ನವದೆಹಲಿ,ಆ,27: ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾವೇರಿ ನದಿ ಕಣಿವೆಯಲ್ಲಿ ತಮಿಳುನಾಡು ಸರ್ಕಾರ ಕೈಗೊಂಡಿರುವ ಯೋಜನೆಗಳ ಬಗ್ಗೆಯೂ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.
ತಮಿಳುನಾಡು ಸರ್ಕಾರವು ನದಿ ಜೋಡಣೆಗೆ ಮುಂದಾಗಿದೆ. ಆದರೆ, ಅದು ಕಾನೂನುಬಾಹಿರ. ಈ ಬಗ್ಗೆ ವಕೀಲರ ತಂಡದ ಜತೆಗೆ ಚರ್ಚಿಸಲಾಗಿದೆ. ಹಾಗೆಯೇ, ರಾಜ್ಯದ ಜಲವಿವಾದ ಪ್ರಕರಣಗಳ ಸಂಬಂಧ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ರಾಜ್ಯದ ಜಲ ವಿವಾದಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ನಲ್ಲಿ ದೀರ್ಘಕಾಲದಿಂದ ಬಾಕಿ ಇರುವ ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
ಮೇಕೆದಾಟು ಸಮನಾಂತರ ಜಲಾಶಯದ ವಿಚಾರದಲ್ಲಿ ಕರ್ನಾಟಕದ ನಿಲುವನ್ನು ಸಂದರ್ಭ ಬಂದಾಗ ಸುಪ್ರೀಂ ಕೋರ್ಟ್ ಮುಂದೆ ಇರಿಸಲಾಗುವುದು. ಮದ್ರಾಸ್ ಹೈಕೋರ್ಟ್ನ ಮದುರೆ ಪೀಠದಲ್ಲಿ ಪ್ರಕರಣವೊಂದನ್ನು ತಮಿಳುನಾಡು ಸರ್ಕಾರ ದಾಖಲಿಸಿದೆ. ಆದರೆ, ಪ್ರಕರಣವು ಮದುರೆ ಪೀಠದ ವ್ಯಾಪ್ತಿಗೆ ಬರುವುದಿಲ್ಲ ಎಂದು ಅವರು ಹೇಳಿದರು.