ಬೆಂಗಳೂರು, ಮೇ20-ರಾಜ್ಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು,ಬೆಂಗಳೂರಿನಲ್ಲಿ ಸುರಿದ ಮಳೆಗೆ ಹಲವು ಅವಾಂತರಗಳು ಸೃಷ್ಟಿಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.
2011ರ ನಂತರ ಸುರಿದ ದಾಖಲೆ ಮಳೆ ಇದಾಗಿದ್ದು ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಯಿಂದ ಹಲವು ಪ್ರದೇಶಗಳು ಅಪಾರ್ಟ್ಮೆಂಟ್ ಬೇಸ್ಮೆಂಟ್ ಸೇರಿದಂತೆ, ತಗ್ಗು ಪ್ರದೇಶ ಜಲಾವೃತಗೊಂಡಿದೆ. ಇದರಂತೆ ಭಾರಿ ಮಳೆಯಿಂದ ಎನ್ ಎಸ್ ಪಾಳ್ಯದ ಮಧುವನ್ ಅಪಾರ್ಟ್ಮೆಂಟ್ ಬೇಸ್ಮೆಂಟ್ನಲ್ಲಿ ನೀರು ತುಂಬಿಕೊಂಡಿದೆ.ನೋಡ ನೋಡುತ್ತಿದ್ದಂತೆ ಮಳೆ ನೀರು ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಆವರಿಸಿಕೊಂಡಿದೆ. ಬೇಸ್ಮೆಂಟ್ನಲ್ಲಿ ನೀರು ತುಂಬಿಕೊಂಡಿದ್ದ ಕಾರಣ ಅಪಾಯದ ಸಾಧ್ಯತೆ ಹೆಚ್ಚು. ಹೀಗಾಗಿ ಇತರರಿಗೆ ಸಮಸ್ಯೆಯಾಗಬಾರದು ಎಂದು 63 ವರ್ಷದ ಮನೋಹರ್ ಕಾಮತ್ ನೀರು ತೆರವುಗೊಳಿಸಲು ಮುಂದಾಗಿದ್ದಾರೆ
ಮೋಟಾರು ಮೂಲಕ ನೀರು ತೆರವುಗೊಳಿಸಲು ಮನೋಹರ್ ಕಾಮತ್ ಮುಂದಾಗಿದ್ದಾರೆ. ಇದಕ್ಕಾಗಿ ಮೋಟಾರ್ ಸ್ವಿಚ್ ಆನ್ ಮಾಡಿದ್ದಾರೆ. ಆದರೆ ವಿದ್ಯುತ್ ಶಾಕ್ನಿಂದ ಮನೋಹರ್ ಕಾಮತ್ ಹಾಗೂ 9 ವರ್ಷದ ಬಾಲಕ ದಿನೇಶ್ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಮೈಕೋ ಲೇಔಟ್ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಮೃತದೇಹವನ್ನು ಸೆಂಟ್ ಜಾನ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇತ್ತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯಕ್ಕೆ ಮಧುವನ್ ಅಪಾರ್ಟ್ಮೆಂಟ್ಗೆ ವಿದ್ಯುತ್ ಕಡಿತಗೊಳಿಸಲಾಗಿದೆ.
ಬೆಂಗಳೂರಿನಲ್ಲಿ ದಾಖಲೆ ಮಳೆ
ಮೇ.18-19 ರಂದು ಬೆಂಗಳೂರು ಮಳೆಯಲ್ಲಿ ದಾಖಲೆ ಬರೆದಿದೆ. 2011ರ ಬಳಿಕ ಮೇ ತಿಂಗಳಲ್ಲಿ ಬೆಂಗಳೂರಲ್ಲಿ ಸುರಿದ 2ನೇ ಗರಿಷ್ಠ ಪ್ರಮಾಣದ ಮಳೆ ಇದಾಗಿದೆ. ಮೇ.18ರ ಬೆಳಗ್ಗೆ 8.30ರಿಂದ ಸೋಮವಾರ ಬೆಳಗ್ಗೆ 8.30ರ ವರೆಗೆ 105.5 ಎಂಎಂ ಮಳೆಯಾಗಿದೆ. ಇದು 2011ರ ಬಳಿಕ ಮೇ ತಿಂಗಳಲ್ಲಿ ಕಂಡ 2ನೇ ಅತ್ಯಧಿಕ ಮಳಯಾಗಿದೆ.2022ರ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ 114.6 ಎಂಎಂ ಮಳೆ ದಾಖಲಾಗಿತ್ತು. ಇನ್ನು ಬೆಂಗಳೂರು ಇತಿಹಾಸದಲ್ಲಿ ಮೇ ತಿಂಗಳಲ್ಲಿ ಗರಿಷ್ಠ ಮಳೆ ದಾಖಲಾದ ದಿನ 1909ರ ಮೇ.6. ಅಂದು 153.9 ಎಂಎಂ ಮಳೆ ದಾಖಲಾಗಿತ್ತು.