ಬೆಂಗಳೂರು, ಮೇ 24- “ರೈತರ ಸಬಲೀಕರಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗಿದೆ. ಒಬ್ಬ ಕೃಷಿಕ ಯಶಸ್ಸನ್ನು ಕಂಡರೆ, ಅದರಿಂದ ಕನಿಷ್ಠ 50 ಜನರಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಜೀವನೋಪಾಯ ಕಟ್ಟಿಕೊಳ್ಳಲು ಸಾಧ್ಯವಿದೆ,” ಎಂದು ಹೇಳಿದರು.ಸುದ್ದಿವಾಹಿನಿ ಆಯೋಜಿಸಿದ್ದ “ಕೃಷಿ ದೇವೋಭವ” ವಿಚಾರ ಸಂಕಿರಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಎನ್ ಚಲುವರಾಯಸ್ವಾಮಿಯವರುಮಾತನಾಡಿದರು,”ನಾನು ಸಚಿವನಾದ ಬಳಿಕ ರಾಜ್ಯದ ಹಲವು ಕೃಷಿಕರ ಮನೆಗೆ ಭೇಟಿ ನೀಡಿ, ಪ್ರಗತಿಪರ ರೈತರ ಹೊಲಗಳನ್ನು ವೀಕ್ಷಿಸಿದ್ದೇನೆ,” ಎಂದು ತಿಳಿಸಿದರು.
ಮಾಧ್ಯಮಗಳು ರೈತರ ಸಬಲೀಕರಣದ ಬಗ್ಗೆ ತೋರುತ್ತಿರುವ ಒಲವನ್ನು ಸಚಿವರು ಇದೇ ವೇಳೆ ಶ್ಲಾಘಿಸಿದರು. “ನ್ಯೂಸ್ ಫಸ್ಟ್ನ ಮುಖ್ಯಸ್ಥ ಎಸ್ ರವಿಕುಮಾರ್ ಅವರು ಕೃಷಿ ಕುಟುಂಬದಿಂದ ಬಂದವರು. ಅವರಿಗೆ ಕೃಷಿ ಕ್ಷೇತ್ರದ ಬಗ್ಗೆ ಇರುವ ಆಸಕ್ತಿಯನ್ನು ಕಂಡು ಸಂತೋಷವಾಗುತ್ತದೆ,” ಎಂದರು.
ರೈತರಿಗೆ ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಒದಗಿಸುವ ಸರ್ಕಾರದ ಕ್ರಮಗಳ ಬಗ್ಗೆ ವಿವರಿಸಿದ ಕೃಷಿ ಸಚಿವರು,”ರೈತರಿಗೆ ದೊಡ್ಡ ಮೊತ್ತದ ಹಣ ವೆಚ್ಚ ಮಾಡಿ ಯಂತ್ರೋಪಕರಣ ಖರೀದಿಸುವುದು ಕಷ್ಟ ಎಂಬುದನ್ನು ಗಮನಿಸಿದ ಸರ್ಕಾರ, ₹50 ಲಕ್ಷ ಸಹಾಯಧನದೊಂದಿಗೆ ಹೈಟೆಕ್ ಹಾರ್ವೆಸ್ಟರ್ ಹಬ್ಗಳನ್ನು ಒದಗಿಸುತ್ತಿದೆ. ನಾಟಿಯಿಂದ ಕಟಾವಿನವರೆಗೆ ಯಂತ್ರೋಪಕರಣಗಳ ಬಳಕೆ ಸಾಧ್ಯವಾಗಿದೆ,” ಎಂದು ಮಾಹಿತಿ ನೀಡಿದರು.
ಕೃಷಿ ಭಾಗ್ಯ ಯೋಜನೆ ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿದ್ದ ಈ ಯೋಜನೆಯನ್ನು ಹಿಂದಿನ ಸರ್ಕಾರ ಸ್ಥಗಿತಗೊಳಿಸಿತ್ತು..
ನಮ್ಮ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಇದನ್ನು ಮರುಜಾರಿಗೊಳಿಸಿದೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷಿ ಹೊಂಡ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.
“ರೈತರಿಗೆ ಫಸಲ್ ವಿಮಾ ಯೋಜನೆಯ ಸಂಪೂರ್ಣ ಲಾಭವನ್ನು ಒದಗಿಸಲಾಗುತ್ತಿದೆ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ರೈತರ ಸಮಸ್ಯೆಗಳಿಗೆ ತ್ವರಿತ ಪರಿಹಾರಕ್ಕಾಗಿ ‘ಏಕೀಕೃತ ರೈತ ಕರೆ ಕೇಂದ್ರ’ ಜಾರಿಗೆ ತರಲಾಗಿದೆ,” ಎಂದು ಸಚಿವರು ಹೇಳಿದರು.
ಈ ಸಂದರ್ಭದಲ್ಲಿ, ಮಾಜಿ ಮುಖ್ಯಮಂತ್ರಿ ಶ್ರೀ ಎಸ್ ಎಂ ಕೃಷ್ಣ ಅವರ ಸ್ಮರಣಾರ್ಥವಾಗಿ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಕೊಪ್ಪ ಗ್ರಾಮದ ರೈತ ಮಹಿಳೆ ಜಯಲಕ್ಷ್ಮಮ್ಮ ಅವರಿಗೆ ₹50,000 ನಗದು ಆರ್ಥಿಕ ನೆರವನ್ನು ನೀಡಲಾಯಿತು. ಈ ಮೊತ್ತವನ್ನು ವಿಧಾನ ಪರಿಷತ್ ಸದಸ್ಯ ಶ್ರೀ ದಿನೇಶ್ ಗೂಳಿಗೌಡ ಅವರು ಒದಗಿಸಿದ್ದಾರೆ.
ಕಾರ್ಯಕ್ರಮದಲ್ಲಿ ನ್ಯೂಸ್ ಫಸ್ಟ್ ಎಂಡಿ ಹಾಗೂ ಸಿಇಓ ಎಸ್. ರವಿಕುಮಾರ್, ಕೃಷಿ ಇಲಾಖೆ ಆಯುಕ್ತ ವೈ.ಎಸ್ ಪಾಟೀಲ್, ನಿರ್ದೇಶಕ ಡಾ. ಜಿ.ಟಿ. ಪುತ್ರ, Swash Bio Technology ಸಂಸ್ಥಾಪಕ .ಎಸ್ ಶಶಿಕುಮಾರ್ ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ರೈತರು ಉಪಸ್ಥಿತರಿದ್ದರು…