ಆಡಳಿತ ಮತ್ತು ಇತರ ರಕ್ಷಣಾ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲಾ ಪ್ರಯಾಣಿಕರ ಸುರಕ್ಷತೆಗಾಗಿ ಬಾಬಾ ಕೇದಾರನನ್ನು ಪ್ರಾರ್ಥಿಸುತ್ತೇನೆಂದು ಹೇಳಿದ್ದಾರೆ.