ಶಾಲೆಗಳಲ್ಲಿ ಸಮವಸ್ರ್ತಕಡ್ಡಾಯ; ಮಹತ್ವದ ಆದೇಶ ನೀಡಿದ ಹೈಕೋರ್ಟ್

Share

ಬೆಂಗಳೂರು, ಮಾ.15. ರಾಜ್ಯದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಸರ್ಕಾರದ ಕ್ರಮವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಧಾರ್ಮಿಕ ಅತ್ಯಗತ್ಯ ಆಚರಣೆಯಲ್ಲ ಎಂದು ಮಹತ್ವದ ಆದೇಶ ನೀಡಿದೆ.

ತರಗತಿಗೆ ಹಿಜಾಬ್ ಧರಿಸಿ ಬರದಂತೆ ನಿರ್ಬಂಧಿಸಿರುವ ಕಾಲೇಜಿನ ಕ್ರಮ ಪ್ರಶ್ನಿಸಿ ಹಾಗೂ ಸಮವಸ್ತ್ರ ಸಂಹಿತೆ ಜಾರಿ ಸಂಬಂಧ ಸರ್ಕಾರ ಹೊರಡಿಸಿರುವ ಆದೇಶ ರದ್ದುಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್ ಮತ್ತಿತರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಅರ್ಜಿ ಸಲ್ಲಿಸಿದ್ದ ಅರ್ಜಿಗಳನ್ನು ಪೂರ್ಣಪೀಠ ವಜಾಗೊಳಿಸಿದೆ.

2022ರ ಜನವರಿ 31 ಮತ್ತು ನಂತರದ ದಿನಗಳಲ್ಲಿ ವಿದ್ಯಾರ್ಥಿನಿಯರು ಸಲ್ಲಿಸಿರುವ 7 ರಿಟ್ ಅರ್ಜಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಹಾಗೂ ನ್ಯಾಯಮೂರ್ತಿ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ತ್ರಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. 11 ದಿನಗಳ ಕಾಲ ವಿಚಾರಣೆ ನಡೆಸಿದ್ದ ಪೀಠ, ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿರುವುದಾಗಿ ತಿಳಿಸಿತ್ತು.

ಇಂದು ಬೆಳಿಗ್ಗೆ ತೀರ್ಪು ಪ್ರಕಟಿಸಿದ ನ್ಯಾಯಪೀಠ, ಪ್ರಕರಣದ ಸ್ಮೂಕ್ಷತೆ ಹಿನ್ನೆಲೆಯಲ್ಲಿ ನಾಲ್ಕು ಪ್ರಶ್ನೆಗಳನ್ನು ರಚಿಸಿಕೊಂಡು ಅವುಗಳಿಗೆ ಉತ್ತರಿಸಲಾಗಿದೆ. ಆದರಂತೆ ನಾಲ್ಕು ಪ್ರಶ್ನೆಗಳಲ್ಲೂ ಸರಕಾರದ ವಾದ ಎತ್ತಿಹಿಡಿದಿದೆ, ಅರ್ಜಿದಾರರ ವಾದಗಳಲ್ಲಿ ಯಾವುದೇ ಮೆರಿಟ್ ಇಲ್ಲ ಎಂದು ವಜಾಗೊಳಿಸಿದೆ.

ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ
ಮುಖ್ಯವಾಗಿ ಸಮವಸ್ತ್ರ ಕಡ್ಡಾಯಗೊಳಿಸಿರುವ ಆದೇಶದಿಂದ ಮೂಲಭೂತ ಹಕ್ಕು ಉಲ್ಲಂಘನೆಯಾಗಿಲ್ಲ, ಸಂವಿಧಾನಿಕ ಹಕ್ಕುಗಳ ಮೊಟಕಾಗಿಲ್ಲ. ಅರ್ಜಿದಾರರು ಸರ್ಕಾರದ ನಿಯಮವನ್ನು ಪಾಲಿಸಬೇಕು ಎಂದು ಆದೇಶಿಸಲಾಗಿದೆ.
ಇದಕ್ಕೂ ಮುನ್ನ ನ್ಯಾ. ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಕೆಲ ದಿನ ವಿಚಾರಣೆ ನಡೆಸಿತ್ತಾದರೂ, ಧಾರ್ಮಿಕ ಸೂಕ್ಷ್ಮ ಪ್ರಕರಣವಾದ್ದರಿಂದ ವಿಸ್ತ್ರುತ ಪೀಠ ವಿಚಾರಣೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿತ್ತು. ಅದರಂತೆ ತ್ರಿಸದಸ್ಯ ಪೀಠ ಅರ್ಜಿಗಳನ್ನು ವಿಚಾರಣೆ ನಡೆಸಿತ್ತು

ಮಧ್ಯಂತರ ಆದೇಶ:

ಹಿಜಾಬ್ ನಿರ್ಬಂಧಿಸಿದ ಬಳಿಕ ರಾಜ್ಯದಲ್ಲಿ ಸಾಕಷ್ಟು ಪ್ರತಿಭಟನೆ, ಗಲಭೆಗಳು ಉಂಟಾಗಿದ್ದವು. ಪರಿಣಾಮ ಶಾಲಾ-ಕಾಲೇಜುಗಳ ವಾತಾವರಣ ಹದಗೆಟ್ಟಿದ್ದರಿಂದ ನ್ಯಾಯಾಲಯ ಫೆ.10ರಂದು ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಿತ್ತು. ಅರ್ಜಿಗಳನ್ನು ಇತ್ಯರ್ಥಪಡಿಸುವವರೆಗೂ ಸಮವಸ್ತ್ರ ಸಂಹಿತೆ ಜಾರಿ ಮಾಡಿರುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಚಿನ್ಹೆ ಹೊಂದಿರುವ ಉಡುಪು ಧರಿಸಿ ಹೋಗಬಾರದು ಎಂದು ಸ್ಪಷ್ಟಪಡಿಸಿತ್ತು.

Girl in a jacket
error: Content is protected !!