ವಿ.ವಿ ನೇಮಕಾತಿ ಸಂಬಂಧ ಅಶ್ವತ್ಥನಾರಾಯಣ-ಪ್ರಿಯಾಂಕ್ ವಾಕ್ಸಮರ
by-ಕೆಂಧೂಳಿ
ಬೆಂಗಳೂರು,ಮಾ,೧೦-ವಿಶ್ವವಿದ್ಯಾಲಯಗಳ ನೇಮಕಾತಿಗೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ ಖರ್ಗೆ ಮತ್ತು ಮಾಜಿ ಸಚಿವ ಮತ್ತು ಹಾಲಿ ಬಿಜೆಪಿ ಶಾಸಕ ಡಾ,ಸಿ.ಎನ್.ಅಶ್ವತ್ಥ್ನಾರಾಯಣ ನಡುವೆ ವಾಕ್ಸಮರ ನಡೆಯಿತು.
ಈ ಹಿಂದೆ ಮಾಜಿ ಸಂಸದ ಬಿಜೆಪಿಯ ಪ್ರತಾಪ್ ಸಿಂಹ ವಿಶ್ವವಿದ್ಯಾಲಯಗಳಲ್ಲಿನ ನೇಮಕಾತಿಗಳಿಗೆ ಹಣ ಕೊಡಬೇಕಾಗಿದೆ ಎನ್ನುವ ಹೇಳಿಕೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡುತ್ತಿದ್ದ ಬಿಜೆಪಿಯ ಅಶ್ವತ್ಥ್ ನಾರಾಯಣ
‘ನಿಮ್ಮ ಕುಟುಂಬದ ಭ್ರಷ್ಟಾಚಾರ ಇಡೀ ದೇಶಕ್ಕೆ ಗೊತ್ತಿದೆ. ಬರೀ ಅಪ್ಪ-ಮಕ್ಕಳ ಪಕ್ಷವಾಗಿದೆ’ ಎಂದು ಕಿಡಿಕಾರಿದರು. ಆಗ ಸಿಡಿಮಿಡಿಗೊಂಡ ಪ್ರಿಯಾಂಕ್, ‘ಬಾಯಿ ಬಂದಂತೆ ಮಾತಾಡಬೇಡಿ’ ಎಂದರು. ಇಬ್ಬರ ನಡುವಿನ ಮಾತು ವೈಯಕ್ತಿಕಆರೋಪ ಪ್ರತ್ಯಾರೋಪಕ್ಕೆ ತಿರುಗಿತು. ‘ಹಿಂದಿನ ಸರ್ಕಾರ ಶೇ ೪೦ ಕಮಿಷನ್ ಸರ್ಕಾರ’ ಎಂಬ ಪ್ರಿಯಾಂಕ್ ಆರೋಪಕ್ಕೆ, ‘ನಿಮ್ಮದು ಶೇ ೧೦೦ ಕಮಿಷನ್ ಸರ್ಕಾರ’ ಎಂದು ಅಶ್ವತ್ಥನಾರಾಯಣ ತಿರುಗೇಟು ನೀಡಿದರು.
ಮಧ್ಯಪ್ರವೇಶಿಸಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್, ‘ನಿಮ್ಮ ಅವಧಿಯಲ್ಲಿ ಶಿಕ್ಷಣವನ್ನು ಖಾಸಗೀಕರಣ ಮಾಡಲು ಹೋಗಿದ್ದೀರಿ’ ಎಂದು ಆರೋಪಿಸಿದರು. ಅದಕ್ಕೆ ಅಶ್ವತ್ಥನಾರಾಯಣ, ‘ನಿಮ್ಮ ಮಗ ಯಾವ ಕಾಲೇಜಿನಲ್ಲಿ ಓದುತ್ತಿದ್ದಾನೆ. ಸರ್ಕಾರಿ ಕಾಲೇಜಿನಲ್ಲಿ ಓದಿಸುತ್ತಿದ್ದೀರಾ? ನೈತಿಕತೆ ಇಲ್ಲವೇ ನಿಮಗೆ’ ಎಂದು ಪ್ರಶ್ನಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್ ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು.
