ಬೆಂಗಳೂರು, ಜೂ.9- ಬ್ಲಾಕ್ ಫಂಗಸ್ ಬಗ್ಗೆ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆತಂಕಕಾರಿ ವಿಷಯವೊಂದನ್ನು ತಿಳಿಸಿದ್ದಾರೆ. ಬ್ಲಾಕ್ ಫಂಗಸ್ ಅಪರೂಪದ ಸೋಂಕು. ಮಣ್ಣು, ಗಿಡಗಳು ಹಾಗೂ ಕೊಳೆಯುತ್ತಿರುವ ತರಕಾರಿಗಳಲ್ಲಿ ಕಂಡುಬರುವ ಶಿಲೀಂದ್ರ, ತೆರೆದ ಚರ್ಮ ಅಥವಾ ಉಸಿರಾಟದ ಮೂಲಕ ನಮ್ಮ ದೇಹ ಪ್ರವೇಶಿಸುತ್ತದೆ ಎಂದಿದ್ದಾರೆ.
ಬ್ಲಾಕ್ ಫಂಗಸ್ ವಿರುದ್ಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಾಗೃತಿ ಅಭಿಯಾನವನ್ನು ಆರಂಭಿಸಿದೆ. ಅದರ ಭಾಗವಾಗಿ ಇಂದು ಟ್ವಿಟ್ ಮಾಡಿರುವ ಸಚಿವರು ಮಣ್ಣು, ಗಿಡ ಹಾಗೂ ಕೊಳೆಯುತ್ತಿರುವ ತರಕಾರಿಗಳಿಂದ ಬ್ಲಾಕ್ ಫಂಗಸ್ ಹರಡಲಿದೆ ಎಂದು ತಿಳಿಸಿದ್ದಾರೆ.
ಇದು ಆತಂಕಕ್ಕೆ ಕಾರಣವಾಗಿದೆ. ಈವರೆಗೂ ಕಿಡ್ನಿ, ಕ್ಯಾನ್ಸರ್, ಅತಿಯಾದ ಮಧುಮೇಹ ರೋಗಗಳಿಂದ ಬಳಲುವವರಲ್ಲಿ ಬ್ಲಾಕ್ ಫಂಗಸ್ ಬರುತ್ತಿತ್ತು. ಕೋವಿಡ್ ಎರಡನೇ ಅಲೆಯಲ್ಲಿ ಅತಿಯಾದ ಸ್ಟಿರಾಯಿಡ್ ಮತ್ತು ರೆಮ್ ಡಿಸಿವಿರ್ ಬಳಕೆಯಿಂದ ಬ್ಲಾಕ್ ಫಂಗಸ್ ಶುರುವಾಗಿದೆ ಎಂದು ತಜ್ಷ ವೈದ್ಯರು ಹೇಳುತ್ತಿದ್ದರು. ದ್ರವರೂಪದ ಆಮ್ಲಜನಕ ತಯಾರಿಕೆಗೆ ಶುದ್ಧಿಕರಿಸದ ಅಶುದ್ಧ ನೀರಿನ ಬಳಕೆಯಿಂದಾಗಿ ಬ್ಲಾಕ್ ಫಂಗಸ್ ಹರಡುತ್ತಿರಬಹುದು ಎಂಬ ವಾದಗಳು ಕೇಳಿ ಬಂದಿದ್ದವು.
ಈಗ ಸಚಿವರು ಹೇಳಿರುವ ಅಂಶಗಳು ಆತಂಕವನ್ನು ಹೆಚ್ಚಿಸಿವೆ. ಗಿಡ, ಮಣ್ಣುಗಳಿಂದ ದೂರ ಉಳಿದು ಪಾರಾಗುವುದು ಹೇಗೆ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮುಂದಿಟ್ಟಿದ್ದಾರೆ.