ಬೆಂಗಳೂರು ಅ, 22: ದೇಶದ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಆಚರಿಸಲ್ಪಡುವ ದೀಪಾವಳಿ ಹಬ್ಬಕ್ಕೆ ಭಾರತೀಯರ ಜೀವನದಲ್ಲಿ ಬಹಳ ಮಹತ್ವವಾದ ಸ್ಥಾನವಿದೆ. ಅದರಲ್ಲೂ ಅಂಧಕಾರವನ್ನು ಹೋಗಲಾಡಿಸುವ ದೀಪಗಳಿಗೆ ಅವುಗಳದೇ ಆದ ವೈಶಿಷ್ಟ್ಯತೆ ಇದೆ. ದೇಶದ ವಿವಿಧ ಭಾಗಗಳಲ್ಲಿ ತಯಾರಿಸಲಾಗುವ ದೀಪಗಳನ್ನು ಒಂದೇ ವೇದಿಕೆಯ ಅಡಿಯಲ್ಲಿ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಆಯೋಜಿಸಲಾಗಿರುವ ದೀಪಗಳ ಉತ್ಸವ – ಬೆಂಗಳೂರು ಉತ್ಸವಕ್ಕೆ ನಟಿಯರಾದ ದೀನಶ್ರೀ ಹಾಗೂ ಪೂರ್ಣಿಮಾ ಪ್ರಭಾಕರ್ ಚಾಲನೆ ನೀಡಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ನಟಿ ದೀನಶ್ರೀ, ವಿವಿಧ ರೀತಿಯ ದೀಪಗಳನ್ನು ನೋಡುವುದೇ ಆನಂದ. ದೀಪಗಳ ಜೊತೆಯಲ್ಲೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳು ಒಂದೇ ಕಡೆ ದೊರೆಯವ ವ್ಯವಸ್ಥೆ ಇಲ್ಲಿದೆ. 12 ದಿನಗಳ ಕಾಲ ನಡೆಯಲಿರುವ ಈ ಬೆಂಗಳೂರು ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ ಕರಕುಶಲ ಕರ್ಮಿಗಳ ಉತ್ಪನ್ನಗಳನ್ನು ಕೊಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಆಯೋಜಕರಾದ ಅಫ್ತಾಬ್ ಮಾತನಾಡಿ, ಈ ಬಾರಿಯ ಈ ಉತ್ಸವದಲ್ಲಿ ದೀಪಗಳ ಪ್ರಮುಖ ಆಕರ್ಷಣೆಯಾಗಿರಲಿವೆ. ವೈವಿಧ್ಯಮಯ ಮಣ್ಣಿನ ದೀಪಗಳೂ, ಲೋಹದ ದೀಪಗಳು, ತರೇ ವಾರಿ ಲೈಟಿಂಗ್ ಆಯ್ಕೆಗಳ ಶ್ರೇಣಿ ಇಲ್ಲಿರಲಿದೆ. ದೇಶದ ಎಲ್ಲಾ ಭಾಗಗಳಿಂದ ಆಗಮಿಸಿದ ಕರಕುಶಲಕಾರರು ತಯಾರಿಸಿದ ವಿಭಿನ್ನ ರೀತಿಯ ದೀಪಗಳ ಪ್ರದರ್ಶನ ಇಲ್ಲಿರಲಿದೆ.
ಈ ಪ್ರದರ್ಶನ ಹಾಗೂ ಮಾರಾಟ ಮೇಳದ ಪ್ರಮುಖ ಆಕರ್ಷಣೆ ತರೇವಾರಿ ದೀಪಗಳು. ಈ ಬಾರಿ ಒಂದೇ ವೇದಿಕೆಯ ಅಡಿಯಲ್ಲಿ ಎಲ್ಲಾ ರೀತಿಯ ಹಾಗೂ ವಿಭಿನ್ನ ದೀಪಗಳನ್ನು ಖರೀದಿಸಬಹುದಾಗಿದೆ. ಇದರ ಜೊತೆಯಲ್ಲಿಯೇ ಹಬ್ಬಕ್ಕೆ ಬೇಕಾಗಿರುವ ಎಲ್ಲಾ ರೀತಿಯ ಸಾಮಗ್ರಿಗಳನ್ನು ಇಲ್ಲಿ ಕೊಳ್ಳಬಹುದಾಗಿದೆ. ಅಲಂಕಾರಿಕ ವಸ್ತುಗಳ ಜೊತೆಯಲ್ಲಿಯೇ ಮನೆ ಮಂದಿಗೆ ಬೇಕಾಗಿರುವ ಬಟ್ಟೆಗಳು ಹಾಗೂ ಇನ್ನಿತರೆ ವಸ್ತುಗಳನ್ನು ಕೊಳ್ಳಬಹುದಾಗಿದೆ ಎಂದು ಹೇಳಿದರು.