ಚಿತ್ರದುರ್ಗ,ಮೇ,27- ನನ್ನ ಬರಹ ಪ್ರಕಟಗೊಳ್ಳುತ್ತಿಲ್ಲ, ಎಲ್ಲಿಯೂ ಕಾಣುತ್ತಿಲ್ಲವೆಂದರೇ ನನ್ನ ಉಸಿರು ನಿಂತಿದೆ ಎಂದೇ ಜನ ಭಾವಿಸಿಕೊಳ್ಳಬೇಕು ಎಂದು ಸಾಹಿತಿ ಬಿ.ಎಲ್.ವೇಣು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಸೇರಿಕಸಾಪ ವತಿಯಿಂದ ಮಂಗಳವಾರ ಆಯೋಜಿಸಿದ್ದ ತಮ್ಮ 80ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಬರವಣಿಗೆ ನನ್ನ ಜೀವಾಳ, ನಾನು ಬರೆಯುತ್ತಿದ್ದರೆ ನಾನು ಚನ್ನಾಗಿ ಇರುತ್ತೇನೆ, ಇಲ್ಲವಾದರೆ ಅನಾರೋಗ್ಯದಿಂದ ಬಳಲುತ್ತೇನೆ ಎಂದರು.
ಜನತೆ ನನ್ನನ್ನು ಬಹಳಷ್ಟು ಪ್ರೀತಿಯಿಂದ ಕಾಣುತ್ತಾರೆ. ಸಾಹಿತ್ಯ ಸಮ್ಮೇಳನದಲ್ಲಿ ನನ್ನನು ಅಧ್ಯಕ್ಷನನ್ನಾಗಿಸಿದ್ದಾರೆ. ಆದರೆ, ನಾನು ಸಾಸಿವೆ ಕಾಳಿನಷ್ಟು ಮಾತ್ರ ಸಾಧನೆ ಮಾಡಿದ್ದೆನೆ, ಆದರೆ ಜನರು ಸಾಗರದಷ್ಟು ಪ್ರೀತಿ ತೋರುತ್ತಿದ್ದಾರೆ. ಇದು ನನ್ನ ಭಾಗ್ಯ. ನನ್ನ ಎಲ್ಲಾ ಕಾರ್ಯಕ್ರಮಗಳಿಗೆ ಬೆಂಬಲ ನೀಡಿದ್ದಾರೆ. ಎಲ್ಲರ ಅಭಿಮಾನಕ್ಕೆ ನಾನು ಋಣಿ ಎಂದು ಹೇಳಿದರು.
ನಾನು ಇನ್ನೂ ಬರೆಯುವುದು ಬಹಳಷ್ಟು ಇದೆ. ಸಾಹಿತಿ ಪ್ರೊ.ತೆಲಗಾವಿ ಸದಾ ನೆನಪು ಮಾಡುತ್ತಿರುತ್ತಾರೆ. ಎಲ್ಲಾ ಪಾಳೇಗಾರರ ಬಗ್ಗೆಯೂ ಬರೆದು ಮುಗಿಸು ಎಂದು ಹೇಳುತ್ತಾರೆ. ಈಗಾಗಲೇ ಸಾಲು ಸಾಲು ಕಾದಂಬರಿಗಳನ್ನು ಪಾಳೇಗಾರರ ಬಗ್ಗೆ ಬರೆಯಲಾಗಿದೆ. ಅದರೆ ದಲಿತ ಸಮಸ್ಯೆಗಳ ಬಗ್ಗೆ ಬರೆದಾಗ ನನಗೆ ಬಹಳ ಗೌರವ ಸಂದಿದೆ, ವೈಯಕ್ತಿವಾಗಿ ನನಗೆ ಆತ್ಮತೃಪ್ತಿ ಲಭಿಸಿದೆ ಎಂದರು.
ದುರ್ಗದಲ್ಲಿ ನಾನು ಹುಟ್ಟಿ ಬೆಳದಿದ್ದೆನೆ, ಕೋಟೆಯಲ್ಲಿ ತಿರುಗಾಡಿದ್ದೇನೆ, ಚರಿತ್ರೆ ಗೊತ್ತಿರುವುದರಿಂದ ಈ ದಿಸೆಯಲ್ಲಿಯೂ ನಾನು ಕೆಲಸವನ್ನು ಮಾಡಿದ್ದೇನೆ, ಐತಿಹಾಸಿಕ ಕಾದಂಬರಿಗಳು ನನಗೆ ಹೆಚ್ಚಿನ ಮನ್ನಣೆ ತಂದು ಕೊಟ್ಟಿವೆ. ಇದ್ದರೊಂದಿಗೆ ಚಿತ್ರದುರ್ಗದ ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವುದರಿಂದ ನಾನು ಜನಪ್ರಿಯತೆಯನ್ನು ಗಳಿಸಿದ್ದೇನೆ ಎಂದು ವೇಣು ತಿಳಿಸಿದರು.
