ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರಿ ಕಚೇರಿ ಆರಂಭ
ಬೆಂಗಳೂರು,ಜ.17- ಕರ್ನಾಟಕ ಜನತೆಯ ದಶಕಗಳ ಕನಸು ಕೊನೆಗೂ ನನಸಾಗಿದ್ದು, ಬಹುದಿನಗಳ ಬೇಡಿಕೆಯಂತೆ ಅಮೆರಿಕದ ದೂತಾವಾಸ (ಯುಎಸ್ ಕಾನ್ಸುಲೇಟ್) ಕಚೇರಿಯು ಇಂದು ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಯಾಗಿದೆ. ಕರ್ನಾಟಕದ ಜನತೆಯು ಅಮೆರಿಕಾಕ್ಕೆ ಪ್ರಯಾಣಿಸ ಬೇಕೆಂದರೆ ವೀಸಾ ಪಡೆಯಲು ದೂರದ ದೆಹಲಿ, ಚೆನ್ನೈ, ಹೈದರಾಬಾದ್ ಹಾಗೂ ಮುಂಬೈಗೆ ತೆರಳಬೇಕಿತ್ತು. ಇದನ್ನು ತಪ್ಪಿಸಲು ರಾಜಧಾನಿ ಬೆಂಗಳೂರಿನಲ್ಲಿ ಶಾಶ್ವತವಾಗಿ ಕಾರ್ಯ ನಿರ್ವಹಿಸುವ ಧೂತಾವಾಸ ಕಚೇರಿಯನ್ನು ಈಗ ತೆರೆಯಲಾಗಿದೆ.ಅಮೆರಿಕ ದೂತವಾಸ ಕಚೇರಿಯಲ್ಲಿ ವೀಸಾ ಸೇವೆ ಇನ್ನು ಲಭ್ಯವಾಗಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದು, ಒಂದು ವಾರದ ನಂತರ ಇಲ್ಲಿಂದಲೇ ವೀಸಾಗಳನ್ನು ಪಡೆದು ಪ್ರಯಾಣಿಸಬಹುದು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಜಯಶಂಕರ್, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್.ಮಂಜುನಾಥ್, ಭಾರತದಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಜಿ ಖ್ಯಾತ ಉದ್ಯಮಿ ಕಿರಣ್ ಮಂಜುಂದರ್ ಷಾ, ಕ್ರಿಸ್ ಗೋಪಾಲಕೃಷ್ಣನ್, ಯುಎಸ್ ದೂತವಾಸ ಅಧಿಕಾರಿಗಳುಮತ್ತಿತರರು ಭಾಗಿಯಾಗಿದ್ದರು.
ಇತ್ತೀಚೆಗೆ ನಡೆದ ಅಮೆರಿಕ ಮತ್ತು ಭಾರತ ಬಿಸಿನೆಸ್ ಕೌನ್ಸಿಲ್ (ಯುಎಸ್ಐಬಿಸಿ) ಸಂವಾದದಲ್ಲಿ ಮಾತನಾಡಿದ್ದ ಭಾರತದಲ್ಲಿನ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಬೆಂಗಳೂರಿನಲ್ಲಿ ಅಮೆರಿಕ ರಾಯಭಾರ ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದ್ದೇವೆ. ಬೆಂಗಳೂರಿನಲ್ಲಿ ದೂತವಾಸ ಕಚೇರಿ ಹೊಂದಿರದ ಏಕೈಕ ದೇಶ ಅಮೆರಿಕ ಆಗಿತ್ತು. ಆದರೆ, 2025ರ ಜನವರಿಯಲ್ಲಿ ರಾಯಭಾರ ಕಚೇರಿ ಕಾರ್ಯಾರಂಭ ಮಾಡಲಿದೆ ಎಂದು ಘೋಷಿಸಿದ್ದರು.
ಸದ್ಯ ಧೂತವಾಸ ಕಚೇರಿಯು ನಗರದ ವಿಠಲಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್ನಲ್ಲಿ ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸಲಿದೆ. ನಂತರ ನಗರದ ಪ್ರಮುಖ ಭಾಗವೊಂದರಲ್ಲಿ ಶಾಶ್ವತ ಕಚೇರಿ ಸ್ಥಾಪನೆಯಾಗಲಿದೆ. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಒಡಂಬಡಿಕೆ ಮಾಡಿಕೊಂಡಿವೆ.
ಅಮೆರಿಕದ ಪ್ರಮುಖ ನಗರಗಳಿಂದ ಬೆಂಗಳೂರಿಗೆ ನೇರ ವಿಮಾನಯಾನ ಸೌಲಭ್ಯ ಇದೆ. ಆದರೆ ಆದರೆ ವೀಸಾ ಮತ್ತಿತರ ಕೆಲಸಗಳಿಗೆ ಬೇಕಾದ ಸೌಕರ್ಯ ಇರಲಿಲ್ಲ. ಇನ್ನು ಮುಂದೆ ಅಮೆರಿಕಕ್ಕೆ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕೆ ಹೋಗುವವರಿಗೆ ಇಲ್ಲೇ ವೀಸಾ ಸಿಗಲಿದೆ.ಆರಂಭದಲ್ಲಿ ಒಂದು ಒಂದು ಮಿತಿಯಲ್ಲಿ ವೀಸಾ ನೀಡಲಾಗುತ್ತದೆ. ಶಾಶ್ವತ ಕಚೇರಿ ಆರಂಭವಾದ ಬಳಿಕ ಸಂಪೂರ್ಣವಾಗಿ ಕಚೇರಿ ಸಿಬ್ಬಂದಿ ತಮ ಕೆಲಸದಲ್ಲಿ ತೊಡಗಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಅಮೆರಿಕ ಕಾನ್ಸುಲೆಟ್ ಕಚೇರಿ ಸ್ಥಾಪನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಐಟಿ-ಬಿಟಿ, ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಅನುಕೂಲವಾಗಲಿದೆ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಅಮೆರಿಕ ದೂತವಾಸ ಕಚೇರಿ ಆರಂಭವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಅಮೆರಿಕಾದ ರಾಯಭಾರ ಕಚೇರಿ ಆಗಬೇಕೆಂದು ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾದಾಗಲೇ ಪ್ರಯತ್ನ ನಡೆಸಿದ್ದರು. ಅಂದು ಪ್ರಧಾನಿಯಾಗಿದ್ದ ವಾಜಪೇಯಿಯವರನ್ನು ಭೇಟಿ ಮಾಡಲಾಗಿತ್ತು. ಅಲ್ಲಿಂದ ಪ್ರಯತ್ನ ನಡೆದರೂ ಆಗಿರಲಿಲ್ಲ. ಇದೀಗ ಅನುಷ್ಠಾನವಾಗುತ್ತಿರುವುದು ಖುಷಿಯ ವಿಚಾರ. ಬೆಂಗಳೂರು ಜಾಗತಿಕವಾಗಿ ಬೆಳೆದಿದೆ, ಯೋಜನಾ ಬದ್ಧವಾದ ನಗರ ಅಲ್ಲದ ಕಾರಣ ಒಂದಷ್ಟು ಸಮಸ್ಯೆ ಇರಬಹುದು.
ಅದನ್ನು ಪರಿಹರಿಸಲು ಪ್ರಯತ್ನ ನಡೆಸಲಾಗಿದೆ ಎಂದು ಶಿವಕುಮಾರ್ ಹೇಳಿದರು.