ಬೆಂಗಳೂರು ,ಜೂ, ೨೪: ಮಗರದ ಚಲವಾದಿಪಾಳ್ಯದಲ್ಲಿ ಕೊಲೆಯಾದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ೨೪ ಗಂಟೆಯೊಳಗೆ ಬಂಧಿಸುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಗೆ ಕಿಬ್ಬೊಟ್ಟೆಯ ಭಾಗಕ್ಕೆ ಡ್ರ್ಯಾಗರ್ ನಿಂದ ಮೂರು ಬಾರಿ ಇರಿದಿದ್ದ ಹಂತಕ, ಮತ್ತೊಬ್ಬ ಕತ್ತಿಗೆ ಹಾಕಿ ಒಂದೇ ಬಾರಿಗೆ ಕೊಯ್ದಿದ್ದ. ಕೋಳಿ ಕಟ್ ಮಾಡುವ ಮಚ್ಚಿನಿಂದ ತಲೆಗೆ ಹೊಡೆದು ಎಸ್ಕೇಪ್ ಆಗಿರೋ ದುಷ್ಕರ್ಮಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕಿಬ್ಬೊಟ್ಟೆಯ ಬಳಿ ತೀವ್ರ ರಕ್ತಸ್ರಾವದಿಂದ ಚಿಕಿತ್ಸೆ ಫಲಿಸದೆ ರೇಖಾ ಸಾವನ್ನಪ್ಪಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.
ಘಟನೆ ವಿವರ;
ಕಚೇರಿಯಲ್ಲಿ ಇರೋ ಕೆಲಸಗಾರರನ್ನು ವಿಚಾರಣೆ ಮಾಡುತ್ತಿರುವ ಪೊಲೀಸರು ಒಂದೊಂದು ತಂಡದಲ್ಲಿ ಇಬ್ಬಿಬ್ಬರು ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಹುಡುಕಾಟ ನಡೆಸಲಾಗುತ್ತಿದೆ. ಕದಿರೇಶ್ ಕೊಲೆಯಲ್ಲಿ ಆರೋಪಿಯಾಗಿದ್ದ ಸ್ಟೀಪನ್, ಪೀಟರ್ ಹಾಗೂ ಸುರೇಶ್ ನಿಂದ ರೇಖಾ ಅವರ ಕೊಲೆ ನಡೆದಿರೋ ಸಾಧ್ಯತೆಯೂ ಇದೆ. ಎರಡು ತಿಂಗಳ ಹಿಂದೆಯಷ್ಟೇ ಸ್ಟೀಫನ್ ಜಾಮೀನಿನ ಮೇಲೆ ಹೊರಬಂದಿದ್ದ.
೨೦೧೮ರ ಫೆಬ್ರವರಿ ೭ರಂದು ಬಿಜೆಪಿ ಮುಖಂಡನ ಮನೆ ಮುಂದೆಯೇ ಕದಿರೇಶ್ ಅವರನ್ನು ಕೊಲೆ ಮಾಡಲಾಗಿತ್ತು. ಈ ಕೊಲೆ ಹಿನ್ನಲೆಯಲ್ಲಿ ನವೀನ್ ಮತ್ತು ವಿನಯ್ ನ್ಯಾಯಾಲಯಕ್ಕೆ ವಕೀಲರ ಕೋಟ್ ಧರಿಸಿ ಬಂದು ಶರಣಾಗಿದ್ದರು. ನಂತರ ಕೊಲೆಯಲ್ಲಿ ಭಾಗಿಯಾಗಿದ್ದ ಇತರರು ಶರಣಾಗಿದ್ದರು. ಕಾಟನ್ಪೇಟೆಯ ಆಂಜನಪ್ಪ ಗಾರ್ಟ್ನಲ್ಲಿ ವಾಸವಿದ್ದ ಕದಿರೇಶ್ ಅವರನ್ನು ಮನೆ ಸಮೀಪದ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಎಸ್ಕೇಪ್ ಆಗಿದ್ದರು. ೨೦೧೨ರಿಂದ ರೌಡಿ ಶೀಟರ್ ಆಗಿದ್ದ ಕದಿರೇಶ್ ವಿರುದ್ಧ ೧೩ ಪ್ರಕರಣಗಳು ದಾಖಲಾಗಿದ್ದವು. ಸಂಸದ ಪಿಸಿ ಮೋಹನ್ ಕಟ್ಟಾ ಬೆಂಬಲಿಗನಾಗಿದ್ದ ಕದಿರೇಶ್ ಕೊಲೆಯಾಗಿ ೩ ವರ್ಷಗಳ ಬಳಿಕ ಅವರ ಹೆಂಡತಿ ರೇಖಾ ಅವರನ್ನೂ ನಡುರಸ್ತೆಯಲ್ಲೇ ಕೊಲೆ ಮಾಡಲಾಗಿದೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆಗೆ ಮೊದಲೇ ಮುಹೂರ್ತ ಇಡಲಾಗಿತ್ತು. ಇಂದು ಮುಂಜಾನೆಯಿಂದಲೇ ಆಕೆಯ ಚಲನವಲನಗಳ ಮೇಲೆ ಮೂವರು ಕೊಲೆಗಾರರು ಕಣ್ಣಿಟ್ಟಿದ್ದರು. ಮುಂಜಾನೆ ೮ ಗಂಟೆಯಿಂದಲೂ ಆಕೆಯ ಚಲನವಲನಗಳನ್ನು ಗಮನಿಸುತ್ತಿದ್ದರು. ಬೆಳಗ್ಗೆ ರೇಖಾ ಕದಿರೇಶ್ ಫುಡ್ ಕಿಟ್ ಕೊಡುವಾಗಲೂ ಕಚೇರಿಯ ಬಳಿಯೇ ಸುತ್ತಾಡಿದ್ದ ಕೊಲೆಗಾರರು ಯಾರಿಗೂ ಅನುಮಾನ ಬಾರದ ಹಾಗೆ ಸಿಸಿ ಟಿವಿ ಕ್ಯಾಮರಾಗಳನ್ನು ಡೈವರ್ಟ್ ಮಾಡಿದ್ದರು. ಮೂರು ಸಿಸಿ ಕ್ಯಾಮರಾಗಳನ್ನು ವಿಶುವಲ್ ಕಾಣದ ಹಾಗೆ ಡೈವರ್ಷನ್ ಮಾಡಿದ್ದರು.ಇಂದು ಬೆಳಗ್ಗೆ ಸುಮಾರು ೮.೩೦ರ ವೇಳೆಗೆ ಊಟ ಹಂಚಿಕೆ ಆದ ಬಳಿಕ ಮನೆಗೆ ಹೋಗಿದ್ದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ೯:೩೦ರ ಸುಮಾರಿಗೆ ಮತ್ತೆ ಕಚೇರಿಯತ್ತ ಬಂದಿದ್ದರು. ಕಚೇರಿಗೆ ಬಂದ ಕೂಡಲೆ ಸಾರ್ವಜನಿಕರ ಅಹವಾಲು ಸ್ವೀಕರಿಸಲು ಶುರು ಮಾಡಿದ್ದರು. ಈ ವೇಳೆ ಹಂತಕ ರೇಖಾ ಕದಿರೇಶ್ ಜೊತೆ ಮಾತನಾಡಲು ಬಂದಿದ್ದ. ಸುಮಾರು ೧೦ ನಿಮಿಷಗಳು ಮಾತನಾಡಿ ಆಕೆಯನ್ನು ಹೊರಗಡೆ ಕರೆದುಕೊಂಡು ಬಂದಿದ್ದ. ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹೊರಗಡೆ ಬರುತ್ತಿದ್ದಂತೆ ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕುತ್ತಿಗೆ ಸೀಳಿದ್ದ. ತಕ್ಷಣವೇ ಆತನ ಜೊತೆ ಬಂದಿದ್ದ ಮತ್ತಿಬ್ಬರು ಚಾಕುವಿನಿಂದ ಹಲ್ಲೆ ಮಾಡಿದ್ದರು.