ಅಶ್ವತ್ಥನಾರಾಯಣ ಅವರು ರಾತ್ರಿ ಬಜೆಟ್ ಮೇಲೆ ಮಾತನಾಡುವಾಗ ಸಚಿವ ಪ್ರಿಯಾಂಕ್ ಅಡ್ಡಿಪಡಿಸಿದರೆಂದು, ‘ಪದೇ ಪದೇ ಎದ್ದು ನಿಲ್ಲುತ್ತಿರಲ್ಲ ಪೈಲ್ಸ್ ಏನಾದರೂ ಆಗಿದೆಯೆ’ ಎಂದು ಅಶ್ವತ್ಥನಾರಾಯಣ ಹೇಳಿದ್ದು, ಇಬ್ಬರ ಮಧ್ಯೆ ಮತ್ತೆ ವಾಕ್ಸಮರಕ್ಕೆ ಕಾರಣವಾಯಿತು.ಅಶ್ವತ್ಥನಾರಾಯಣ ಅವರು ಬಳಸಿದ ಪದದ ಬಗ್ಗೆ ಸಚಿವರ ದಿನೇಶ ಗುಂಡೂರಾವ್ ಮತ್ತು ಇತರ ಸಚಿವರು ಆಕ್ಷೇಪ ವ್ಯಕ್ತಪಡಿಸಿದರು. ‘ಪದವನ್ನು ವಾಪಸ್ ಪಡೆದಿದ್ದೇನೆ’ ಎಂದು ಅಶ್ವತ್ಥನಾರಾಯಣ ಹೇಳಿದರು. ‘ಅಷ್ಟೇ ಸಾಲದು ಕ್ಷಮೆ ಕೇಳಬೇಕು’ ಎಂದು ದಿನೇಶ್ ಆಕ್ರೋಶದಿಂದ ಒತ್ತಾಯಿಸಿದಾಗ, ‘ಪ್ರಿಯಾಂಕ್ ಅವರಲ್ಲಿ ಕ್ಷಮೆ ಕೇಳುತ್ತೇನೆ’ ಎಂದರು.‘ಬಿಜೆಪಿಯವರಿಗೆ ನನ್ನ ಬಗ್ಗೆ ಅಸಹನೆ ಏಕೆ? ನನ್ನನ್ನು ಕಾನ್ವೆಂಟ್ ದಲಿತ ಎನ್ನುತ್ತಾರೆ. ಸರ್ಕಾರಿ ದಲಿತ ಎನ್ನುತ್ತಾರೆ. ನೀವೆಲ್ಲ ಮನುಸ್ಮೃತಿಯವರು. ನಿಮ್ಮ ಪಕ್ಷದವರು ಸ್ಪಷ್ಟನೆ ನೀಡಬೇಕು. ಮೊನ್ನೆ ಸುನಿಲ್ ಕುಮಾರ್ ಅವರು ಸದಾಶಿವನಗರದಲ್ಲಿ ಮನೆ ಮಾಡಿಕೊಂಡಿದ್ದೀರಿ ಎಂದರು, ಏಕೆ ನಾವು ಸದಾಶಿವನಗರದಲ್ಲಿ ಮನೆ ಮಾಡಿಕೊಳ್ಳಬಾರದಾ ಎಂದು’ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರುbರೋಧಪಕ್ಷದ ನಾಯಕ ಆರ್.ಅಶೋಕ ಅವರು, ಇಲ್ಲಿ ದಲಿತ ಮತ್ತು ಮೇಲ್ವರ್ಗ ಎಂಬ ಪ್ರಶ್ನೆ ಇಲ್ಲ. ಆ ರೀತಿಯ ಭಾವನೆ ಇಟ್ಟುಕೊಳ್ಳುವುದು ಬೇಡ ಎಂದು ಗದ್ದಲಕ್ಕೆ ತೆರೆ ಎಳೆದರು