ಸೋಲು-ಗೆಲುವು ಸಮವಾಗಿ ಸ್ವೀಕರಿಸುವೇ-ಬೊಮ್ಮಾಯಿ

Share

ಬೆಂಗಳೂರು, ನ, ೦೩: “ಯಾವುದೇ ಸಂದರ್ಭದಲ್ಲಿ ಸೋಲು ಮತ್ತು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿವಿಧ ರೀತಿಯ ವ್ಯಾಖ್ಯಾನವಾಗುತ್ತಿದೆ ಎನ್ನುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
“ಸಿಂಧಗಿಯಲ್ಲಿ ಗೆಲುವಿಗೆ ಶ್ರಮಿಸಿದ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ಮತ ಹಾಕಿದ ಮಹಾಜನತೆಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ,” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
“ಇನ್ನು ಬಹು ನಿರೀಕ್ಷಿತ ಹಾನಗಲ್ ಕ್ಷೇತ್ರದ ಸೋಲಿನ ಕುರಿತು ನಾವು ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದೇವೆ. ಈ ಅಂತರವನ್ನು ನಾವು ಸಾಧಿಸಬಹುದಾಗಿತ್ತು. ಕಾರಣಗಳನ್ನು ವಿಶ್ಲೇಷಿಸಿ, ಅವುಗಳನ್ನು ಸರಿಪಡಿಸಿಕೊಂಡು ಮುಂದೆ ಹೋಗುವ ಕೆಲಸವನ್ನು ಮಾಡುತ್ತೇವೆ,” ಎಂದರು.
“ಹಾನಗಲ್‌ನಲ್ಲಿ ದಿ. ಸಿ.ಎಂ. ಉದಾಸಿಯವರಿಗಿದ್ದ ಜನಪ್ರಿಯತೆಯನ್ನು ಸ್ವಲ್ಪಮಟ್ಟಿಗೆ ನಮ್ಮಿಂದ ಮುಂದುವರೆಸಲಾಗಲಿಲ್ಲ. ಕೋವಿಡ್ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಉತ್ತಮವಾಗಿ ಕೆಲಸ ಮಾಡಿದ್ದಾರೆ, ಅದಕ್ಕೆ ಜನ ಅವರನ್ನು ಬೆಂಬಲಿಸಿದ್ದಾರೆ,” ಎಂದರು.

೧೦೦ ದಿನ ಪೂರೈಸಿದ ಬೊಮ್ಮಾಯಿ
ರಾಜ್ಯದ ಮುಖ್ಯಮಂತ್ರಿಯಾಗಿ ೧೦೦ ದಿನಗಳಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬಸವರಾಜ ಬೊಮ್ಮಾಯಿ, “ಒಂದು ವರ್ಷದಂತೆ ಪ್ರಮುಖ ಘಟ್ಟವೇನಲ್ಲ. ಆದರೆ, ೧೦೦ ದಿನದಲ್ಲಿ ಸರ್ಕಾರದ ದಿಕ್ಕು, ಭರವಸೆ, ಸಮಸ್ಯೆಗಳನ್ನು ಎದುರಿಸಿದ ರೀತಿ, ಇವುಗಳ ಸ್ಥೂಲವಾಗಿ ಮಾಹಿತಿ ನೀಡಲಾಗುವುದು,” ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ಉಪ ಚುನಾವಣೆ ಫಲಿತಾಂಶ ದಿಕ್ಸೂಚಿ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, “ವಿರೋಧ ಪಕ್ಷದವರು ಹಾಗೆ ಹೇಳಬೇಕು. ಸಿಂದಗಿಯಲ್ಲಿ ೩೧,೦೦೦ ದೊಡ್ಡ ಅಂತರದಿಂದ ಕಾಂಗ್ರೆಸ್ ಸೋತಿದೆ. ಅದಕ್ಕೆ ಏನು ಹೇಳುತ್ತಾರೆ,” ಎಂದು ಪ್ರಶ್ನಿಸಿದರು.

 

Girl in a jacket
error: Content is protected !!