ಕಲಬುರ್ಗಿ,ಜೂ,14-ಯುಪಿಎ ಸರಕಾರದ ಅವಧಿಯಲ್ಲಿ ಭಾರಿ ಹಗರಣಗಳು ನಡೆದಿದ್ದವು. ಬಳಿಕ ಎನ್.ಡಿ.ಎ. ಅವಧಿಯಲ್ಲಿ ಈ ದೇಶಕ್ಕೆ ಉಜ್ವಲ ಭವಿಷ್ಯವಿದೆ; ಭಾರತದಲ್ಲಿ ಭ್ರಷ್ಟಾಚಾರರಹಿತ ಆಡಳಿತ ನೀಡಲು ಸಾಧ್ಯವಿದೆ ಎಂಬುದನ್ನು ನರೇಂದ್ರ ಮೋದಿಜೀ ಅವರ ಸರಕಾರ ಸಾಬೀತುಪಡಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತವು ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಲುಪಬಹುದು ಎಂಬ ವಿಶ್ವಾಸವನ್ನು ನರೇಂದ್ರ ಮೋದಿಜೀ ಅವರ ಸರಕಾರ ನೀಡಿದೆ ಎಂದು ತಿಳಿಸಿದರು. 11 ವರ್ಷಗಳ ನರೇಂದ್ರ ಮೋದಿಜೀ ಅವರ ಸರಕಾರವು ದಿಟ್ಟ ನಿರ್ಧಾರ ತೆಗೆದುಕೊಂಡು ಭಾರತವನ್ನು ಸದೃಢವಾಗಿ ಮುನ್ನಡೆಸಿ ದೇಶದ ಜನತೆಗೆ ಸಂತಸ ಕೊಟ್ಟಿದೆ ಎಂದರು.
2047ರಲ್ಲಿ ಈ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಪರಿವರ್ತನೆ ಆಗಬೇಕೆಂಬ ನಿಟ್ಟಿನಲ್ಲಿ ವಿಶ್ವಾಸ ತುಂಬುವ ರೀತಿಯಲ್ಲಿ ಪ್ರಧಾನಿಯವರು ಭಾರತವನ್ನು ಮುನ್ನಡೆಸುತ್ತಿದ್ದಾರೆ. ಕಳೆದ 11 ವರ್ಷಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ಉತ್ತಮ ಆಡಳಿತವನ್ನು ಮೋದಿಜೀ ಅವರು ನೀಡಿದ್ದಾರೆ ಎಂದು ತಿಳಿಸಿದರು.
ನರೇಂದ್ರ ಮೋದಿಜೀ ಅವರ ನೇತೃತ್ವದ ಕಾಂಗ್ರೆಸ್ಸೇತರ- ಎನ್.ಡಿ.ಎ. ಸರಕಾರವು ಸತತವಾಗಿ 3ನೇ ಬಾರಿ ಅಧಿಕಾರಕ್ಕೆ ಬಂದು 11 ವರ್ಷಗಳನ್ನು ಪೂರೈಸಿದ ಶುಭ ಗಳಿಗೆ ಇದು ಎಂದು ನುಡಿದರು. ಮೋದಿಜೀ ಅವರು 2014ರಲ್ಲಿ ಪ್ರಧಾನಿಯಾದರು. ಅದಕ್ಕೂ ಮುಂಚಿತವಾಗಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿ ತಮ್ಮದೇ ಆದ ಅನುಭವವನ್ನು ಪಡೆದವರು ಎಂದರು.
ನಕ್ಸಲಿಸಂ ಬುಡಸಮೇತ ನಾಶ, 370ನೇ ವಿಧಿ ರದ್ದು..
