ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ನಿರ್ಧಾರ- ಹೆಚ್.ಕೆ ಪಾಟೀಲ್
by ಕೆಂಧೂಳಿ
ಬೆಂಗಳೂರು,ಜ,೨೫- ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಹೇಳಿದರು.
ವಿಧಾನಸೌಧದಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ತಿಳಿಸಿದರು.
ಅರಮನೆ ಆಸ್ತಿ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ೧೯೯೬ ರಲ್ಲಿ ಬೆಂಗಳೂರು ಅರಮನೆ ವ್ಯಾಪ್ತಿಯ ೪೭೨ ಎಕರೆ ಭೂಮಿಯನ್ನ ಸರ್ಕಾರ ವಶಕ್ಕೆ ಪಡೆಯಲು ಒಟ್ಟು ೧೧ ಕೋಟಿ ರೂ. ನಿಗದಿ ಪಡಿಸಿತ್ತು. ಅಂದು ಎಕರೆಗೆ ೨.೩೦ ಲಕ್ಷ ರೂ.ನಂತೆ ದರ ನಿಗದಿ ಮಾಡಲಾಗಿತ್ತು. ಆದ್ರೆ ರಾಜಮನೆತನ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿತ್ತು ಎಂದು ಸಚಿವರು ತಿಳಿಸಿದರು.
ಇಂದಿನ ಮಾರುಕಟ್ಟೆ ದರ ಎಕರೆಗೆ ೨೦೦ ಕೋಟಿ ರೂ. ಆಗುತ್ತದೆ. ರಸ್ತೆ ಅಗಲಿಕರಣಕ್ಕೆ ಬೇಕಾದ ೧೫ ಎಕರೆ ೩೬ ಗುಂಟೆ ಜಾಗವನ್ನೇ ವಶಕ್ಕೆ ಪಡೆಯುವುದಾದರೆ ಎಕರೆಗೆ ೨೦೦ ಕೋಟಿ ಬೆಲೆ ಆಗುತ್ತದೆ. ಒಟ್ಟು ೩,೦೦೦ ಕೋಟಿ ರೂ. ಆಗಲಿದೆ. ಇದು ಅಭಿವೃದ್ಧಿ ದೃಷ್ಟಿಯಿಂದ ಕಾರ್ಯ ಸಾಧುವಲ್ಲ. ರಾಜ್ಯ ಸರ್ಕಾರ ಅರಮನೆಯ ಭೂಮಿಯನ್ನು ವಶಕ್ಕೆ ಪಡೆಯುವುದಾದರೆ ಟಿಡಿಆರ್ ಕೊಡಲು ಸಾಧ್ಯವಿಲ್ಲ. ಹಾಗಾಗಿ ಸುಗ್ರೀವಾಜ್ಞೆ ಮೂಲಕ ಜಾಗವನ್ನ ವಶಕ್ಕೆ ಪಡೆಯುವ ಮುಕ್ತ ಅವಕಾಶ ಸರ್ಕಾರ ಇಟ್ಟುಕೊಂಡಿದೆ. ಅದಕ್ಕಾಗಿ ಸುಪ್ರೀಂ ಕೋರ್ಟ್ನಲ್ಲಿ ನಾವು ಅಫಿಡವಿಟ್ ಹಾಕಬೇಕಿದೆ ಎಂದು ವಿವರಿಸಿದರು.
೧೯೯೬ ರಿಂದ ಇಲ್ಲಿಯವರೆಗೆ ಹಲವು ವರ್ಷ ಗತಿಸಿವೆ. ೧೯೯೬ರ ನವೆಂಬರ್ ೧೫ ರಂದು ಮೊದಲು ಭೂಮಿ ಸ್ವಾಧೀನಕ್ಕೆ ಕಾನೂನು ಮಾಡಲಾಗಿತ್ತು. ಹೈಕೋರ್ಟ್ ನಲ್ಲಿ ಪ್ರಶ್ನಿಸಿದಾಗಲೂ ಕೋರ್ಟ್ ಈ ಕಾನೂನನ್ನ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ರಾಜವಂಶಸ್ಥರು ೧೯೯೭ರಲ್ಲಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈಗಾಗಲೇ ೨೭ ವರ್ಷಗಳು ಮುಗಿದು ಹೋಗಿವೆ. ರಸ್ತೆ ಅಗಲೀಕರಣ ವಿಚಾರದಲ್ಲೇ ಟಿಡಿಆರ್ ವ್ಯವಸ್ಥೆ ಬಂದ ಮೇಲೆ ಮತ್ತೆ ಈ ವ್ಯಾಜ್ಯ ಮುನ್ನೆಲೆಗೆ ಬಂದಿದೆ. ಅಂದು ಪೂರ್ತಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ೧೧ ಕೋಟಿ ರೂ. ಗಳಿಗೆ ಲೆಕ್ಕಾ ಹಾಕಿದ್ದೆವು. ಅಂದು ಪ್ರತಿ ಎಕರೆಗೆ ೨.೩೦ ಲಕ್ಷ ರೂ. ಆಗುತ್ತಿತ್ತು. ಆದ್ರೆ ಈಗ ಪ್ರತಿ ಎಕರೆಗೆ ೨೦೦ ಕೋಟಿ ರೂ. ಆಗುತ್ತದೆ ಎಂದು ಸಚಿವರು ತಿಳಿಸಿದರು.
ಮುಂದುವರಿದು ಇಲ್ಲಿಯವರೆಗೆ ಹೈಕೋರ್ಟ್ ತೀರ್ಪಿಗೆ ತಡೆ ಇರಲಿಲ್ಲ. ೨೦೨೪ರ ಡಿ.೧೦ ರಂದು ಸುಪ್ರೀಂ ಕೋರ್ಟ್ ತೀರ್ಪು ಬಂದ ನಂತರ ರಸ್ತೆ ಅಗಲೀಕರಣ ಉದ್ದೇಶಕ್ಕೆ ಟಿಡಿಆರ್ ಅನ್ನ ಮೌಲ್ವೀಕರಿಸಲಾಯಿತು. ೧೫.೩೬ ಎಕರೆ ಭೂಮಿಗೆ ಟಿಡಿಆರ್ ಒಪ್ಪಂದವಾಗಿ, ಪ್ರತಿ ಎಕರೆಗೆ ೨೦೦ ಕೋಟಿ ರೂ. ವ್ಯಾಲ್ಯೂ ಬಂತು. ಹಾಗಾಗಿ ೩,೦೧೬ ಕೋಟಿ ನಾವು ಟಿಡಿಆರ್ ಕೊಡಬೇಕಿತ್ತು. ಇದರಿಂದ ಅಭಿವೃದ್ಧಿಗೆ ಗಂಡಾಂತರವಾಗುತ್ತದೆ. ಹಾಗಾಗಿ ಸುಗ್ರೀವಾಜ್ಞೆ ಹೊರಡಿಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.