ಅನಕ್ಷರಸ್ಥರನ್ನು ಮುಟ್ಟುವಂತಹ ಕ್ಷೇತ್ರವಾದ ಸಿನಿಮಾ ರಂಗದಲ್ಲಿಯೂ ನಾನು ಕೆಲಸವನ್ನು ಮಾಡಿದ್ದೇನೆ. ಇದರಿಂದ ಹೆಚ್ಚಿನ ಪ್ರೀತಿ ಸಿಕ್ಕಿದೆ. ನನ್ನ ಆರೋಗ್ಯದ ಗುಟ್ಟು ಎಂದರೆ ಬರವಣಿಗೆ, ಈಗಲೂ ಏನಾದರೂ ಬರೆಯುತ್ತೇನೆ ಇಲ್ಲವೇ ಓದುತ್ತೇನೆ, ಇದೇ ನನಗೆ ಕೆಲಸವಾಗಿದೆ. ಮುಂದೆಯೂ ಏನಾದರೂ ಬರೆಯುತ್ತೇನೆ, ನನ್ನ ಬರವಣಿಗೆಯ ಗುಟ್ಟೇ ಆರೋಗ್ಯವಾಗಿದೆ. ಎಲ್ಲಿಯವರೆಗೂ ಬರೆಯುತ್ತೇನೋ ಅಲ್ಲಿಯವರೆಗೂ ಬದುಕಿರುತ್ತೇನೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಅದೇ ನನ್ನ ಆಯಸ್ಸುನ್ನು ವೃದ್ದಿ ಮಾಡುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್ಪೀರ್ ಮಾತನಾಡಿ, ವೇಣು ಬರೆದಿರುವ ಅತ್ಯುತ್ತಮ ಕಾದಂಬರಿಯನ್ನು ಆಂಗ್ಲ ಭಾಷೆಗೆ ತರ್ಜಿಮೆ ಮಾಡುವುದರ ಮೂಲಕ ಅವರ ಜನಪ್ರಿಯತೆ ದೇಶದಾದ್ಯಂತ ಹರಡುವಂತೆ ಆಗಬೇಕಿದೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ, ವೇಣು ನಮ್ಮ ದುರ್ಗದ ಅಸ್ತಿ, ಮತ್ತಷ್ಟು ಕಾದಂಬರಿಗಳು ಹೂರ ಬರುವಂತೆ ಮಾಡಬೇಕಿದೆ ಎಂದು ತಿಳಿಸಿದರು.
ಮದಕರಿ ಸಾಂಸ್ಕೃತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್ ಮಾತನಾಡಿ, ವೇಣು 80ರ ಸಂಭ್ರಮವನ್ನು ದೊಡ್ಡದಾಗಿ ತರಾಸು ರಂಗಮಂದಿರದಲ್ಲಿ ಏರ್ಪಡಿಸಲಾಗುವುದು ಎಂದರು.
ಮದಕರಿ ನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಸಂದೀಪ್. ಕನ್ನಡ ಸಾಹಿತ್ಯ ಪರಿಷತ್ನ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕಾಧ್ಯಕ್ಷ ವಿ.ಎಲ್.ಪ್ರಶಾಂತ್, ಮೇಘಗಂಗಾಧರ ನಾಯ್ಕ್, ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಎಚ್.ಅಂಜಿನಪ್ಪ, ಖುದ್ದೂಸ್, ಎಲ್.ತಿಪ್ಪೇಸ್ವಾಮಿ, ಕುಮಾರ್ ಗೌಡ, ಶಿವಕುಮಾರ್, ಭವಾನಿ ಮಂಜುನಾಥ್, ಕಿರಣ್, ಎಚ್.ಲಕ್ಷ್ಮಣ್ ಎಸ್.ಸಿದ್ದರಾಜು, ಎಂ.ಎನ್.ಅಹೋಬಳಪತಿ, ಹರಿಯಬ್ಬೆ ಹೆಂಜಾರಪ್ಪ, ವಿ.ಚಂದ್ರಪ್ಪ ಹಾಜರಿದ್ದರು.