ಆಂತರಿಕ ಭದ್ರತೆ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಗರಿಮೆಗಳಿಗೆ ಮೋದಿಜೀ ಅವರ ಆಡಳಿತ ಸಾಕ್ಷಿಯಾಗಿದೆ. 10-15 ವರ್ಷಗಳ ಹಿಂದೆ ದೇಶವು ಉಗ್ರಗಾಮಿ ಚಟುವಟಿಕೆಗಳಿಂದ ತತ್ತರಿಸಿ ಹೋಗಿತ್ತು. ನಕ್ಸಲಿಸಂ ಪಿಡುಗು ದೇಶದ ಅನೇಕ ರಾಜ್ಯಗಳಿಗೆ ವಿಸ್ತರಿಸಿ ದೇಶದಲ್ಲಿ ಅಸ್ಥಿರತೆ ಕಾಡುತ್ತಿತ್ತು. ಭಾರತದ ಬಗ್ಗೆ ಜಗತ್ತಿನಲ್ಲಿ ವಿಶ್ವಾಸ ಬರುತ್ತಿರಲಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ನರೇಂದ್ರ ಮೋದಿಜೀ ಮತ್ತು ದೇಶದ ಉಕ್ಕಿನ ಮನುಷ್ಯರೆಂದೇ ಹೆಸರು ಪಡೆದ ಅಮಿತ್ ಶಾ ಜೀ ಅವರ ದಿಟ್ಟ ನಿರ್ಧಾರದಿಂದ ನಕ್ಸಲಿಸಂ ಅನ್ನು ಬಹುತೇಕ ಬುಡಸಮೇತ ಕಿತ್ತು ಹಾಕಲು ಸಾಧ್ಯವಾಗಿದೆ. 370ನೇ ವಿಧಿ ರದ್ದು ಮಾಡುವ ಕುರಿತು ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. 370ನೇ ವಿಧಿ ರದ್ದು ಮಾಡುವ ಮೂಲಕ ಜಮ್ಮು- ಕಾಶ್ಮೀರದಲ್ಲಿ ಶಾಂತಿ ಕಾಪಾಡುವ ಸ್ಥಿತಿ ನಿರ್ಮಾಣವಾಗಿದೆ. ಲಕ್ಷ ಲಕ್ಷ ಸಂಖ್ಯೆಯ ಪ್ರವಾಸಿಗರು ಅಲ್ಲಿಗೆ ಭೇಟಿ ಕೊಡುತ್ತಿದ್ದಾರೆ ಎಂದರು.
2014ರಲ್ಲಿ ಪರಿಸ್ಥಿತಿ ಹೇಗಿತ್ತೆಂದರೆ, ಮನಮೋಹನ್ ಸಿಂಗ್ ಅವರ ಯುಪಿಎ ಸರಕಾರವು ಸತತವಾಗಿ ಹಗರಣಗಳಲ್ಲಿ ಸಿಲುಕಿ ಹಾಕಿಕೊಂಡಿತ್ತು. 2 ಜಿ ಹಗರಣ, ಕಾಮನ್ವೆಲ್ತ್ ಗೇಮ್ಸ್ ಹಗರಣ, ವಸತಿ ಹಗರಣ ಸೇರಿ 12 ಲಕ್ಷ ಕೋಟಿಗೂ ಹೆಚ್ಚು ಮೊತ್ತದ ಹಗರಣಗಳು ಈ ದೇಶದಲ್ಲಿ ಯುಪಿಎ ಸರಕಾರದಲ್ಲಿ ನಡೆದಿತ್ತು. ಯುವಜನತೆಗೆ ಭಾರತದ ಅಭಿವೃದ್ಧಿ ಕುರಿತ ವಿಶ್ವಾಸವೇ ಹೊರಟುಹೋಗಿತ್ತು ಎಂದು ವಿವರಿಸಿದರು. ಭ್ರಷ್ಟಾಚಾರರಹಿತ ಆಡಳಿತ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ದೇಶದ ಜನತೆ ಬಂದಿದ್ದರು ಎಂದು ವಿಶ್ಲೇಷಿಸಿದರು..
ಕೇಂದ್ರ ಸರಕಾರದ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸ..
