ಹೈಕಮಾಂಡ್ ಬೇಟಿ ಸಿಗದೆ ನಿರಶರಾಗಿ ಹಿಂತಿರುಗಿದ ಬಿಜೆಪಿ ಭಿನ್ನರು
by-ಕೆಂಧೂಳಿ
ಬೆಂಗಳೂರು, ಫೆ,06-ವಿಜಯೆಂದ್ರ ವಿರುದ್ಧ ಬಂಡೆದ್ದಿದ್ದ ಬಿಜೆಪಿಯ ಭಿನ್ನಮತೀಯ ಗುಂಪಿಗೆ ತೀವ್ರ ಹಿನ್ನೆಡೆಯಾಗಿದೆ.ವರಿಷ್ಠರನ್ನು ಬೇಟಿಯಾಗಲು ದೆಹಲಿಗೆ ತೆರಳಿದ್ದ ತಂಡಕ್ಕೆ ವರಿಷ್ಠರು ಬೇಟಿಯ ಅವಕಾಶವೆ ಸಿಗದೆ ಬೆಂಗಳೂರಿಗೆ ಹಿಂದಿರುಗಿದ್ದಾರೆ.

Adavategement
ಅಲ್ಲದೆ ಪದೆ ಪದೆ ಹೀಗೆ ದೆಲ್ಲಿಗೆ ಬಂದು ಭಿನ್ನ ಚಟುವಟಿಕೆ ನಡೆಸಿತ್ತಿರುವವರ ವಿರುದ್ಧ ಹೈಕಮಾಂಡ್ ಗರಂ ಆಗಿ ವಾರ್ನಿಂಗ್ ನೀಡಿದೆ ,ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದಾಗಿ ರಮೇಶ್ ಜಾರಕಿಹೊಳಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದು ಕೂಡ ವರಿಷ್ಠರ ಗಮನಕ್ಕೆ ಬಂದು ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಯಾಕೆಂದರೆ, ಈ ಭೇಟಿ ನಡೆದೇ ಇರಲಿಲ್ಲ. ಹಾಗಾಗಿ ಈ ವಿಚಾರದಲ್ಲೂ ಹೈಕಮಾಂಡ್ ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ಭಿನ್ನರು ಬಂದ ದಾರಿಗೆ ಸುಂಕವಿಲ್ಲದಂತೆ ದಿಲ್ಲಿಯಿಂದ ನಿರ್ಗಮಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸೇರಿದಂತೆ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಸೋಮವಾರವೇ ದಿಲ್ಲಿ ತಲುಪಿದ್ದರು. ಯತ್ನಾಳ್ ಸಹಿತ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಬಿ.ಪಿ.ಹರೀಶ್ ಮಂಗಳವಾರ ಈ ತಂಡವನ್ನು ಸೇರಿಕೊಂಡಿದ್ದರು. ವರಿಷ್ಠರನ್ನು ಭೇಟಿ ಮಾಡಿಯೇ ಸಿದ್ಧವೆಂದು ಹೇಳಿಕೊಂಡಿದ್ದ ಈ ರೆಬಲ್ಗಳು ಬುಧವಾರ ಮಧ್ಯಾಹ್ನದ ಹೊತ್ತಿಗೆ ಒಬ್ಬೊಬ್ಬರಾಗಿ ದಿಲ್ಲಿಯಿಂದ ಜಾಗ ಖಾಲಿ ಮಾಡಿದ್ದಾರೆ. ಈ ಪೈಕಿ ಕೆಲವರು ಪ್ರಯಾಗ್ರಾಜ್ನ ಕುಂಭಮೇಳದತ್ತ ಪ್ರಯಾಣ ಬೆಳೆಸಿದರೆ ಕೆಲವರು ಹೈದರಾಬಾದ್ ಮಾರ್ಗವಾಗಿ ರಾಜ್ಯಕ್ಕೆ ವಾಪಸಾಗಲು ಹೊರಟರು. ಇನ್ನು ಕೆಲವರು ನೇರವಾಗಿ ಬೆಂಗಳೂರು ವಿಮಾನ ಹಿಡಿದರು ಎಂದು ತಿಳಿದು ಬಂದಿದೆ.
