ಬೆಂಗಳೂರು, ಜೂ, ೧೫:ನಗರದಲ್ಲಿ ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡುತ್ತಿರುವ ಸರ್ಕಾರ ಈ ವೇಳೆ ಪಿಜಿಯಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚಿಸಿದೆ.
ಯಾವುದೇ ಕಾರಣಕ್ಕೂ ಪಿಜಿಯಲ್ಲಿ ಇರುವ ಅವಕಾಶ ನೀಡಬಾರದು ಎಲ್ಲರನ್ನೂ ಅವರವರ ಊರುಗಳಿಗೆ ಕಳಿಸಿಕೊಡಿ ಎಂದು ಪಿಜಿ ಮಾಲೀಕರಿಗೆ ಬಿಬಿಎಂಪಿ ನೊಟೀಸ್ ಜಾರಿಮಾಡಿದೆ.
ಒಂದು ವೇಳೆ ಅನಿವಾರ್ಯ ಕಾರಣಗಳಿಗಿಂದಾಗಿ ವಿದ್ಯಾರ್ಥಿಗಳನ್ನು ಪಿಜಿಯಲ್ಲಿ ಉಳಿಸಿಕೊಂಡಲ್ಲಿ ಪಿಜಿಯಲ್ಲಿ ವೈಯಕ್ತಿಕ ಆರೋಗ್ಯ ಮತ್ತು ಸ್ವಚ್ಛತೆಯ ಜವಾಬ್ದಾರಿ ಅವರದ್ದೇ ಆಗಿರುತ್ತದೆ. ೧೧೦ ಚದುರ ಅಡಿಯ ಕೊಠಡಿಯಲ್ಲಿ ಇಬ್ಬರಿಗಿಂತ ಹೆಚ್ಚು ಜನರಿಗೆ ಅವಕಾಶವಿಲ್ಲ. ಪಿಜಿಯ ಸ್ವಚ್ಛತೆಯ ಹೊಣೆಯನ್ನು ಪಿಜಿ ಮಾಲೀಕರೇ ಹೊರಬೇಕು. ಪಿಜಿ ವಾಸಿಗಳನ್ನು ಯಾವುದೇ ಮುನ್ಸೂಚನೆ ಇಲ್ಲದ ದಿಢೀರ್ ಎಂದು ಹೊರ ಹಾಕುವಂತಿಲ್ಲ. ಪಿಜಿ ಮಾಲೀಕರ ನಿರ್ಲಕ್ಷ್ಯದಿಂದ ಕೋವಿಡ್ ಹರಡುವಿಕೆ ಕಂಡಲ್ಲಿ ಕಠಿಣ ಕ್ರಮ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ಆದೇಶಿಸಿದ್ದಾರೆ.
ಈ ಸಂಬಂಧ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸೂಚನಾ ಪತ್ರ ಹೊರಡಿಸಿದ್ದು, ಕಾಲೇಜುಗಳು ರಜೆ ಇರುವ ವಿದ್ಯಾರ್ಥಿಗಳು ಪಿಜಿಯಲ್ಲಿ ಇರಲು ಅವಕಾಶ ಇಲ್ಲ ಎಂದಿದ್ದಾರೆ. ರಾಜ್ಯದಲ್ಲಿ ಜೂನ್ ೨೧ರಿಂದ ಎರಡನೇ ಹಂತದ ಅನ್ಲಾಕ್ ಪ್ರಕ್ರಿಯೆ ಶುರುವಾಗಲಿದೆ. ಈಗಾಗಲೇ ೧೧ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದ್ದು, ಬೆಳಗ್ಗೆ ೬ ರಿಂದ ಮಧ್ಯಾಹ್ನ ೨ ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇದೀಗ ಜೂನ್ ೨೧ರಂದು ಎರಡನೇ ಹಂತದ ಲಾಕ್ಡೌನ್ ಸಡಿಲ ಪ್ರಕ್ರಿಯೆ ಶುರುವಾಗಲಿದ್ದು, ಯಾವುದಕ್ಕೆಲ್ಲಾ ಅನುಮತಿ ಇದೆ, ಯಾವುದಕ್ಕೆ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅನ್ಲಾಕ್ ಮಾಡುವುದರ ಜತೆಗೆ ಕೊರೊನಾ ಸೋಂಕಿನಿಂದ ಜನರಿಗೆ ರಕ್ಷಣೆ ನೀಡುವುದು ಕೂಡ ಸರ್ಕಾರದ ಆದ್ಯತೆಯಾಗಿದ್ದು, ಹಂತ ಹಂತವಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ.
ಪಿಜಿಗಳಲ್ಲಿರುವ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ
Share