ಜಿಎಸ್ಟಿ ಮೂಲಕ 1 ಲಕ್ಷದ 12 ಸಾವಿರ ಕೋಟಿ ಮೊತ್ತ ಕರ್ನಾಟಕಕ್ಕೆ ಬಂದಿದೆ. ಕರ್ನಾಟಕವು ಗರಿಷ್ಠ ಜಿಎಸ್ಟಿ ಮೊತ್ತವನ್ನು ಪಡೆದ ರಾಜ್ಯ ಎಂದು ಅವರು ತಿಳಿಸಿದರು. ಕೇಂದ್ರ ಸರಕಾರದ ಯೋಜನೆಗಳಿಗೆ ಕಲ್ಲು ಹಾಕುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಟೀಕಿಸಿದರು.
ರಾಜ್ಯ ಸರಕಾರಕ್ಕೆ ಮ್ಯಾಚಿಂಗ್ ಗ್ರಾಂಟ್ ಕೊಡಲು ಸಾಧ್ಯವಾಗುತ್ತಿಲ್ಲ; ಮ್ಯಾಚಿಂಗ್ ಗ್ರಾಂಟ್ ಕೊಟ್ಟಲ್ಲಿ ಕೇಂದ್ರವೂ ಅನುದಾನ ಬಿಡುಗಡೆ ಮಾಡುತ್ತದೆ. ಅದನ್ನು ಮಾಡದೆ, ಕೇಂದ್ರ ಸರಕಾರ ಅನುದಾನ ಕೊಡುತ್ತಿಲ್ಲ ಎಂದು ದೂಷಿಸುವುದು ಸರಿಯೇ ಎಂದು ಕೇಳಿದರು. ರಾಜ್ಯ ಸರಕಾರದ ಬಳಿಕ ಮ್ಯಾಚಿಂಗ್ ಗ್ರಾಂಟ್ ಮಾತ್ರವಲ್ಲದೇ, ಅಭಿವೃದ್ಧಿಗೆ ಕೊಡಲು ಹಣ ಇಲ್ಲ ಎಂದು ಆಕ್ಷೇಪಿಸಿದರು.
ಅಹಮದಾಬಾದ್ ವಿಮಾನ ದುರಂತ ಅತ್ಯಂತ ಖೇದಕರ. ದುರ್ಘಟನೆ ಕುರಿತು ತನಿಖೆ ಪ್ರಾರಂಭವಾಗಿದೆ. ಬ್ಲ್ಯಾಕ್ ಬಾಕ್ಸ್ಗಳೂ ಸಿಕ್ಕಿವೆ. ಇಂಥ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದರು. ಬೆಂಗಳೂರಿನ ಕಾಲ್ತುಳಿತಕ್ಕೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳೇ ಕಾರಣಕರ್ತರು. ಕಾಲ್ತುಳಿತಕ್ಕೆ ಪೊಲೀಸ್ ಅಧಿಕಾರಿಗಳು ಕಾರಣಕರ್ತರಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವ ಮೂಲಕ ಅವಿವೇಕತನದಿಂದ ನಡೆದುಕೊಂಡಿದ್ದು, ಇದು ಅಕ್ಷಮ್ಯ ಅಪರಾಧ ಎಂದು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.
ಶಾಸಕ ಡಾ. ಅವಿನಾಶ್ ಜಾಧವ್, ಕಲಬುರ್ಗಿ ನಗರ ಜಿಲ್ಲಾಧ್ಯಕ್ಷ ಚಂದ್ರಕಾಂತ್ ಬಿ ಪಾಟೀಲ್, ಕಲಬುರ್ಗಿ ಗ್ರಾಮಾತರ ಜಿಲ್ಲಾಧ್ಯಕ್ಷ ಅಶೋಕ್ ಬಗಲಿ, ವಿಧಾನಪರಿಷತ್ ಮಾಜಿ ಸದಸ್ಯ ಅಮರನಾಥ್ ಪಾಟೀಲ್ ಮತ್ತಿತರ ಮುಖಂಡರು ಇದ್ದರು.