ಸಂತೋಷ್ ಬೇಟಿ ಮಾಡಿದ ಭಿನ್ನರು
ಈ ಎಲ್ಲ ಬೆಳವಣಿಗೆ ನಡುವೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರನ್ನು ಕುಮಾರ್ ಬಂಗಾರಪ್ಪ ಭೇಟಿಯಾಗಿದ್ದರು. ಈ ಭೇಟಿ ಕುರಿತ ಫೋಟೋ ಬಹಿರಂಗವಾಗುವುದರೊಂದಿಗೆ ರೆಬಲ್ಗಳ ದೂರು ಕೇಳಲು ದಿಲ್ಲಿ ಅಂಗಳದಲ್ಲಿ ವೇದಿಕೆ ನಿರ್ಮಾಣವಾಗಬಹುದು ಎಂಬ ಮಾತು ಕೇಳಿ ಬಂದಿತ್ತು. ಯತ್ನಾಳ್ ಮತ್ತಿತರರು ದಿಲ್ಲಿಗೆ ಹೋಗುವ ಮುನ್ನವೇ ಅಲ್ಲಿಗೆ ಭೇಟಿ ನೀಡಿದ್ದ ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರಿಗೆ ನಡ್ಡಾ ಭೇಟಿಯ ಅವಕಾಶ ಲಭ್ಯವಾಗಿತ್ತು. ಆಗ ವಿಜಯೇಂದ್ರ ವಿರುದ್ಧ ಲಿಂಬಾವಳಿ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ಇದನ್ನು ಹೊರತು ಪಡಿಸಿದರೆ ರೆಬಲ್ಗಳಿಗೆ ಆಶಾದಾಯಕವಾಗಬಲ್ಲ ಯಾವ ವಿದ್ಯಮಾನವೂ ದಿಲ್ಲಿಯಲ್ಲಿ ನಡೆಯಲಿಲ್ಲ ಎನ್ನಲಾಗಿದೆ.
ಇದರ ಮಧ್ಯೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭಿನ್ನರು ಭೇಟಿಯಾಗಿದ್ದಾರೆ. ಈ ಮೂಲಕ ತಟಸ್ಥ ಬಣದ ಬೆಂಬಲದ ಪಡೆಯಲು ರೆಬಲ್ಗಳು ಯತ್ನಿಸಿದ್ದಾರೆ. ಆದರೆ, ಯಾವುದಕ್ಕೂ ಹೈಕಮಾಂಡ್ ಸೊಪ್ಪು ಹಾಕುವುದಿಲ್ಲಎನ್ನುವುದು ಅರಿವಿಗೆ ಬರುತ್ತಿದ್ದಂತೆ ಭಿನ್ನರ ಉತ್ಸಾಹ ಭಂಗವಾಗಿದೆ ಎಂದು ಹೇಳಲಾಗುತ್ತಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತಿತರ ಪ್ರಮುಖರನ್ನು ಭೇಟಿಯಾಗಲು ರೆಬಲ್ಗಳು ಯತ್ನಿಸಿದ್ದರು. ಪಕ್ಷದ ರಾಜ್ಯ ಉಸ್ತುವಾರಿ ರಾಧಾಮೋಹನ್ದಾಸ್ ಅಗರ್ವಾಲ್ ವಿರುದ್ಧ ದೂರು ಸಲ್ಲಿಸುವುದು ಇವರ ಅಜೆಂಡಾದಲ್ಲಿತ್ತು. ಆದರೆ, ಭೇಟಿಗೆ ಅವಕಾಶವಿಲ್ಲವೆಂದು ಹೈಕಮಾಂಡ್ ಖಡಕ್ ಸಂದೇಶ ರವಾನಿಸಿದ್ದಾರೆ. ಹಾಗಾಗಿ ಬೇರೆ ದಾರಿಯಿಲ್ಲದೆ ವಾಪಸಾಗಿದ್ದಾರೆ ಎಂದು ತಿಳಿದು ಬಂದಿದೆ.