ನವದೆಹಲಿ,ಮೇ,16: ಸೋನಿಪತ್ ನಲ್ಲಿ ಓಲಂಪಿಕ್ ಆಯ್ಕೆ ಯಾದ ಕ್ರೀಡಾಪಟುಗಳ ತರಬೇತಿ ಶಿಬಿರವನ್ನು ರದ್ಧುಗೊಳಿಸಲಾಗಿದೆ.
ಒಲಿಂಪಿಕ್ಸ್ಗೆ ತೆರಳಲಿರುವ ಪುರುಷ ಮತ್ತು ಮಹಿಳಾ ಕುಸ್ತಿಪಟುಗಳು ಮುಂದಿನ ಮಂಗಳವಾರ ಬಹಲ್ಗರ್ನಲ್ಲಿರುವ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಜಮಾಯಿಸಬೇಕಾಗಿತ್ತು. ಆದರೆ ಅದನ್ನು ರದ್ದು ಮಾಡಿ ಕುಸ್ತಿಪಟುಗಳನ್ನು ನೇರವಾಗಿ ಪಾಲೆಂಡ್ಗೆ ಕಳುಹಿಸಲು ನಿರ್ಧರಿಸಲಾಗಿದೆ. ಅಲ್ಲಿ ಜೂನ್ ಎಂಟರಿಂದ 13ರ ವರೆಗೆ ಟೋಕಿಯೊ ಒಲಿಂಪಿಕ್ಸ್ಗೆ ಸಂಬಂಧಿಸಿದ ರ್ಯಾಂಕಿಂಗ್ ಸೀರಿಸ್ ನಡೆಯಲಿದೆ.
ಕ್ವಾರೆಂಟೇನ್ ಗೆ ಒಳಗಾಗಬೇಕಾಗಿರುವುದರಿಂದ ಬಹಲ್ಗರ್ನಲ್ಲಿ ನಡೆಯಬೇಕಾಗಿದ್ದ ತರಬೇತಿ ಶಿಬಿರವನ್ನು ರದ್ದುಮಾಡಲಾಗಿದೆ. ಅವರವರ ಅಖಾಡಗಳಲ್ಲೇ ಅಭ್ಯಾಸ ಮಾಡಿ ನೇರವಾಗಿ ಪೋಲೆಂಡ್ಗೆ ಪ್ರಯಾಣಿಸುವಂತೆ ಸೂಚಿಸಲಾಗಿದೆ’ ಎಂದು ಭಾರತ ಕುಸ್ತಿ ಫೆಡರೇಷನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಸುದ್ದಿಸಂಸ್ಥೆಗೆ ತಿಳಿಸಿದರು.
‘ಪ್ರತಿಯೊಬ್ಬರಿಗೂ ಅವರು ಇಷ್ಟಪಡುವ ಒಬ್ಬರೊಂದಿಗೆ ತರಬೇತಿಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ವಿನೇಶ ಪೋಗಟ್, ಬಜರಂಗ್ ಪೂನಿಯಾ, ರವಿ ದಹಿಯಾ ಮತ್ತು ದೀಪಕ್ ಪೂನಿಯಾ ತಮ್ಮ ವೈಯಕ್ತಿಕ ಕೋಚ್ಗಳೊಂದಿಗೆ ಪ್ರಯಾಣಿಸಲು ಈಗಾಗಲೇ ನಿರ್ಧರಿಸಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.
ಪೋಲೆಂಡ್ನಲ್ಲಿ ಟೂರ್ನಿ ಮುಗಿದ ನಂತರ ಕುಸ್ತಿಪಟುಗಳು ಅಲ್ಲೇ ಉಳಿಯಲಿದ್ದು ಪಾಲೆಂಡ್ ಕುಸ್ತಿ ಫೆಡರೇಷನ್ ಆಯೋಜಿಸಲಿರುವ ತರಬೇತಿ ಶಿಬಿರವೊಂದರಲ್ಲಿ ಪಾಲ್ಗೊಳ್ಳಲಿದ್ದಾರೆ.